ಭೂಸ್ವಾಧೀನ ಗೊಂದಲ ನಿವಾರಿಸಿ
Team Udayavani, Dec 22, 2019, 5:23 PM IST
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಜಮೀನು ಕಳೆದುಕೊಳ್ಳುವ ರೈತರ ಸಭೆ ನಡೆಸಿ ಅವರಲ್ಲಿರುವ ಗೊಂದಲ ನಿವಾರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಕಂದಾಯಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭೂಸ್ವಾಧಿಧೀನದ ನೋಟಿಸ್ ತಲುಪುವ ಮೊದಲೇ ಕಾಮಗಾರಿ ಆರಂಭಿಸಲಾಗಿದೆ ಎಂದು ರೈತರು ಪ್ರತಿಭಟನೆ ನಡೆಸಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಸಂಗಪ್ಪ ಗಮನ ಸೆಳೆದರು. ಆ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಜಮೀನು ಕಳೆದುಕೊಳ್ಳುವ ರೈತರ ಸಭೆ ನಡೆಸಿ ಅವರಲ್ಲಿರುವ ಗೊಂದಲ ನಿವಾರಿಸಿ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಭದ್ರಾ ಮೇಲ್ದಂಡೆ ಯೋಜನೆ ಅಧಿಕಾರಿಗಳು, ಕೆಲವು ರೈತರು ಸ್ವಯಂ ಪ್ರೇರಣೆಯಿಂದ ಭೂಮಿ ಬಿಟ್ಟು ಕೊಟ್ಟಿದ್ದಾರೆ. ಜತೆಗೆ ಸರ್ಕಾರಿ ಜಮೀನುಗಳಲ್ಲಿ ಮಾತ್ರ ಭದ್ರಾ ಕೆಲಸ ನಡೆಯುತ್ತಿದೆ ಎಂದು ಸಮಜಾಯಿಷಿ ನೀಡಿದರು.
ದೊಡ್ಡಸಿದ್ದವ್ವನಹಳ್ಳಿ, ಕುಂಚಿಗನಾಳು, ದ್ಯಾಮವ್ವನಹಳ್ಳಿ ಹಾಗೂ ಗೋನೂರು ಗ್ರಾಮಗಳ ವ್ಯಾಪ್ತಿಯಲ್ಲಿ ಕಾಯ್ದಿಟ್ಟ ಅರಣ್ಯ ಪ್ರದೇಶಗಳಲ್ಲಿ ಕಾಮಗಾರಿ ಆರಂಭಿಸಲು ಸಮಸ್ಯೆಯಾಗಿದೆ ಎಂದು ಸಭೆಯ ಗಮನಕ್ಕೆ ತಂದರು. ಸಂಬಂಧಿಸಿದ ತಹಶೀಲ್ದಾರರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸಮಸ್ಯೆ ಇತ್ಯರ್ಥ ಪಡಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಾಗ ಸರ್ವೆ ನಂಬರ್ ತಪ್ಪಾಗಿ ಬರೆಯುವುದು, ಕಡತಗಳ ನಿರ್ವಹಣೆಯಲ್ಲಿ ನಿಯಮ ಪಾಲಿಸದಿರುವುದು, ಕಡತಗಳನ್ನು ಪೆಂಡಿಂಗ್ ಇಟ್ಟುಕೊಳ್ಳುವ ಅಧಿಕಾರಿಗಳ ವಿರುದ್ಧ ಸಿಡಿಮಿಡಿಗೊಂಡ ಜಿಲ್ಲಾಧಿಕಾರಿ ವಿನೋತ್ ಪ್ರಿಯಾ, ಮುಂದೆ ಹೀಗಾದರೆ ಸರ್ಕಾರಕ್ಕೆ ಬರೆಯುತ್ತೇನೆ. ಇಂತಹ ತಪ್ಪುಗಳನ್ನು ಮಾಡುವ ಅಧಿಕಾರಿಗಳ ಪಟ್ಟಿ ಮಾಡಿ ಕೊಡಿ ಎಂದರು.
ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಹೊಳಲ್ಕೆರೆಯ ಚಿಕ್ಕಜಾಜೂರು, ಎಚ್.ಡಿ. ಪುರ, ಬಿ. ದುರ್ಗ, ಹೊಸದುರ್ಗ ತಾಲೂಕಿನ ಆನಿವಾಳ, ಮತ್ತೋಡು, ಶ್ರೀರಾಂಪುರಗಳಲ್ಲಿ ಜಮೀನು ನೀಡುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಸ್ಮಶಾನ ಅಭಿವೃದ್ಧಿಗಾಗಿ ಆಯ್ದ ಇಲಾಖೆಗಳಲ್ಲಿ ಅನುದಾನ ನೀಡಲಾಗುತ್ತಿದೆ. ಸಮಾಜಕಲ್ಯಾಣ ಇಲಾಖೆಗೂ ಅನುದಾನ ಬಂದಿದ್ದು, ಸ್ಮಶಾನ ಅಭಿವೃದ್ಧಿ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ| ಕೆ.ಎಲ್ ವಿಶ್ವನಾಥ್ ಮಾತನಾಡಿ, ಜಿಲ್ಲೆಯಲ್ಲಿ ಆಯುಷ್ ಕಾಲೇಜು ನಿರ್ಮಿಸಲು 10 ಎಕರೆ ಜಮೀನು ನೀಡುವಂತೆ ಕೋರಿದರು. ಜೊತೆಗೆ ಹೋಮಿಯೋಪತಿ ಕಾಲೇಜು ನಿರ್ಮಿಸಲು ಮೊಳಕಾಲ್ಮೂರಿನಲ್ಲಿ 5 ಎಕರೆ ಭೂಮಿ ನೀಡಬೇಕು. ಹೊಸದುರ್ಗದ ದೊಡ್ಡತೇಕಲವಟ್ಟಿ ಆಯುರ್ವೇದ ಆಸ್ಪತ್ರೆಗೆ 4 ಎಕರೆ ಜಮೀನು ಪಡೆದಿದ್ದು, ಜಿಲ್ಲಾಧಿಕಾರಿಗಳಿಂದ ಅನುಮೋದನೆ
ದೊರೆಯಬೇಕಿದೆ ಎಂದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಪ್ರಸನ್ನಕುಮಾರ್, ಅಪರ ಜಿಲ್ಲಾಧಿ ಕಾರಿ ಸಂಗಪ್ಪ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.