ಜಮ್ಮು-ಕಾಶ್ಮೀರ: ಭದ್ರತಾ ಪಡೆಯ ಎನ್ ಕೌಂಟರ್ ಗೆ ಮೂವರು ಉಗ್ರರ ಸಾವು
ಉಗ್ರರು ಅನ್ಸಾರ್ ಉಲ್ ಘಜಾವತ್ ಉಲ್ ಹಿಂದ್ ಸಂಘಟನೆಯ ಸಹಭಾಗಿತ್ವ ಹೊಂದಿದೆ.
Team Udayavani, Feb 19, 2020, 11:57 AM IST
ನವದೆಹಲಿ: ಭದ್ರತಾ ಪಡೆಯ ಜಂಟಿ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಿರುವ ಘಟನೆ ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ತ್ರಾಲ್ ನಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಮಂಗಳವಾರ ಸಂಜೆ ತ್ರಾಲ್ ಪ್ರದೇಶದಲ್ಲಿ ಉಗ್ರರು ಅಡಗಿದ್ದಾರೆಂಬ ಮಾಹಿತಿ ಮೇರೆಗೆ 42ನೇ ರಾಷ್ಟ್ರೀಯ ರೈಫಲ್ಸ್, ಸೆಂಟ್ರಲ್ ರಿಸರ್ವ್ ಪೊಲೀಸ್ ಪೋರ್ಸ್ ನ 180ನೇ ಬೆಟಾಲಿಯನ್ ಮತ್ತು ಜಮ್ಮು ಕಾಶ್ಮೀರ ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸಿದ್ದರು.
ಈ ಸಂದರ್ಭದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ನಂತರ ಭದ್ರತಾ ಪಡೆಯ ಪ್ರತಿದಾಳಿಗೆ ಮೂವರು ಉಗ್ರರು ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.
ಉಗ್ರರು ಅನ್ಸಾರ್ ಉಲ್ ಘಜಾವತ್ ಉಲ್ ಹಿಂದ್ ಸಂಘಟನೆಯ ಸಹಭಾಗಿತ್ವ ಹೊಂದಿದೆ. ಮೃತರನ್ನು ಜಹಾಂಗೀರ್ ಅಹ್ಮದ್ ವಾನಿ, ರಾಜು ಉಮರ್ ಮತ್ತು ಉಝೈರ್ ಅಮಿನ್ ಬಟ್ ಎಂದು ಗುರುತಿಸಲಾಗಿದೆ.
ಉಗ್ರರ ಬಳಿ ಇದ್ದ ಎಕೆ 47, ಎಕೆ 56 ಹಾಗೂ ಪಿಸ್ತೂಲ್, ಹ್ಯಾಂಡ್ ಗ್ರೆನೇಡ್ಸ್ ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.