ಆಹಾರ ಸಗಟು ಗೋದಾಮಿಗೆ ಭೇಟಿ
Team Udayavani, May 11, 2020, 2:56 PM IST
ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಕೆ.ಎಫ್.ಸಿ ಎಸ್ಸಿ ಸಗಟು ಗೋದಾಮಿಗೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಶ್ರೀಶೈಲ ಕಂಕಣವಾಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭೇಟಿ ನೀಡಿದ ಸಂದರ್ಭದಲ್ಲಿ ಸಗಟು ಗೋದಾಮಿನಲ್ಲಿ ಕೆಲಸ ಮಾಡುತ್ತಿರುವ ಹಮಾಲರಿಗೆ ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಮಾಸ್ಕ್ಗಳನ್ನು ಧರಿಸಿ ಕೆಲಸ ನಿರ್ವಹಿಸಲು ಸೂಚಿಸಿದರು. ಅಲ್ಲಿದ್ದ ಹಮಾಲರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಿದರು. ಬಾದಾಮಿ ನಗರದ ಟಿ.ಎ.ಪಿ.ಸಿ.ಎಂ. ಎಸ್ ಕಂಜ್ಯೂಮರ್ ಸೊಸೈಟಿ, ಬನಶಂಕರಿ ಸೊಸೈಟಿ ಹಾಗೂ 3 ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಪ್ರಧಾನಮಂತ್ರಿ ಗರೀಬ ಕಲ್ಯಾಣ ಅನ್ನಯೋಜನೆಯಡಿ ಉಚಿತ ಅಕ್ಕಿ ಮತ್ತು ತೊಗರಿ ಬೇಳೆ ವಿತರಣೆ ಕುರಿತು ಪರಿಶೀಲನೆ ನಡೆಸಿದರು.
ಢಾಣಕ ಶಿರೂರ ಗ್ರಾಮದಲ್ಲಿ ಕೋವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸೀಲ್ ಡೌನ್ ಮಾಡಲಾಗಿದ್ದು, ಈ ವ್ಯಾಪ್ತಿಯ ಕುಟುಂಬಗಳ ಮನೆ-ಮನೆಗೆ ಆಹಾರ ಇಲಾಖೆ ಸಿಬ್ಬಂದಿ ಪಡಿತರ ತಲುಪಿಸಿದ ಬಗ್ಗೆ ಪರಿಶೀಲಿಸಿದರು.