ಭಾರತ ಬಂದ್: ; ಮಂಗಳೂರು ಬೆಂಗಳೂರಿನಲ್ಲಿ ಯಥಾಸ್ಥಿತಿ; ಮಡಿಕೇರಿಯಲ್ಲಿ ಬಸ್ ಗೆ ಕಲ್ಲು
Team Udayavani, Jan 8, 2020, 8:38 AM IST
ಬೆಂಗಳೂರು: ಕೇಂದ್ರ ಸರಕಾರದ ಕಾರ್ಮಿಕ ನೀತಿಯನ್ನು ವಿರೋಧಿಸಿ ದೇಶದಾದ್ಯಂತ ಇಂದು ಭಾರತ್ ಬಂದ್ ಗೆ ಕರೆನೀಡಲಾಗಿದೆ. ಕರ್ನಾಟಕದಲ್ಲೂ ಕಾರ್ಮಿಕ ಸಂಘಟನೆಗಳೂ ಬಂದ್ ಗೆ ಬೆಂಬಲ ನೀಡಿದೆ.
ಬೆಂಗಳೂರಿನಲ್ಲಿ ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಗಳು ಎಂದಿನಂತೆ ಓಡಾಡುತ್ತಿವೆ. ಆದರೆ ಬಂದ್ ಭೀತಿಯಿಂದ ಪ್ರಯಾಣಿಕರು ವಿರಳವಾಗಿದ್ದಾರೆ. ಸದಾ ಗಿಜಿಗುಟ್ಟುವ ಮೆಜಿಸ್ಟಿಕ್ ಬಸ್ ಸ್ಟ್ಯಾಂಡ್ ಕೂಡಾ ಪ್ರಯಾಣಿಕರಿಲ್ಲದೆ ಬಣಗುಟ್ಟುತ್ತಿದೆ.
ರಾಜ್ಯದ ಇತರ ಭಾಗಗಳಲ್ಲೂ ಸಾರಿಗೆ ಸಂಚಾರ, ಅಂಗಡಿ ಮುಂಗಟ್ಟುಗಳು ಎಂದಿನಂತಿದೆ. ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿ ಮುಷ್ಕರ ನಡೆಸುವ ಸಂಭವವಿದೆ. ಆದರೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಾದ ಕಾರಣ ಜನಜೀವನ ಅಸ್ತವ್ಯಸ್ತವಾಗಿಲ್ಲ.
ಶಾಲಾ ಕಾಲೇಜುಗಳಿಗೆ ಯಾವುದೇ ರಜೆ ಘೋಷಿಸದ ಕಾರಣ ಯಥಾ ಪ್ರಕಾರ ವಿದ್ಯಾರ್ಥಿಗಳು ಶಾಲಾ ಕಾಲೇಜಿನತ್ತ ಹೆಜ್ಜೆ ಹಾಕುತ್ತಿದ್ದಾರೆ.
ಮಡಿಕೇರಿಯಲ್ಲಿ ಬಸ್ ಗೆ ಕಲ್ಲು
ಮಡಿಕೇರಿಯಿಂದ ಮೈಸೂರಿಗೆ ಸಂಚರಿಸುತ್ತಿದ್ದ ಸರಕಾರಿ ಬಸ್ ಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ಮಡಿಕೇರಿಯಲ್ಲಿ ಇಂದು ಮುಂಜಾನೆ ನಡೆದಿದೆ. ದುಷ್ಕರ್ಮಿಗಳ ಈ ಕೃತ್ಯದಿಂದ ಬಸ್ ಗಾಜಿಗೆ ಹಾನಿಯಾಗಿದ್ದು, ಪುಡಿಯಾಗಿದೆ.
ಮಂಗಳೂರಿನಲ್ಲಿ ಭಾರತ್ ಬಂದ್ ಗೆನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖಾಸಗಿ ಮತ್ತು ಸರ್ಕಾರಿ ಬಸ್ ಗಳು, ಆಟೋಗಳು ಎಂದಿನಂತೆ ಓಡಾಡುತ್ತಿವೆ. ಜನಜೀವನದಲ್ಲಿ ಯಾವುದೇ ವ್ಯತ್ಯಯವಾಗಿಲ್ಲ.
ಕೇರಳದಲ್ಲಿ ಬಂದ್ ಗೆ ಬೆಂಬಲ ನೀಡಿರುವ ಕಾರಣ ಕಾಸರಗೋಡಿಗೆ ಹೋಗುವ ಬಸ್ ಗಳು ಮಂಗಳೂರಿನಲ್ಲಿಯೇ ಮೊಕ್ಕಾಂ ಹೂಡಿವೆ. ಯಾವುದೇ ಬಸ್ ಗಳು ಕೇರಳ ರಾಜ್ಯಕ್ಕೆ ಸಂಚರಿಸುತ್ತಿಲ್ಲ.