ಸಂವಿಧಾನ ರಕ್ಷಣೆ ಸವಾಲು: ಮಲ್ಲಿಕಾರ್ಜುನ ಖರ್ಗೆ
Team Udayavani, Jan 27, 2020, 3:05 AM IST
ಬೆಂಗಳೂರು: ಸಂವಿಧಾನ ಬದಲಾಯಿಸಲು ಬಿಜೆಪಿ- ಸಂಘ ಪರಿವಾರ ಯಾವ ರೀತಿಯ ಯೋಜನೆ ಹಾಕಿ ಕೊಂಡಿವೆ. ಏನು ತಂತ್ರ ರೂಪಿಸಿವೆ ಎಂಬುದನ್ನು ಪತ್ತೆ ಮಾಡಿ, ಸಂವಿಧಾನ ರಕ್ಷಣೆ ಮಾಡುವುದು ನಮ್ಮೆಲ್ಲರ ಮುಂದಿರುವ ಸವಾಲು ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಧರ್ಮದ ರಾಜಕೀಯ ಮೂಲಕ ಸಂವಿಧಾನ ತೆಗೆದು, ಆ ಮೂಲಕ ಬಡವರಿಗೆ, ದಲಿತರಿಗೆ ರಕ್ಷಣೆ ಸಿಗುತ್ತಿದ್ದ ಸಂವಿಧಾನ ಬದಲಾಯಿಸಬೇಕು ಎಂದು ಆರ್ಎಸ್ಎಸ್ ಪ್ರಯತ್ನಿಸುತ್ತಿದೆ. ಸಂವಿಧಾನದ ರಕ್ಷಣೆಗೆ ನಾವು ಒಗ್ಗಟ್ಟಿನಿಂದ ಹೋರಾಟ ಮಾಡಬೇಕು. ಎಲ್ಲಾ ಎನ್ಜಿಒ, ಸಂಘಟನೆಗಳು ಸಂವಿಧಾನದ ರಕ್ಷಣೆಗೆ ಒಂದಾಗಬೇಕು. ಸಿಎಎ, ಎನ್ಆರ್ಸಿ ಹೋರಾಟ ಹಿಂಸಾತ್ಮಕಗೊಳಿಸಿದ್ದಾರೆ.
ಬಿಜೆಪಿ ಸಂಘ ಪರಿವಾರದವರು ಸಮಾಜ ವಿಭಜನೆಗೆ ಮನೆ ಮನೆಗೆ ತೆರಳಿ ಪೌರತ್ವ ತಿದ್ದುಪಡಿ ಪರ ಪ್ರಚಾರ ಮಾಡುತ್ತಿದ್ದಾರೆ. ಗುಡ್ಡಗಾಡಿನಲ್ಲಿ ಇರುವ ಜನರಿಗೆ ದಾಖಲೆಗಳು ಇರುವುದಿಲ್ಲ. ಅವರಲ್ಲಿ ಕುಂಡಲಿ ಜಾತಕ ಬರೆಯುವುದಕ್ಕೆ ಯಾರೂ ಇರುವುದಿಲ್ಲ. ಹೀಗಿದ್ದ ಮೇಲೆ ಬುಡಕಟ್ಟು ಜನರು, ಅಲೆಮಾರಿಗಳು ದಾಖಲೆಗಳನ್ನು ಎಲ್ಲಿಂದ ತರುತ್ತಾರೆ? ಸಾಮಾನ್ಯ ಜನರಿಗೆ ತೊಂದರೆ ಕೊಡುವದಕ್ಕಾಗಿಯೇ ಕೇಂದ್ರ ಸರ್ಕಾರ ಸಿಎಎ ಕಾಯ್ದೆ ಜಾರಿ ಮಾಡುತ್ತಿದೆ.
ಬಡವರು, ದಲಿತರು, ಹಿಂದುಳಿದ ವರ್ಗಗಳ ಜನರಿಗೆ ತೊಂದರೆ ಕೊಡಬೇಕು ಎಂಬ ದುರುದ್ದೇಶ ಅವರದ್ದಾಗಿದೆ. ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ ಎಂದು ಕೇಂದ್ರದ ಆರ್ಥಿಕ ತಜ್ಞರೇ ಸ್ಪಷ್ಟಪಡಿಸಿದ್ದಾರೆ. ನೊಬೆಲ್ ಪ್ರಶಸ್ತಿ ಪಡೆದ ತಜ್ಞರೇ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಹೇಳಿದ ಮೇಲೂ ಬಿಜೆಪಿ ನಾಯಕರು ಅದನ್ನು ಸುಳ್ಳು ಎಂದು ಪ್ರತಿಪಾದಿಸುತ್ತಿದ್ದಾರೆ. ಕೇಂದ್ರದ ಜನವಿರೋಧಿ ನೀತಿಗಳ ವಿರುದ್ಧ ದೇಶದ ಜನರೇ ರೊಚ್ಚಿಗೆದ್ದಿದ್ದಾರೆ ಎಂದರು.