ಅಮಿತ್ ಶಾ ಆಗಮನ: ಸಂಚಾರ ದಟ್ಟಣೆ
Team Udayavani, Jan 19, 2020, 3:07 AM IST
ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ ಹಿನ್ನೆಲೆಯಲ್ಲಿ ನಗರದ ಬಹುತೇಕ ಪ್ರದೇಶಗಳಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು. ಇದೇ ಮೊದಲ ಬಾರಿಗೆ ಕೇಂದ್ರ ಸಚಿವರು ಸಂಚರಿಸುವ ಎಲ್ಲ ಮಾರ್ಗಗಳ ಅಕ್ಕ-ಪಕ್ಕದ ರಸ್ತೆಗಳು, ಜಂಕ್ಷನ್ಗಳಲ್ಲಿ ಟೇಪ್ ಹಾಕಿ, ಹೆಚ್ಚುವರಿ ಸಂಚಾರ ಸಿಬ್ಬಂದಿ ನಿಯೋಜಿಸಲಾಗಿತ್ತು.
ಅಪರಾಹ್ನ 12 ಗಂಟೆಯಿಂದಲೇ ಎಚ್ಎಎಲ್ನಿಂದ ಸಚಿವರು ಸಂಚರಿಸಿದ ಎಲ್ಲ ಮಾರ್ಗಗಳಲ್ಲಿ ಸಂಚಾರ ನಿರ್ಬಂಧಿಸಲಾಗಿತ್ತು. ಅಪರಾಹ್ನ 12.15ರ ಸುಮಾ ರಿಗೆ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಮುಗಿಸಿದ ಅಮಿತ್ ಶಾ, ಬಳಿಕ ಜಯನಗರ ತೆರಳಿದರು. ಅನಂತರ ಕತ್ರಿಗುಪ್ಪೆಯ ವಿದ್ಯಾಪೀಠಗೆ ಭೇಟಿ ನೀಡಿ ದರು. ಈ ಎಲ್ಲ ಮಾರ್ಗಗಳಲ್ಲಿ ನಿರೀಕ್ಷೆಗೂ ಮೀರಿದ ಸಂಚಾರ ದಟ್ಟಣೆಯನ್ನು ಪ್ರಯಾಣಿಕರು ಎದುರಿಸಬೇಕಾಯಿತು.
ಎಲ್ಲೆಲ್ಲಿ ಸಂಚಾರ ದಟ್ಟಣೆ?: ಕಾರ್ಪೊ ರೇಷನ್, ಜಯನಗರ, ಬಿಟಿಎಂ ಲೇಔಟ್, ಪುರಭವನ ರಸ್ತೆ, ಸಿಟಿ ಮಾರುಕಟ್ಟೆ, ಚಾಲುಕ್ಯ ವೃತ್ತ, ಶಿವಾನಂದ ವೃತ್ತ, ವಿಧಾನ ಸೌಧ, ಕೆ.ಆರ್.ವೃತ್ತ, ಮೆಜೆಸ್ಟಿಕ್ ಸುತ್ತ-ಮುತ್ತ, ಓಕಳೀಪುರ, ಹಳೇ ಮದ್ರಾಸ್, ಟ್ರಿನಿಟಿ ರಸ್ತೆ, ರಾಜಭವನ ರಸ್ತೆ, ಸ್ಯಾಂಕಿ ರಸ್ತೆ, ಜಯ ಮಹಲ್ ರಸ್ತೆ, ವಿಧಾನಸೌಧ, ಕ್ವೀನ್ಸ್ ರಸ್ತೆ, ಬಸವನಗುಡಿ, ಕತ್ರಿಗುಪ್ಪೆ ವಿದ್ಯಾಪೀಠ ಸೇರಿ ಹಲವೆಡೆ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು.
ಇದೇ ಮೊದಲು: ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಜಾರಿ ಬೆನ್ನಲ್ಲೇ ರಾಜ್ಯದಲ್ಲಿ ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿ ರುವ ಹಿನ್ನೆಲೆಯಲ್ಲಿ ಸಾಕಷ್ಟು ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಕೇಂದ್ರ ಸಚಿವರು ಹಾದು ಹೋಗುವ ಮಾರ್ಗದಲ್ಲಿ ಸಂಚಾರ ಪೊಲೀಸರು ಹೆಚ್ಚಿನ ನಿಗಾವಹಿಸಬೇಕು. ಪ್ರತಿ ರಸ್ತೆಯಲ್ಲಿ ಸಂಪೂರ್ಣ ವಾಹನ ಮತ್ತು ಪಾದಚಾರಿ ಮಾರ್ಗವನ್ನು ನಿರ್ಬಂಧಿಸಬೇಕು ಎಂದು ಸೂಚಿಸಲಾಗಿತ್ತು. ಹೀಗಾಗಿ, ಮೊದಲ ಬಾರಿಗೆ ರಸ್ತೆ, ಜಂಕ್ಷನ್ಗಳಲ್ಲಿ ಟೇಪ್ಗಳನ್ನು ಹಾಕಿ ಸಂಚಾರ ನಿರ್ಬಂಧಿಸಲಾಗಿತ್ತು.
ಸಂಚಾರ ಪೊಲೀಸರ ಜತೆ ವಾಗ್ವಾದ: ಚಾಲುಕ್ಯ ವೃತ್ತದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಸಂಚಾರ ನಿರ್ಬಂಧಿಸಿದ ಪರಿಣಾಮ ಆಕ್ರೋಶಗೊಂಡ ವಾಹನ ಸವಾರರು ಸಂಚಾರ ಪೊಲೀಸರು ಜತೆ ವಾಗ್ವಾದ ನಡೆಸಿದ ಘಟನೆಯೂ ನಡೆಯಿತು. ಪೊಲೀಸರು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ದೂರಿದರು.
ಕ್ರಿಕೆಟ್ ಪಂದ್ಯ ಸಂಚಾರ ನಿರ್ಬಂಧ: ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಏಕದಿನ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿ ರುವ ಹಿನ್ನೆಲೆಯಲ್ಲಿ ಕ್ರೀಡಾಂಗಣದ ಸುತ್ತ-ಮುತ್ತಲಿನ ರಸ್ತೆಗಳಲ್ಲಿ ಸಂಚಾರ ನಿರ್ಬಂಧನೆ ಮಾಡಲಾಗಿದೆ. ಸೆಂಟ್ರಲ್ ಸ್ಟ್ರೀಟ್ ರಸ್ತೆಯಲ್ಲಿ ರಸ್ತೆಯ ಎರಡೂ ಕಡೆ, ಕಬ್ಬನ್ ರಸ್ತೆಯಲ್ಲಿ ಸಿಟಿಒ ವೃತ್ತದಿಂದ ಡಿಕೆನ್ಸ್ನ್ ರಸ್ತೆ ಜಂಕ್ಷನ್ವರೆಗೆ ರಸ್ತೆಯ ಎರಡೂ ಕಡೆ ಹಾಗೂ ಕ್ವೀನ್ಸ್ವೃತ್ತದಿಂದ ಹಡ್ಸನ್ ವೃತ್ತದ ವರೆಗೆ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 11.30ರ ವರೆಗೆ ಎಲ್ಲ ಮಾದರಿಯ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.
ಆಟೋ ಸಂಚಾರ ನಿಷೇಧ: ಕ್ವೀನ್ಸ್ ರಸ್ತೆಯ ಟ್ರಾಫಿಕ್ ಹೆಡ್ಕಾರ್ಟರ್ ಜಂಕ್ಷನ್ನಿಂದ ಕ್ವೀನ್ಸ್ ವೃತ್ತದವರೆಗೆ (ರಸ್ತೆಯ ಎರಡೂ ಬದಿ), ಬಿ.ಆರ್.ವಿ. ಜಂಕ್ಷನ್ನಿಂದ ಸಿಟಿಒ ವೃತ್ತದ ವರೆಗೆ (ರಸ್ತೆಯ ಎರಡೂ ಬದಿ), ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಮ.12 ರಿಂದ ರಾತ್ರಿ 11.30ರ ವರೆಗೆ ಆಟೋ ರಿಕ್ಷಾ ಸಂಚಾರ ನಿಷೇಧಿಸಲಾಗಿದೆ.
ವಾಹನ ನಿಲುಗಡೆ: ಮಲ್ಯ ಆಸ್ಪತ್ರೆ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ, ಸೆಂಟ್ ಜೋಸೆಫ್ ಬಾಲಕರ ಶಾಲೆ ಮ್ಯೂಸಿಯಂ ರಸ್ತೆ, ಶಿವಾಜಿನಗರ ಬಸ್ ನಿಲ್ದಾ ಣದ 1ನೇ ಮಹಡಿಯಲ್ಲಿ ಪಂದ್ಯ ವೀಕ್ಷಣೆಗೆ ಬರುವ ಸಾರ್ವ ಜನಿಕರು ವಾಹನ ನಿಲುಗಡೆ ಮಾಡಬಹುದು. ಎಂ.ಜಿ. ರಸ್ತೆಯಲ್ಲಿರುವ ಫ್ರೀಪೇಯ್ಡ ಆಟೋ ನಿಲ್ದಾಣ ಬಳಸಲು ಮನವಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.