ಭೌತಿಕ ಅಂತರದಲ್ಲಿ ಮದ್ಯ ಖರೀದಿಸುವಂತೆ ಹೇಳಿದ ಹೋಂಗಾರ್ಡ್ ಗೆ ಥಳಿಸಿದ ಯುವಕರು: ಕೇಸ್ ದಾಖಲು
Team Udayavani, May 4, 2020, 6:03 PM IST
ಗಂಗಾವತಿ: ಮದ್ಯ ಖರೀದಿಗೆ ಕ್ಯೂ ಮತ್ತು ಭೌತಿಕ ಅಂತರ ಪಾಲಿಸುವಂತೆ ಹೇಳಿದ ಕರ್ತವ್ಯ ನಿರತ ಹೋಂಗಾರ್ಡ್ ಗಳನ್ನು ಮೂರು ಜನ ಯುವಕರು ಹಲ್ಲೆ ಮಾಡಿದ ಘಟನೆ ಗಂಗಾವತಿ ಮಹಾವೀರ ವೃತ್ತದ ಮದ್ಯದಂಗಡಿಯ ಎದುರು ಸೋಮವಾರ ಮಧ್ಯಾಹ್ನ ಜರುಗಿದೆ.
ಇಲ್ಲಿನ ಮದ್ಯದಂಗಡಿ ಎದುರು ಮದ್ಯ ಖರೀದಿ ಮಾಡಲು ನೂರಾರು ಜನರು ಕ್ಯೂ ನಲ್ಲಿ ನಿಂತಿದ್ದರು. ಮಹೆಬೂಬನಗರದ ಮೂರು ಜನ ಯುವಕರು ಕ್ಯೂ ನಲ್ಲಿ ನಿಲ್ಲದೇ ಭೌತಿಕ ಅಂತರ ಕಾಪಾಡದೇ ಮದ್ಯ ಖರೀದಿಗೆ ಆಗಮಿಸಿ ಕರ್ತವ್ಯ ನಿರತ ಹೋಂಗಾರ್ಡ್ಬ ಜಿಲಾನಿಪಾಷಾ ಎಂಬುವವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಶರ್ಟ್ ನ್ನು ಹಿಡಿದು ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಯುವಕರು ಅಲ್ಲಿಂದ ಓಡಿಹೋಗುವ ಸಂದರ್ಭದಲ್ಲಿ ಸಾರ್ವಜನಿಕರ ಸಹಾಯದಿಂದ ಹಿಡಿದು ಮೂರು ಜನರನ್ನು ಠಾಣೆ ಗೆ ಕರೆ ತರಲಾಗಿದ್ದು ಹಲ್ಲೆ ಹಾಗು ಅವಾಚ್ಯ ಶಬ್ದಗಳಿಂದ ನಿಂದಿಸಿದಕ್ಕೆ ನಗರ ಠಾಣೆಯಲ್ಲಿಕೇಸ್ ದಾಖಲು ಮಾಡಲಾಗಿದೆ.
ಮದ್ಯದಂಗಡಿಗಳು ಬಂದ್: ಕರ್ತವ್ಯ ನಿರತ ಹೋಂಗಾರ್ಡ್ ಮೇಲೆ ಹಲ್ಲೆ ನಡೆಸಿದ ಯುವಕರ ಕ್ರಮ ಖಂಡಿಸಿ ಮಗರದ ಖಾಸಗಿ ಬಾರ್ ಗಳು ಮದ್ಯ ಮಾರಾಟ ವನ್ನು ಮಧ್ಯಾನ್ಹದಿಂದ ಬಂದ್ ಮಾಡಿ ಬಾರ್ ಮಾಲೀಕರು ಹೋಂಗಾರ್ಡ್ ಗೆ ಬೆಂಬಲ ಸೂಚಿಸಿದರು. ಕೂಡಲೇ ಹಲ್ಲೆ ಮಾಡಿದವರ ವಿರುದ್ದ ಕಠಿಣಕ್ರಮ ಜರುಗಿಸುವಂತೆ ಬಾರ್ ಸಿಬ್ಬಂದಿ ಪರವಾಗಿ ಮಲ್ಲಿಕಾರ್ಜುನ ತಟ್ಟಿ ಪೊಲೀಸರಿಗೆ ಮನವಿ ಮಾಡಿದ್ದಾರೆ