ಆರೋಗ್ಯ ವಿವಿಯಲ್ಲಿ 25 ಹೊಸ ಕೋರ್ಸ್
Team Udayavani, Feb 25, 2020, 3:07 AM IST
ಬೆಂಗಳೂರು: ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸದಾಗಿ 25 ಕೋರ್ಸ್ಗಳನ್ನು ಆರಂಭಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.
ಜಯನಗರದ ಆರ್ಜಿಯುಎಚ್ಎಸ್ಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ಬಳಿಕ ಮಾತನಾಡಿದ ಅವರು, ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು 25ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. ಹೀಗಾಗಿ ಮುಂದಿನ ವರ್ಷದಿಂದ ವಿವಿಧ ವಿಭಾಗಗಳಲ್ಲಿ ಅವಶ್ಯವಿರುವ ಕೋರ್ಸ್ಗಳನ್ನು ಚರ್ಚಿಸಿ ಆರಂಭಿಸಲಾಗುವುದು ಎಂದು ಹೇಳಿದರು. ಕುಲಪತಿಗಳು ಈಗಾಗಲೇ 23 ಕೋರ್ಸ್ ಗಳನ್ನು ಸಿದ್ಧಪಡಿಸಿದ್ದಾರೆ.
ಇನ್ನೆರಡು ಕೋರ್ಸ್ ಗಳು ಮಾತ್ರ ಸಿದ್ಧವಾಗಬೇಕಿದೆ. ಜೂ.1ರಂದು ನಡೆಯಲಿರುವ ವಿವಿ ಬೆಳ್ಳಿಹಬ್ಬ ಸಮಾ ರಂಭದಲ್ಲಿ ಎಲ್ಲ ಕೋರ್ಸ್ಗಳನ್ನು ಘೋಷಿಸ ಲಾಗುವುದು. ಅಮೆರಿಕ, ಇಂಗ್ಲೆಂಡ್ ಸೇರಿದಂತೆ ವಿದೇಶಿ ವಿಶ್ವವಿದ್ಯಾಲಯ ಗಳೊಂದಿಗೆ ಒಂದು ವರ್ಷದ ವಿನಿಮಯ ಕಾರ್ಯ ಕ್ರಮಗಳಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಇಲ್ಲಿನ ವಿದ್ಯಾರ್ಥಿಗಳು ವಿದೇಶಿ ವಿವಿಗಳಲ್ಲಿ ವಿಶೇಷ ಜ್ಞಾನ ಪಡೆದು ರಾಜ್ಯದಲ್ಲಿ ಸೇವೆ ಸಲ್ಲಿಸಲು ಸಹಕಾರಿಯಾಗಲಿದೆ ಎಂದರು.
ಚರ್ಚಿಸಿ ತೀರ್ಮಾನ: ರಾಮನಗರದಲ್ಲಿ ಆರ್ಜಿಯುಎಚ್ಎಸ್ ಕ್ಯಾಂಪಸ್ ಆರಂಭಿಸುವ ಸಂಬಂಧ ಮುಂದಿನ ವಾರ ಅಧಿಕಾರಿಗಳು ಹಾಗೂ ರಾಮನಗರ ಜಿಲ್ಲೆಯ ಜನಪ್ರತಿ ನಿಧಿಗಳೊಂದಿಗೆ ಸಭೆ ಕರೆದು ಚರ್ಚಿಸುತ್ತೇನೆ. ಜಮೀನಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನಲ್ಲಿ ವ್ಯಾಜ್ಯಗಳು ಬಗೆಹರಿಯಬೇಕಿದೆ ಎಂದು ಹೇಳಿದರು.
ಐದು ದಿನದೊಳಗೆ ನರ್ಸಿಂಗ್ ಫಲಿತಾಂಶ: ಉತ್ತರ ಪತ್ರಿಕೆ ಕಳೆದುಹೋಗಿದ್ದ ಕಾರಣ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿರುವ ಎರಡನೇ ವರ್ಷದ 20 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಲು ತೊಂದರೆಯಾಗಿತ್ತು. ಉತ್ತರ ಪತ್ರಿಕೆಗಳ ಬಂಡಲ್ ಸಿಕ್ಕಿದ್ದು, ನಾಲ್ಕೈದು ದಿನದೊಳಗೆ ಫಲಿತಾಂಶ ಪ್ರಕಟಿಸಲಾಗುವುದು. ವಿದ್ಯಾರ್ಥಿಗಳು ಅಥವಾ ಪಾಲಕ, ಪೋಷಕರು ಆತಂಕಪಡುವ ಆಗತ್ಯವಿಲ್ಲ.
ನಾಲ್ಕೈದು ದಿನಗಳಲ್ಲಿ ಫಲಿತಾಂಶ ಪ್ರಕಟಿಸಲಾಗುವುದು. ಫಲಿತಾಂಶ ಪ್ರಕಟವಾಗದ ಹಿನ್ನೆಲೆ ಯಲ್ಲಿ ವಿದ್ಯಾರ್ಥಿವೇತನ ಸಿಗುತ್ತಿಲ್ಲವೆಂದು ವಿದ್ಯಾರ್ಥಿಗಳು ಪರದಾಡುತ್ತಿರುವುದು ಗಮನಕ್ಕೆ ಬಂದಿದೆ. ಶೀಘ್ರವೇ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವರು ತಿಳಿಸಿದರು. ಫಲಿತಾಂಶ ಪ್ರಕಟವಾಗದ ವಿದ್ಯಾರ್ಥಿಗಳು ಹಾಗೂ ಪೋಷಕರು ಸೋಮವಾರ ಸಚಿವರನ್ನು ಭೇಟಿ ಮಾಡಿ ಅಹವಾಲು ನೀಡಿದ್ದರು.
ವೈದ್ಯ ಕೋರ್ಸ್ ಶುಲ್ಕ ನಿಗದಿಯಾಗಿಲ್ಲ: ವೈದ್ಯಕೀಯ ಕೋರ್ಸ್ಗಳಿಗೆ ಶುಲ್ಕ ಹೆಚ್ಚಳ ಮಾಡುವ ಸಂಬಂಧ ಧಾರ್ಮಿಕ ಮತ್ತು ಅಲ್ಪಸಂಖ್ಯಾತ ವಿದ್ಯಾಸಂಸ್ಥೆಗಳ ಜತೆ ವೈದ್ಯಕೀಯ ಶಿಕ್ಷಣ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಭೆ ನಡೆಸಿದ್ದಾರೆ. ಶುಲ್ಕ ನಿಯಂತ್ರಣ ಸಮಿತಿ ಕೂಡ ರಚನೆ ಮಾಡಲಾಗುತ್ತಿದೆ. ವಾರದೊಳಗೆ ಸಮಿತಿ ವರದಿ ನೀಡಲಿದ್ದು, ಬಳಿಕ ಶುಲ್ಕ ಹೆಚ್ಚಳಕ್ಕೆ ಸಂಬಂಧಿಸಿದಂತೆ ಚರ್ಚಿಸಲಾಗುವುದು ಎಂದು ಸಚಿವ ಡಾ.ಸುಧಾಕರ್ ತಿಳಿಸಿದರು.