ಛಾಯಾಗ್ರಾಹಕರಿಗೆ ನೆರವು ನೀಡಿ
Team Udayavani, May 11, 2020, 9:33 AM IST
ಹಿರೇಕೆರೂರ: ಲಾಕ್ಡೌನ್ ಹಿನ್ನೆಲೆಯಲ್ಲಿ ವೃತ್ತಿಪರ ಛಾಯಾಗ್ರಾಹಕರು ಹಾಗೂ ವಿಡಿಯೋಗ್ರಾಫರ್ಗಳು ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರ ಆರ್ಥಿಕ ನೆರವು ನೀಡಬೇಕು ಎಂದು ರಟ್ಟಿಹಳ್ಳಿ ತಾಲೂಕು ಕದಂಬ ವೃತ್ತಿನಿರತ ಛಾಯಾಗ್ರಾಹಕರ ಸಂಘದಿಂದ ಕೃಷಿ ಸಚಿವ ಬಿ.ಸಿ. ಪಾಟೀಲಗೆ ಮನವಿ ಸಲ್ಲಿಸಲಾಯಿತು.
ರಟ್ಟಿಹಳ್ಳಿ ತಾಲೂಕಿನಲ್ಲಿ ಸುಮಾರು 60 ವೃತ್ತಿನಿರತ ಛಾಯಾಗ್ರಾಹಕರಿದ್ದು,ಈ ವೃತ್ತಿಯನ್ನೇ ನಂಬಿಕೊಂಡಿದ್ದ ಎಲ್ಲರ ಕುಟುಂಬಗಳು ಲಾಕ್ಡೌನ್ ಪರಿಣಾಮ ಆರ್ಥಿಕ ಸಂಕಷ್ಟದಲ್ಲಿವೆ. ಏಪ್ರಿಲ್, ಮೇ ತಿಂಗಳುಗಳಲ್ಲಿ ಮದುವೆ ಸಮಾರಂಭಗಳು ಹೆಚ್ಚಾಗಿ ನಡೆಯುತ್ತವೆ. ಆದರೆ ಕೋವಿಡ್ ಸೋಂಕು ಭೀತಿಯಿಂದ ಸಮಾರಂಭಗಳನ್ನು ರದ್ದುಪಡಿಸಿರುವುದರಿಂದ ನಮ್ಮ ವೃತ್ತಿಗೆ ದೊಡ್ಡ ಹೊಡೆತ ಬಿದ್ದಿದೆ. ಕುಟುಂಬಗಳ ನಿರ್ವಹಣೆ ತುಂಬಾ ಕಷ್ಟಕರವಾಗಿದ್ದು, ಬೀದಿಗೆ ಬರುವ ಸ್ಥಿತಿ ಎದುರಾಗಿದೆ. ಸರ್ಕಾರ ಕೂಡಲೇ ಆರ್ಥಿಕ ನೆರವು ನೀಡಬೇಕು ಎಂದು ಛಾಯಾಗ್ರಾಹಕರು ಮನವಿ ಮಾಡಿದರು.
ಸಂಘದ ಗೌರವಾಧ್ಯಕ್ಷ ಬಸವರಾಜ ಪವಾರ, ಅಧ್ಯಕ್ಷ ರಾಜು ಉಪ್ಪಾರ, ಉಪಾಧ್ಯಕ್ಷ ವಾಗೀಶ ಹಿರೇಮಠ, ಲಿಂಗರಾಜ ವಾಲಿ, ಹನುಮಂತ ಬಳಿಗಾರ, ಪ್ರವೀಣ ನೆಲೋಗಲ್, ಗಣೇಶ ಸೊಪ್ಪು, ಮುತ್ತು ಬೆಣ್ಣಿ, ವಿಠಲ ಗುಬ್ಬಿ ಹಾಜರಿದ್ದರು.