ಶ್ರೀ ಪಂಚಲಿಂಗೇಶ್ವರಮಹಾರಥೋತ್ಸವ
Team Udayavani, Feb 24, 2020, 1:02 PM IST
ಮುನವಳ್ಳಿ: ಪಟ್ಟಣದ ಆರಾಧ್ಯ ದೈವ ಶ್ರೀ ಪಂಚಲಿಂಗೇಶ್ವರ ಮಹಾರಥೋತ್ಸವ ರವಿವಾರ ಸಂಜೆ ಸಂಭ್ರಮದಿಂದ ನಡೆಯಿತು. ಶ್ರೀ ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು ರಥಕ್ಕೆ ಪೂಜೆ ಸಲ್ಲಿಸಿ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು.
ಭಕ್ತರು ಬಾಳೆಹಣ್ಣು, ಉತ್ತತ್ತಿ ರಥಕ್ಕೆ ಹಾರಿಸಿ ಭಕ್ತಿಭಾವ ಸಮರ್ಪಿಸಿದರು. ಹರಹರ ಮಹಾದೇವ, ಓಂ ನಮಃ ಶಿವಾಯ, ಪಂಚಲಿಂಗೇಶ್ವರ ಮಹಾರಾಜ್ ಕೀ ಜೈ ಎಂಬ ಘೋಷಣೆ ಕೂಗಿದರು. ವಿವಿಧ ಮಂಗಲ ವಾದ್ಯ ವೈಭವಗಳು, ವೀರ ಪುರವಂತರ ಒಡಪುಗಳು ಹಾಗೂ ನೂರಾರು ಮೀಟರ್ ಉದ್ದದ ದಾರದೊಂದಿಗೆ ಪುರವಂತರು ಹಾಗೂ ಭಕ್ತರು ನಾಲಿಗೆಗೆ ಹಾಗೂ ಕೆನ್ನೆಗೆ ಶಸ್ತ್ರ ಚುಚ್ಚಿಕೊಳ್ಳುವ ದೃಶ್ಯಗಳು ಗಮನ ಸೆಳೆದವು.
ರಥೋತ್ಸವಕ್ಕೂ ಮೊದಲು ಬಣಗಾರ ಓಣಿಯಿಂದ ನಂದಿಕೋಲುಗಳು ಪೂಜೆಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಪಂಚಲಿಂಗೇಶ್ವರ ದೇವಸ್ಥಾನ ತಲುಪಿದವು. ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ, ಜಾತ್ರಾ ಉತ್ಸವ ಕಮಿಟಿ ಸದಸ್ಯರು, ಭಕ್ತರು ಪಾಲ್ಗೊಂಡಿದ್ದರು. ದೇವಸ್ಥಾನದ ಸಮುತ್ಛಯದಲ್ಲಿರುವ ಮೂರು ಲಿಂಗ ದೇವರಿಗೆ ಬುತ್ತಿಪೂಜೆ ಕಟ್ಟಲಾಗಿತ್ತು. ಶ್ರೀ ಮಲ್ಲಿಕಾರ್ಜುನ, ಶ್ರೀ ಬೊರಮ್ಮ, ಶ್ರೀ ತ್ರಂಬಕೇಶ್ವರ, ಶ್ರೀ ಬನಶಂಕರಿ, ನಾಗದೇವತೆ, ರುದ್ರಮುನೀಶ್ವರ, ಶ್ರೀ ರೇಣುಕಾ, ಶ್ರೀ ಕಾಲಭೈರವ ದೇವರಿಗೆ ರುದ್ರಾಭಿಷೇಕ, ಅಲಂಕಾರ ಪೂಜೆ ನೆರವೇರಿಸಲಾಗಿತ್ತು.