ಮಡಿಕೇರಿ: ಕಾಫಿ ಉದ್ಯಮಿ ಶಂಕಾಸ್ಪದ ಸಾವು
Team Udayavani, May 13, 2020, 8:35 AM IST
ಮಡಿಕೇರಿ: ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಕಾಫಿ ಉದ್ಯಮಿಯೋರ್ವ ಮೃತಪಟ್ಟಿರುವ ಘಟನೆ ಕುಶಾಲನಗರದಲ್ಲಿ ಸಂಭವಿಸಿದೆ. ಕೊಡಗು ಜಿಲ್ಲೆಯ ಶ್ರೀಮಂಗಲದ ಕಾಕೂರು ಗ್ರಾಮದ ನಿವಾಸಿ ಕಲ್ಲಂಗಡ ಪೂವಪ್ಪ ಅಲಿಯಾಸ್ ಪ್ರವೀಣ್ (42) ಮೃತಪಟ್ಟವರು.
ಮೂರು ತಿಂಗಳ ಹಿಂದೆ ಕುಶಾಲನಗರದ ಕುವೆಂಪು ಬಡಾವಣೆಯ ಮನೆಯೊಂದರಲ್ಲಿ ಪ್ರವೀಣ್ ಬಾಡಿಗೆ ಗಿದ್ದರು. ಏಕಾಂಗಿಯಾಗಿ ವಾಸವಿದ್ದ ಅವರು ಮನೆಯಿಂದ ಹೊರಗೆ ಕಂಡುಬಾರದ ಹಿನ್ನೆಲೆಯಲ್ಲಿ ಮನೆ ಮಾಲಕ ಪರಿಶೀಲಿಸಿದಾಗ ನೆಲದ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ರಾತ್ರಿ ಕಾರಿನಲ್ಲಿ ಅಪರಿಚಿತರು ಬಂದು ಹೋಗಿರುವ ಬಗ್ಗೆ ಮನೆ ಮಾಲಕರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸ್ ಅಧಿಕಾರಿಗಳು, ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ಡಿವೈಎಸ್ಪಿ ಎಚ್.ಎಂ. ಶೈಲೇಂದ್ರ, ವೃತ್ತ ನಿರೀಕ್ಷಕ ಎಂ.ಮಹೇಶ್, ಕುಶಾಲನಗರ ಪೊಲೀಸ್ ಠಾಣಾಧಿಕಾರಿ ಗಣೇಶ್ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕೊಡಗು ಎಸ್ಪಿ ಡಿ.ಪಿ. ಸುಮನಾ ಅವರು ಮಾಹಿತಿ ಪಡೆದುಕೊಂಡರು. ಕುಶಾಲನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.