ಮೋದಿ ಜತೆ ಭಿನ್ನಾಭಿಪ್ರಾಯ ಇದೆ;ಈಗ ನಾವು ಕೋವಿಡ್ ವಿರುದ್ಧ ಒಗ್ಗಟ್ಟಿನಿಂದ ಹೋರಾಡಬೇಕು:ರಾಹುಲ್
ಕೋವಿಡ್ ಹೋರಾಟದಲ್ಲಿ ಯಾವುದೇ ಜಯದ ಘೋಷಣೆ ಬೇಕಾಗಿಲ್ಲ. ಇದೊಂದು ದೀರ್ಘಕಾಲದ ಹೋರಾಟ
Team Udayavani, Apr 16, 2020, 4:54 PM IST
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜತೆ ಹಲವಾರು ವಿಷಯಗಳಲ್ಲಿ ಅಭಿಪ್ರಾಯ ಭೇದ ಇದೆ. ಆದರೆ ಮಾರಣಾಂತಿಕ ಕೋವಿಡ್ 19 ವೈರಸ್ ಕ್ಷಿಪ್ರವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ನಾವು ಒಗ್ಗಟ್ಟಿನಿಂದ ಇದ್ದು ಹೋರಾಡಬೇಕಾದ ಅಗತ್ಯವಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಗುರುವಾರ ಪ್ರತಿಕ್ರಿಯೆ ನೀಡಿದ್ದಾರೆ.
ಮಾರಕ ಕೋವಿಡ್ ವೈರಸ್ ವಿರುದ್ಧ ಕಠಿಣ ರೀತಿಯಲ್ಲಿ ಹೋರಾಡುತ್ತಿರುವ ವೇಳೆಯಲ್ಲಿಯೂ ನಾನು ಬ್ಲೇಮ್ ಗೇಮ್ (ಆರೋಪ ಹೊರಿಸುವುದು) ಮಾಡಲು ತಯಾರಿಲ್ಲ. ನಾವು ಪ್ರತಿಯೊಬ್ಬರು ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ವಿಡಿಯೋ ಕಾನ್ಪರೆನ್ಸ್ ಮೂಲಕ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೋವಿಡ್ ಹೋರಾಟದಲ್ಲಿ ಯಾವುದೇ ಜಯದ ಘೋಷಣೆ ಬೇಕಾಗಿಲ್ಲ. ಇದೊಂದು ದೀರ್ಘಕಾಲದ ಹೋರಾಟವಾಗಿದೆ. ನನಗೆ ಪ್ರಧಾನಿ ಅವರ ಜತೆ ಹಲವಾರು ವಿಷಯಗಳಲ್ಲಿ ಭಿನ್ನಾಭಿಪ್ರಾಯ ಇದೆ. ಆದರೆ ಈ ವೇಳೆ ನಾವು ಒಗ್ಗಟ್ಟಾಗಿರಬೇಕು ವಿನಃ ಸಂಘರ್ಷಕ್ಕೆ ಇಳಿಯುವುದಲ್ಲ. ನಾವು ಒಗ್ಗಟ್ಟಿನಿಂದ ಇದ್ದು ವೈರಸ್ ಅನ್ನು ಸೋಲಿಸಬೇಕಾಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದ ಅವರು ಇನ್ನೂ ಹೆಚ್ಚು ಮುಖ್ಯಮಂತ್ರಿಗಳ ಸಲಹೆಯನ್ನು ಆಲಿಸಬೇಕಾಗಿದೆ ಎಂದು ರಾಹುಲ್ ಗಾಂಧಿ ಈ ಸಂದರ್ಭದಲ್ಲಿ ಸಲಹೆ ನೀಡಿದ್ದಾರೆ. ಅಲ್ಲದೇ ಲಾಕ್ ಡೌನ್ ಕೋವಿಡ್ ಸೋಲಿಸಲು ಇರುವ ಪರಿಹಾರವಲ್ಲ, ಆದರೆ ಇದೊಂದು ತಾತ್ಕಾಲಿಕ ತಡೆ ಬಟನ್ ಆಗಿದೆ. ಒಂದು ಬಾರಿ ಲಾಕ್ ಡೌನ್ ತೆರವುಗೊಳಿಸಿದ ಮೇಲೆ ಕೋವಿಡ್ ಸೋಂಕು ಮತ್ತೆ ಬರುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಇದಕ್ಕೆ ಒಗ್ಗಟ್ಟಿನ ಹೋರಾಟದ ಪ್ರಯತ್ನದ ಬಲ ಬೇಕಾಗಿದೆ ಎಂದು ರಾಹುಲ್ ತಿಳಿಸಿದ್ದಾರೆ.