ಚರಂಡಿ ಮೇಲೆ ಮೀನು ಮಾರಾಟ
ಬೀದಿಯಲ್ಲೇ ನಾಲವಾರ ಸಂತೆ ರಾಷ್ಟ್ರೀಯ ಹೆದ್ದಾರಿ ಮೇಲೆ ಕುಂಬಾರಳ್ಳಿ ಸಂತೆ
Team Udayavani, Dec 25, 2019, 10:45 AM IST
ಮಡಿವಾಳಪ್ಪ ಹೇರೂರ
ವಾಡಿ: ಭೀಮಾ ಮತ್ತು ಕಾಗಿಣಾ ಪ್ರಮುಖ ನದಿಗಳು ಹರಿಯುವ ಚಿತ್ತಾಪುರ ತಾಲೂಕಿನ ವಾಡಿ, ನಾಲವಾರ ವಲಯದಲ್ಲಿ ಮೀನು ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ಇಲ್ಲವಾಗಿದ್ದು, ವ್ಯಾಪಾರಿಗಳು ಬೀದಿಯನ್ನೇ ಮಾರುಕಟ್ಟೆ ಮಾಡಿಕೊಂಡು ಪರದಾಡುತ್ತಿದ್ದಾರೆ.
ಪುರಸಭೆ ಆಡಳಿತದ ಕೇಂದ್ರ ಹೊಂದಿರುವ ವಾಡಿ ಬೆಳೆಯುತ್ತಿರುವ ನಗರವಾಗಿದೆ. ಸುಮಾರು 50 ಸಾವಿರ ಜನಸಂಖ್ಯೆ ಹೊಂದಿದೆ. ಹೋಬಳಿ ಕೇಂದ್ರಸ್ಥಾನ ಹೊಂದಿರುವ ನಾಲವಾರದಲ್ಲಿ ಉಪ ತಹಶೀಲ್ದಾರ್ ಕಚೇರಿಯಿದೆ. ಇಲ್ಲಿ ಅಗತ್ಯವಸ್ತುಗಳ ಮಾರಾಟಕ್ಕಾಗಿ ಮಾರುಕಟ್ಟೆ ಕೊರತೆಯಿದೆ.
ನಾಲವಾರದ ಸಂತೆ ಬೀದಿಗಳಲ್ಲೇ ನಡೆದರೆ, ಕುಂಬಾರಹಳ್ಳಿ ಸಂತೆ ರಾಷ್ಟ್ರೀಯ ಹೆದ್ದಾರಿ-150ರ ಮೇಲೆ ನಡೆಯುತ್ತದೆ. ಗುರುವಾರಕ್ಕೊಮ್ಮೆ ನಡೆಯುವ ವಾಡಿ ಸಂತೆ ಗಲ್ಲಿ ರಸ್ತೆಗಳಲ್ಲಿ ಸಾಗುತ್ತದೆ. ತರಕಾರಿ ಸಂತೆಯಂತೆ ಮಾಂಸ ಹಾಗೂ ಮೀನು ಮಾರಾಟಕ್ಕೆ ವ್ಯಾಪಾರಿಗಳು ರಸ್ತೆಗಳನ್ನೇ ಅವಲಂಬಿಸಿದ್ದಾರೆ. ಸಿಮೆಂಟ್ ಲಾರಿಗಳ ಓಡಾಟದಿಂದ ಹಾರುವ ಧೂಳು ಮಾಂಸ, ತರಕಾರಿಗಳೊಂದಿಗೆ ಬೆರೆತು ಜನರ ಹೊಟ್ಟೆ ಸೇರುತ್ತಿದೆ. ಈ ಭಾಗದಲ್ಲಿ ಒಂದೆಡೆ ಕಾಗಿಣಾ ಹರಿಯುತ್ತಿದ್ದರೆ, ಇನ್ನೊಂದೆಡೆ ಭೀಮಾ ನದಿ ಹರಿಯುತ್ತದೆ. ಮಳಖೇಡದಿಂದ ಹರಿದು ಬರುವ ಕಾಗಿಣಾ ವಾಡಿ ಸಮೀಪದ ಕುಂದನೂರು ಬಳಿ ಭೀಮಾಗೆ ಸೇರಿಕೊಳ್ಳುತ್ತದೆ. ಕುಂದನೂರಿನಿಂದ ಚಾಮನೂರು, ಕಡಬೂರು, ಮಾರಡಗಿ, ಕೊಲ್ಲೂರು ಗ್ರಾಮಗಳನ್ನು ತಾಗಿ ಸನ್ನತಿ ವರೆಗೆ ಸಾಗುವ ಭೀಮಾನದಿ ನೀರನ್ನು ಸನ್ನತಿಯ ಬ್ರಿಡ್ಜ್ ಕಂ ಬ್ಯಾರೇಜ್ನಲ್ಲಿ ತಡೆಹಿಡಿಯಲಾಗುತ್ತಿದೆ. ಅಪಾರ ಪ್ರಮಾಣದ ಜಲದಲ್ಲಿ ಮೀನುಗಳು ಭಾರಿ ಪ್ರಮಣದಲ್ಲಿ ಆಶ್ರಯ ಪಡೆದುಕೊಂಡಿವೆ.
ಕುಂದನೂರು, ಚಾಮನೂರು, ಮಾರಡಗಿ, ಸನ್ನತಿ ಗ್ರಾಮಗಳಲ್ಲಿ ಮೀನು ದಂಧೆಯನ್ನೇ ನೆಚ್ಚಿಕೊಂಡ ನೂರಾರು ಬೆಸ್ತರು, ಗ್ರಾಮೀಣ
ಭಾಗದಿಂದ ವಾಡಿ ಪಟ್ಟಣಕ್ಕೆ ಮೀನು ತಂದು ವ್ಯಾಪಾರ ಮಾಡುತ್ತಾರೆ. ವಿಪರ್ಯಾಸವೆಂದರೆ ಕಳೆದ ಹಲವು ವರ್ಷಗಳಿಂದ ಮೀನಿನ ವ್ಯಾಪಾರ ರಸ್ತೆ ಬದಿ ಚರಂಡಿ ಮೇಲೆ ನಡೆಯುತ್ತಿದೆ. ಭೀಮಾನದಿಯಲ್ಲಿ ಬೆಸ್ತರು ಬೀಸುವ ಬಲೆಗೆ ಬೀಳುವ ನೂರಾರು ಮೀನುಗಳು ಭಾರಿ ಬೆಲೆಯಲ್ಲಿ ಮಾರಾಟವಾಗುತ್ತವೆ. ಇಲ್ಲಿ ತಾಜಾ ಮೀನುಗಳು ಸಿಗುವುದರಿಂದ ಬೆಲೆ ಹೆಚ್ಚಿದೆ. ಪಟ್ಟಣದ ಕುಂದನೂರು ಚೌಕ್ ರಸ್ತೆಯಲ್ಲಿ ಸಾಲುಗಟ್ಟಿ ಕೂಡುವ ಮೀನು ವ್ಯಾಪಾರಿಗಳಿಗೆ ಸೂಕ್ತ ಮಾರುಕಟ್ಟೆ ಅಗತ್ಯವಿದೆ. ಈ ಕುರಿತು ಕ್ರಮಕೈಗೊಳ್ಳಬೇಕಾದ ಪುರಸಭೆ ಆಡಳಿತ ನಿರ್ಲಕ್ಷ್ಯ ವಹಿಸಿದೆ.
ಅಲ್ಲದೇ ಮೀನು ಮಾರಾಟಕ್ಕೆಂದು ಬಿಡುಗಡೆಯಾಗಿದ್ದ 50ಲಕ್ಷ ರೂ. ಅನುದಾನ ಬಳಕೆ ಮಾಡಿಕೊಳ್ಳದೆ ಪುರಸಭೆ ಅಧಿಕಾರಿಗಳು ವಾಪಸ್ ಕಳಿಸಿದ್ದಾರೆ ಎನ್ನುವುದು ಮೀನು ವ್ಯಾಪಾರಿಗಳ ಆರೋಪವಾಗಿದೆ. ಅಸ್ವಚ್ಚತೆ, ಅಶುದ್ಧ ವಾತಾವರಣದಲ್ಲಿ ಮೀನು ಮಾರಾಟ ಮಾಡುತ್ತಿರುವ ಬೆಸ್ತರಿಗೆ ಸೂಕ್ತ ಮಾರುಕಟ್ಟೆ ನಿರ್ಮಿಸಿಕೊಡಲು ಪುರಸಭೆ ಆಡಳಿತ ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕಿದೆ ಎನ್ನುತ್ತಾರೆ ಮೀನು ಮಾರಾಟಗಾರರು.
ವಾಡಿ ಬೆಳೆಯುತ್ತಿರುವ ಪಟ್ಟಣವಾಗಿದ್ದು, ತರಕಾರಿ ಮಾರುಕಟ್ಟೆ ಅಗತ್ಯವಿದೆ. ಇದಕ್ಕಾಗಿ ನಗರೋತ್ಥಾನ ಪೇಜ್ 3ರ ಅಡಿ 55 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಗೂಡಂಗಡಿ ನಿರ್ಮಿಸಿಕೊಂಡಿರುವ ತರಕಾರಿ ವ್ಯಾಪಾರಿಗಳು ಜಾಗ ಖಾಲಿ ಮಾಡುತ್ತಿಲ್ಲ. ಆದ್ದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ಆದಷ್ಟು ಬೇಗ ಪಟ್ಟಣದ ಹೃದಯ ಭಾಗದಲ್ಲಿರುವ ಹಳೆ ಮಾರ್ಕೇಟ್ ಜಾಗದಲ್ಲಿ 20 ಮಳಿಗೆ ನಿರ್ಮಿಸಲಾಗುವುದು. ಈ ಮೀನು ಮಾರುಕಟ್ಟೆ ಹಾಗೂ ಖಸಾಯಿಖಾನೆ ನಿರ್ಮಿಸಲು ಜಾಗದ ಕೊರತೆಯಿದೆ.
ಸಮಸ್ಯೆಯನ್ನು ಶಾಸಕ ಪ್ರಿಯಾಂಕ್ ಖರ್ಗೆ ಗಮನಕ್ಕೆ ತರುತ್ತೇನೆ.
ವಿಠ್ಠಲ ಹಾದಿಮನಿ,
ಮುಖ್ಯಾಧಿಕಾರಿ, ಪುರಸಭೆ
ವಿವಿಧ ಗ್ರಾಮಗಳಲ್ಲಿರುವ ಮೀನುಗಾರರು ಮೀನು ವ್ಯಾಪಾರವನ್ನೇ
ನೆಚ್ಚಿಕೊಂಡಿದ್ದಾರೆ. ಭೀಮಾನದಿ, ಕಾಗಿಣಾ ನದಿ ಹಾಗೂ ನಾಲವಾರ, ಕಮರವಾಡಿ, ಕುಂಬಾರಹಳ್ಳಿ ಸೇರಿದಂತೆ ಇತರ ಐದು ಗ್ರಾಮಗಳಲ್ಲಿ ಕೆರೆಗಳಿವೆ. ಟೆಂಡರ್ ಪಡೆದು ಮೀನು ಸಾಕಾಣಿಕೆ ಮಾಡಲಾಗುತ್ತಿದೆ. ನಾಲವಾರ ಕೆರೆ ಟೆಂಡರ್ ನೀಡಲು ಅಧಿಕಾರಿಗಳು ಕಳೆದ ಎರಡು ವರ್ಷಗಳಿಂದ ಹಿಂದೇಟು ಹಾಕುತ್ತಿದ್ದಾರೆ. ಎಲ್ಲ ಭಾಗಗಳಿಂದ ಹಿಡಿಯಲಾಗುವ ಮೀನುಗಳನ್ನು ವಾಡಿ ಪಟ್ಟಣಕ್ಕೆ ತಂದು ಮಾರಾಟ ಮಾಡುತ್ತೇವೆ. ಆದರೆ ಇಲ್ಲಿ ಸೂಕ್ತ ಮಾರುಕಟ್ಟೆ ಸೌಲಭ್ಯವಿಲ್ಲದ ಕಾರಣ ಮುಖ್ಯ ರಸ್ತೆ ಆಶ್ರಯ ಪಡೆದಿದ್ದೇವೆ. ಮಾರುಕಟ್ಟೆ ನಿರ್ಮಿಸುವಂತೆ ಪುರಸಭೆ
ಅ ಧಿಕಾರಿಗಳಿಗೆ ಮನವಿ ನೀಡಿ ಸಾಕಾಗಿದೆ. ಅಧಿಕಾರಿಗಳು ಮೀನುಗಾರರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಈ ಕುರಿತು ಶಾಸಕರಿಗೆ, ಸಂಬಂಧಪಟ್ಟವರಿಗೆ ದೂರು ನೀಡುತ್ತೇನೆ.
ಭಗವಾನ್ ಕುಂದನೂರು,
ಮೀನು ಮಾರಾಟಗಾರರ ಸಂಘದ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು
Siddaramaiah ಸಿಎಂ ಆದ ಬಳಿಕ ರಾಜ್ಯಕ್ಕೆ ಬರಗಾಲ: ವಿಜಯೇಂದ್ರ
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
MUST WATCH
ಹೊಸ ಸೇರ್ಪಡೆ
Water Reserves: ಚಂದ್ರನ ಕುಳಿಯಲ್ಲಿ ಭಾರೀ ಪ್ರಮಾಣದ ಜಲ ರಾಶಿ!
Amith Shah: ಮೀಸಲು ಬಗ್ಗೆ ಸುಳ್ಳು ಹೇಳಬೇಡಿ: ಖರ್ಗೆಗೆ ಅಮಿತ್ ಶಾ ಮನವಿ
ವೇಷದ ಬಣ್ಣ ಕಳಚುವ ವೇಳೆ ಹೃದಯಾಘಾತ… ಯಕ್ಷಗಾನ ಕಲಾವಿದ ಗಂಗಾಧರ ಪುತ್ತೂರು ಇನ್ನಿಲ್ಲ
Written Statement: ಧರ್ಮಾಧಾರಿತ ಮೀಸಲು ಜಾರಿ ಮಾಡದ ಬಗ್ಗೆ ಲಿಖೀತ ಹೇಳಿಕೆ ಕೊಡಿ: ಮೋದಿ
LS Polls: ಉತ್ತರ ಪ್ರದೇಶದಲ್ಲಿ ಗಾಂಧಿ ಕುಟುಂಬದ ಸ್ಪರ್ಧೆಗೆ ಕಸರತ್ತು