ಸಾಂಸ್ಕೃತಿಕ ಪರಂಪರೆ ಉಳಿಸಿ: ಸಿರಿಚೆನ್ನಿ
Team Udayavani, Jan 8, 2020, 12:41 PM IST
ಶಿವಮೊಗ್ಗ: ನಾವು ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳ ಕೈಗೊಂಬೆ ಆಗುತ್ತಿದ್ದೇವೆ ಎಂದು ಬಾಲ ಸಾಹಿತಿ ಕುಮಾರಿ ಸಿರಿಚೆನ್ನಿ ಹೇಳಿದರು.
ಮಂಗಳವಾರ ಇಲ್ಲಿನ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕರ್ನಾಟಕ ಜಾನಪದ ಪರಿಷತ್ತು ಜ್ಞಾನದೀಪ ಶಿಕ್ಷಣ ಸಂಸ್ಥೆ ಜಾವಳ್ಳಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಶಿವಮೊಗ್ಗ ಇವರ ಆಶ್ರಯದಲ್ಲಿ ಜ್ಞಾನದೀಪ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶಿವಮೊಗ್ಗ ಜಿಲ್ಲಾ ಹದಿಮೂರನೆ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತೆಂಗಿನಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಮಾಧ್ಯಮಗಳ ಕಪಿಮುಷ್ಠಿಯಿಂದ ಹೊರಬರಬೇಕಾಗಿದೆ. ಮಾಧ್ಯಮಗಳಿಂದ ಒಳ್ಳೆಯದನ್ನು ಕಲಿತಿದ್ದೇವೆ. ಹಾಗೆಯೇ ಅಷ್ಟೇ ಹಾದಿ ತಪ್ಪಿದ್ದೇವೆ. ಮೊದಲು ನಾವು ನಮ್ಮ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಅರ್ಥ ಮಾಡಿಕೊಂಡು ನಮ್ಮ ಬದುಕನ್ನು ರೂಪಿಸಿಕೊಳ್ಳಬೇಕಾಗಿದೆ. ಸಾಹಿತ್ಯ ನಮ್ಮನ್ನು ದೊಡ್ಡವರನ್ನಾಗಿ ಮಾಡುತ್ತದೆ. ಹಾಗಾಗಿ ಸಾಹಿತ್ಯವನ್ನು ಓದಿ ಅರ್ಥ ಮಾಡಿಕೊಳ್ಳುವ ಮೂಲಕ ಸಹಜವಾದ ಬದುಕನ್ನು ರೂಪಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.
ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿರುವ ನಮ್ಮ ಪರಿಸರವನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ದೇಶಕ್ಕೆ ಧಕ್ಕೆ ಬಂದಾಗ ನಾವು ಜಾಗೃತರಾಗಿ ದೇಶ ರಕ್ಷಣೆಗೆ ಮುಂದಾಗಬೇಕಿದೆ. ದೇಶದ ಬಗ್ಗೆ ಗೌರವ ಹೊಂದಬೇಕಾಗಿದೆ. ಭವ್ಯ ಭಾರತ ನಿರ್ಮಾಣ ಮಾಡುವ ಕಾರ್ಯ ನಮ್ಮಿಂದಾಗಬೇಕು. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕಲಿಯುವ ಹಾಗೂ ಕಲಿಸುವ ವಿಧಾನಗಳು ಬದಲಾಗಬೇಕು. ಈ ಸಂದರ್ಭದಲ್ಲಿ ನಮ್ಮ ಸರ್ಕಾರಗಳು ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಲ್ಲಿ ಮುಂದಾಗಬೇಕು. ಪೋಷಕರು, ಸಮುದಾಯ, ಶಿಕ್ಷಕರು ಹಾಗೂ ಸರ್ಕಾರಗಳು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ. ವೈಜ್ಞಾನಿಕ ಚಿಂತನೆಗಳನ್ನು ಬೆಳೆಸುವಲ್ಲಿ ಮುಂದಾಗಬೇಕಾಗಿದೆ. ಪ್ರಸ್ತುತ ದಿನಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ಅದರಲ್ಲೂ ಅತಿ ಹೆಚ್ಚಿನ ದೌರ್ಜನ್ಯಗಳನ್ನು ಅನುಭವಿಸುತ್ತಿರುವವರು ಮಕ್ಕಳಾಗಿದ್ದಾರೆ. ಸಾಹಿತ್ಯ, ಸಾಂಸ್ಕೃತಿಕ ಮನಸ್ಸುಗಳನ್ನು ಕಟ್ಟುವಲ್ಲಿ ಮಕ್ಕಳ ಪಾತ್ರ ಸಾಕಷ್ಟಿದೆ ಎಂದರು.
ಶಿವಮೊಗ್ಗ ಜಿಲ್ಲಾ ಹದಿಮೂರನೆ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಹೊಸನಗರ ಮಲೆನಾಡು ಪ್ರೌಢಶಾಲೆಯ ವಿದ್ಯಾರ್ಥಿ ಕುಮಾರಿ ರಕ್ಷತಾ ಎಸ್.ಕೆ. ಮಾತನಾಡಿ ಸಾಹಿತ್ಯ, ಸಾಂಸ್ಕೃತಿಕ, ಕ್ರೀಡೆ, ರಾಜಕೀಯ ಹಾಗೂ ಐತಿಹಾಸಿಕವಾಗಿ ಶಿವಮೊಗ್ಗ ಜಿಲ್ಲೆ ನಾಡಿಗೆ ವಿಶೇಷವಾದ ಕೊಡುಗೆಯನ್ನು ನೀಡಿದೆ. ಅತಿ ಹೆಚ್ಚಿನ ಸಾಹಿತಿ, ಕಲಾವಿದರು, ಚಿಂತಕರು ಇರುವುದು ನಮ್ಮ ಜಿಲ್ಲೆಯಲ್ಲಿ. ಹಾಗಾಗಿ ರಾಜ್ಯ ಮಾತ್ರವಲ್ಲ ರಾಷ್ಟ್ರದಲ್ಲಿಯೇ ಶಿವಮೊಗ್ಗಕ್ಕೆ ತನ್ನದೇ ಆದ ಸ್ಥಾನವಿದೆ. ಅದರಲ್ಲೂ ಮಕ್ಕಳ ಸಾಹಿತ್ಯಕ್ಕೆ ಜಿಲ್ಲೆಯ ಕೊಡುಗೆ ಅಪಾರವಾಗಿದೆ. ಜಿಲ್ಲೆಯ ಬಗ್ಗೆ ಎಷ್ಟು ಹೇಳಿದರೂ ಸುಂದರವಾದ ಪರಿಸರಕ್ಕೆ ಹೆಸರಾದ ಶಿವಮೊಗ್ಗ ಜಿಲ್ಲೆ ತನ್ನ ಹಸಿರಿನಿಂದ ದೂರ ಸರಿಯುತ್ತಿರುವುದು ನೋವಿನ ಸಂಗತಿಯಾಗಿದೆ. ಇದಕ್ಕೆ ನಾವೇ ಕಾರಣವಾಗಿದ್ದೇವೆ. ಸ್ವಾರ್ಥಕ್ಕಾಗಿ ನಮ್ಮ ಪರಿಸರವನ್ನು ನಾವೇ ಹಾಳು ಮಾಡಿಕೊಳ್ಳುತ್ತಿರುವುದು ದುರಂತದ ಸಂಗತಿಯಾಗಿದೆ. ಪರಿಸರವನ್ನು ಉಳಿಸಿ ಬೆಳಸುವಲ್ಲಿ ನಮ್ಮೆಲ್ಲರ ಹೊಣೆಗಾರಿಕೆ ಇದೆ. ಪರಸರವು ಬದುಕಿಗೆ ಪೂರಕವಾಗಿದ್ದು ಸಾಹಿತ್ಯಕವಾಗಿ ಬೆಳೆಯಲು ಪರಿಸರ ಬಹುಮುಖ್ಯವಾಗಿದೆ. ಹಾಗಾಗಿ ಪರಿಸರದ ಕಾಳಜಿ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಬೇಕಿದೆ. ಜನರು ಎಚ್ಚೆತ್ತುಕೊಳ್ಳಬೇಕಿದೆ. ಸರ್ಕಾರಗಳು ಪರಿಸರ ರಕ್ಷಣೆಗೆ ಮುಂದಾಗಬೇಕಿದೆ ಎಂದರು.
ಪ್ರತಿಭೆಯೂ ಪ್ರತಿಯೊಬ್ಬರಲ್ಲೂ ಇರುತ್ತದೆ. ಕವಿ ಹೃದಯದಿಂದ ಮಾತ್ರ ಸಹೃದಯ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ಆಧುನಿಕತೆಗೆ ನಾವು ಬಲಿಯಾಗುತ್ತಿದ್ದೇವೆ. ಪುಸ್ತಕ ಓದುವ ಸಂಸ್ಕೃತಿ ದೂರವಾಗುತ್ತಿದೆ. ಯಾರು ಪುಸ್ತಕವನ್ನು ತಲೆ ತಗ್ಗಿಸಿ ಓದುತ್ತಾರೋ ಅವರನ್ನು ಸಮಾಜದಲ್ಲಿ ತಲೆ ಎತ್ತುವಂತೆ ಮಾಡುತ್ತದೆ ಎನ್ನುವುದನ್ನು ನಾವು ಮರೆತಿದ್ದೇವೆ. ಕನ್ನಡ ನಾಡಿನಲ್ಲಿ ಓದುವ ಶಾಲೆಗಳಲ್ಲಿ ದಂಡ ಹಾಕುವಂತಹ ದುರ್ದೈವ ಬಂದಿರುವುದು ವಿಷಾದದ ಸಂಗತಿಯಾಗಿದೆ.
ನಮ್ಮ ಕನ್ನಡ ನಾಡಿನಲ್ಲಿಯೇ ಹೀಗೆ ಆದರೆ ಕನ್ನಡ ಉಳಿಯುವುದೆಲ್ಲಿ ಎನ್ನುವ ಆತಂಕ ನಮ್ಮನ್ನು ಕಾಡುತ್ತಿದೆ. ಹೀಗಾದರೆ ನಮ್ಮ ಕನ್ನಡವನ್ನು ಉಳಿಸಿ ಬೆಳೆಸುವವರು ಯಾರು ಎಂದವರು ಪ್ರಶ್ನಿಸಿದರು.
ಕನ್ನಡ ನಾಡಿನಲ್ಲಿ ಕನ್ನಡ ಓದುವುದು ನಮ್ಮೆಲ್ಲರ ಹಕ್ಕಾಗಿದೆ. ಸರ್ಕಾರ ಕನ್ನಡ ಉಳಿಸುವಲ್ಲಿ ಪ್ರಮುಖವಾದ ಪಾತ್ರ ವಹಿಸಬೇಕಿದೆ. ಕನ್ನಡ ನಾಡಿನಲ್ಲಿ ತಲೆ ಎತ್ತಿದ ಯಾವುದೇ ಶಾಲೆಯಲ್ಲಿ ಕನ್ನಡ ಮೊದಲ ಪಠ್ಯವಾಗಬೇಕು. ಮಾತೃಭಾಷೆ ಮಾತ್ರ ಮಾತೃತ್ವವನ್ನು ಉಳಿಸಲು ಸಾಧ್ಯವಾಗುತ್ತದೆ. ಕನ್ನಡ ಅದೊಂದು ಭಾಷೆಯಲ್ಲ. ಅದೊಂದು ಸಂಸ್ಕೃತಿ, ಅದೊಂದು ಪರಂಪರೆ, ಅದೊಂದು ಜೀವನ ಕ್ರಮ. ಇಂತಹ ಕನ್ನಡ ಭಾಷಾ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರ ಪಾತ್ರ ಇದೆ ಎಂದರು.
ಕನ್ನಡ ಸಾಹಿತ್ಯಕ್ಕೆ ತನ್ನದೇ ಆದ ಶ್ರೀಮಂತಿಕೆ ಇದೆ. ಸಾಹಿತ್ಯದಿಂದ ಮಾತ್ರ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ. ಅದರಲ್ಲೂ ಕನ್ನಡ ಸಾಹಿತ್ಯಕ್ಕಿರುವ ಹಿರಿಮೆ ಬೇರಾವ ಭಾಷೆಗಳಿಗೂ ಇಲ್ಲ. ಅಂತಹ ಅಪರೂಪದ ಭಾಷಾ ಮಹತ್ವ ನಮ್ಮ ಕನ್ನಡಕ್ಕಿದೆ. ಎಲ್ಲರನ್ನೂ ಒಂದು ಮಾಡುವ ಶಕ್ತಿ ಸಾಹಿತ್ಯಕ್ಕಿದೆ. ನಾವು ಇಂದು ಮಾಹಿತಿ ಯುಗ ಹಾಗೂ ಜ್ಞಾನಯುಗದಲ್ಲಿದ್ದೇವೆ. ಇಂದಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ ನಮ್ಮ ಯುವಕ- ಯುವತಿಯರು ಅನೇಕ ದುಷ್ಪರಿಣಾಮಗಳಿಗೆ ಒಳಗಾಗಿದ್ದಾರೆ. ಬಹುಮಾಧ್ಯಮಗಳ ಹಾವಳಿಯಿಂದಾಗಿ ನಮ್ಮ ಸಮಯ, ಕ್ರಿಯಾಶೀಲತೆ, ಕಲ್ಪನಾಶಕ್ತಿಗಳನ್ನು ಮಾಧ್ಯಮಗಳು ಕಸಿದುಕೊಂಡಿವೆ. ನಮ್ಮ ಆದುನಿಕತೆಯಿಂದಾಗಿ ಮನುಷ್ಯ ಸಂಬಂಧಗಳನ್ನೇ ಕಳೆದುಕೊಂಡಿದ್ದೇವೆ.ನಮ್ಮ ಸಂವಿಧಾನ ನಮಗೆ ಎಲ್ಲಾ ಹಕ್ಕು ಹಾಗೂ ಕರ್ತವ್ಯಗಳನ್ನು ನೀಡಿದೆ. ಅಂತಹ ಸಂವಿಧಾನದವನ್ನು ತಿರುಚುವ ಕಾರ್ಯಕ್ಕೆ ಮುಂದಾಗುತ್ತಿರುವುದು ವಿ‚ಷಾದನಿಯ ಸಂಗತಿ. ಇರುವ ಸಂವಿದಾನವನ್ನೇ ಬಲಪಡಿಸುವ ಕಾರ್ಯ ಆಗಬೇಕಿದೆ. ಮಕ್ಕಳಿಗೆ ತನ್ನದೇ ಆದ ಹಕ್ಕುಗಳಿವೆ ಅಂತಹ ಹಕ್ಕುಗಳನ್ನು ಕಸಿದುಕೊಳ್ಳುವ ಕೆಲಸವಾಗುತ್ತಿದೆ. ಮಕ್ಕಳಲ್ಲಿ ಸಾಕಷ್ಟು ಪ್ರತಿಭಾವಂತರಿದ್ದು ಅಂತಹ ಪ್ರತಿಭೆಗಳನ್ನು ಬೆಳೆಸುವಲ್ಲಿ ಇಂತಹ ಸಂಘ-ಸಂಸ್ಥೆಗಳು ಮುಂದಾಗಬೇಕಿದೆ. ಗ್ರಾಮೀಣ ಪ್ರದೇಶಗಳ ಪ್ರತಿಭೆಗಳಿಗೆ ವಿಶೇಷವಾದ ಆದ್ಯತೆ ನೀಡಬೇಕು ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಜಿಲ್ಲಾಧ್ಯಕ್ಷ ಡಿ. ಮಂಜುನಾಥ ಪ್ರಾಸ್ತಾವಿಕವಾಗಿ ಮಾತನಾಡಿ, ನಾವು ಬೆಳೆಸಬೇಕಾದ ಮಕ್ಕಳ ಮನಸ್ಸುಗಳನ್ನು ನಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದೇವೆ. ನಾವು ಬರಿ ದೊಡ್ಡವರನ್ನು ದೊಡ್ಡವರನ್ನಾಗಿ ಮಾಡುವುದಲ್ಲ. ಮಕ್ಕಳನ್ನು ದೊಡ್ಡವರನ್ನಾಗಿ ಮಾಡಬೇಕಿದೆ. ಮಕ್ಕಳಲ್ಲಿ ಉತ್ತಮವಾದ ಸಾಂಸ್ಕೃತಿಕ ಚಿಂತನೆಗಳು ಬೆಳೆಸಬೇಕಾಗಿದೆ. ಮಕ್ಕಳ ಮನಸ್ಸನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅವರಲ್ಲಿ ಸೃಜನಶೀಲತೆ ಬೆಳೆಸುವಲ್ಲಿ ನಾವೆಲ್ಲರೂ ಸಾಮೂಹಿಕವಾಗಿ ಮುಂದಾಗಬೇಕಿದೆ ಎಂದರು.
ಜ್ಞಾನದೀಪ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿ. ದೇವೇಂದ್ರ ಶಾಸ್ತ್ರಿಗಳು ಧ್ವಜಾರೋಹಣ ನೆರವೇರಿಸಿ ಸಮ್ಮೇಳನ ಸರ್ವಾಧ್ಯಕ್ಷೆ ರಕ್ಷಿತಾ ಎಸ್.ಕೆ. ಅವರ “ಮಲೆನಾಡು ಕುಸುಮ’ ಕವನ ಸಂಕಲನವನ್ನು ಬಿಡುಗಡೆಗೊಳಿಸಿದರು. ರಾಮಕೃಷ್ಣ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಶೋಭಾ ವೆಂಕಟರಮಣ, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಭದ್ರಾವತಿ ಶಾಖೆಯ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ, ಸಾಗರದ ಪರಮೇಶ್ವರ ಕರೂರು, ರಿಪ್ಪನ್ಪೇಟೆಯ ಮಂಜುನಾಥ ಕಾಮತ್, ಕರ್ನಾಟಕ ಜಾನಪದ ಪರಿಷತ್ತು ಸಾಗರ ಶಾಖೆಯ ಅಧ್ಯಕ್ಷ ವಿ.ಟಿ. ಸ್ವಾಮಿ ಶಿಕಾರಿಪುರ ಘಟಕದ ಬಿ. ಪಾಪಯ್ಯ, ಸಾಗರ ತಾಲೂಕು ಮಕ್ಕಳ ಸಮ್ಮೇಳನ ಅಧ್ಯಕ್ಷೆ ಸ್ಫೂರ್ತಿ ವೈ.ಎಚ್., ಭದ್ರಾವತಿಯ ಆರ್. ವೀಣಾ, ಪ್ರಾಂಶುಪಾಲ ಶ್ರೀಕಾಂತ ಹೆಗಡೆ, ಉಪಪ್ರಾಚಾರ್ಯ ಡಾ| ರಿಜಿ ಜೋಸೆಫ್, ಮುಖ್ಯೋಪಾಧ್ಯಾಯಿನಿ ವಾಣಿ ಕೃಷ್ಣಪ್ರಸಾದ್ ಮತ್ತಿತರರು ಇದ್ದರು. ಜ್ಞಾನದೀಪ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳ ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು.
ಶ್ರೀಕಾಂತ ಗೋಸಾವಿ ಸ್ವಾಗತಿಸಿದರು. ಪ್ರಕಾಶ್ ಬಣಕಾರ್ ವಂದಿಸಿದರು. ಮಲ್ಲಿಕಾರ್ಜುನ ತುರವನೂರು ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kerala ವಯನಾಡಲ್ಲಿ ರಾಹುಲ್ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ ವ್ಯಂಗ್ಯ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು