ಕೋವಿಡ್ ವಿರುದ್ಧ ಹೋರಾಟ ದಾದಿಯರ ಸೇವೆ ಶ್ಲಾಘನೀಯ: ಅಜಿತ್
Team Udayavani, May 14, 2020, 11:12 AM IST
ಸಾಂದರ್ಭಿಕ ಚಿತ್ರ
ಮುಂಬಯಿ: ವಿಶ್ವಾದ್ಯಂತ ಹರಡಿರುವ ಮಹಾಮಾರಿ ಕೋವಿಡ್ ಸೋಂಕಿನ ವಿರುದ್ಧದ ಹೋರಾಟದಲ್ಲಿ ವೈದ್ಯರೊಂದಿಗೆ ಸೇವೆ ಸಲ್ಲಿಸುವ ಮತ್ತು ವೈದ್ಯರಿಗಿಂತ ಒಂದು ಹೆಜ್ಜೆ ಮುಂದೆ ನಿಂತು ರೋಗಿಗಳ ಆರೋಗ್ಯದ ಕಾಳಜಿ ವಹಿಸುವ ನರ್ಸ್ ಸಹೋದರಿಯರ ಮಾನವೀಯತೆಯ ಸೇವೆಯುಇತಿಹಾಸದ ಪುಟಗಳಲ್ಲಿ ಚಿನ್ನದ ಅಕ್ಷರಗಳಿಂದ ದಾಖಲಾಗಲಿ ಎಂದು ಉಪಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿದ್ದಾರೆ.
ಮಂಗಳವಾರ ವಿಶ್ವ ದಾದಿಯರ ದಿನಾಚರಣೆಯ ಅಂಗವಾಗಿ ಎಲ್ಲ ದಾದಿಯರಿಗೆ ಶುಭಾಶಯ ಕೋರಿದ ಅವರು, ಮಾನವೀಯತೆಯ ಕಲ್ಯಾಣದಲ್ಲಿ ರೋಗಿಗಳ ಸೇವೆ ಅತ್ಯುನ್ನತವಾಗಿದೆ. ಕೋವಿಡ್ ಮಹಾಮಾರಿಯ ಆತಂಕದ ಸಂದರ್ಭದಲ್ಲಿ ವಿಶ್ವಾದ್ಯಂತ ದಾದಿಯರು ತಮ್ಮ ವತಿಯಿಂದ ಅಚಲ ಸೇವೆಯನ್ನು ನೀಡುತ್ತಿದ್ದಾರೆ. ಮಾನವೀಯತೆಯ ನಿಜರೂಪವನ್ನು ಅವರಲ್ಲಿ ನಾವಿಂದು ಕಾಣಬಹುದು. ನಿಸ್ವಾರ್ಥ ಸೇವೆಯಿಂದ ಈ ಸಹೋದರಿಯರು ಸಮಾಜದಲ್ಲಿ ಪ್ರೀತಿ ಮತ್ತು ಗೌರವದ ಸ್ಥಾನಗಳನ್ನೂಹೊಂದಿದ್ದಾರೆ. ಇಂದು, ಪ್ರಪಂಚವು ಆತಂಕದಲ್ಲಿರುವಾಗ ಅನೇಕ ದಾದಿಯರು ದೇವದೂತರಂತೆ ರೋಗಿಗಳ ಪ್ರಾಣ ಉಳಿಸಲು ನಿರಂತರ ಹೋರಾಟವನ್ನು ಮಾಡುತ್ತಿದ್ದಾರೆ. ರೋಗಿಗಳ ಚಿಕಿತ್ಸೆಯ ಜತೆಗೆ, ಅವರು ರೋಗಿಗಳಿಗೆ ತಾಳ್ಮೆ, ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯನ್ನು ನೀಡುತ್ತಿದ್ದಾರೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ದಾದಿಯರ ಪಾತ್ರ ಮುಖ್ಯವಾಗಿದೆ. ತಮ್ಮ ಜೀವನವನ್ನು ಅಪಾಯದಲ್ಲಿ ಇರಿಸಿ ಮತ್ತು ಕುಟುಂಬದ ಎಲ್ಲ ಕಲ್ಪನೆಯನ್ನು ಬದಿಗಿಟ್ಟು, ಅನೇಕ ದಾದಿಯರು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ವಿಶ್ವದ, ದೇಶ, ರಾಜ್ಯ , ನಗರ, ಗ್ರಾಮೀಣ, ದೂರದ ಪ್ರದೇಶಗಳಲ್ಲಿ ಇವರು ಇಂದು ಹಗಲು -ರಾತ್ರಿಯೆನ್ನದೆ ಕರ್ತವ್ಯದಲ್ಲಿದ್ದಾರೆ. ಅವರ ಸೇವೆಗೆ ಕೃತಜ್ಞತೆ ಸಲ್ಲಿಸಲು ಪದಗಳು ಸಾಲವು ಎಂದು ಅಜಿತ್ ಪವಾರ್ ಹೇಳಿದರು.
ಪ್ರಸ್ತುತ ಕೋವಿಡ್ ಚಿಕಿತ್ಸೆಗೆ ಯಾವುದೇ ಲಸಿಕೆ ಪತ್ತೆಯಾಗಿಲ್ಲ. ಆದರೂ ವೈರಾಣು ಸೋಂಕಿತರಿಗೆ ಸರಿಯಾದ ಆರೈಕೆಯು ಮಾಡುವ ಜತೆಗೆ ಅವರನ್ನು ಗುಣಮುಖ ಮಾಡುವುದರಲ್ಲಿ ದಾದಿಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ದಾದಿಯರು ಈ ಕೆಲಸವನ್ನು ಅತ್ಯಂತ ಪ್ರಾಮಾಣಿಕತೆಯಿಂದ ಮಾಡುತ್ತಿದ್ದಾರೆ. ಆದ್ದರಿಂದ, ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿತರು ಗುಣಮುಖ ಆಗಿರುವ ಪ್ರಮಾಣ ಉತ್ತಮವಾಗಿದೆ. ಇದಕ್ಕೆಲ್ಲ ಇವರು ನೀಡುತ್ತಿರುವ ಕೊಡುಗೆಯನ್ನು ಯಾರೂ ಮರೆಯುವಂತಿಲ್ಲ. ಸಾಂಕ್ರಾಮಿಕ ರೋಗಗಳು, ಇತರ ದೀರ್ಘಕಾಲದ ಕಾಯಿಲೆಗಳು, ಪ್ರಸ್ತುತ ಕೋವಿಡ್ ಮಹಾಮಾರಿ ಹೀಗೆ ಅನೇಕ ಸಮಸ್ಯೆಗಳನ್ನು ದಾದಿಯರು ಎದುರಿಸುತ್ತಿರುತ್ತಾರೆ. ಅವರು ನೀಡುವ ನಿರಂತರ ಸೇವೆಯನ್ನು ಗಮನಿಸಿ ಅವರನ್ನು ಪ್ರೋತ್ಸಾಹಿಸುವುದು, ಅವರ ಸ್ಥೈರ್ಯವನ್ನು ಹೆಚ್ಚಿಸುವುದು ಮತ್ತು ಅವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದು ನಮ್ಮ ಕರ್ತವ್ಯ ಎಂದು ಅಜಿತ್ ಪವಾರ್ ಹೇಳಿದ್ದಾರೆ .