ರಾಜ್ಯದಿಂದ 35 ರೈಲುಗಳಲ್ಲಿ 42,000 ವಲಸಿಗರ ನಿರ್ಗಮನ
Team Udayavani, May 14, 2020, 11:18 AM IST
ಸಾಂದರ್ಭಿಕ ಚಿತ್ರ
ಮುಂಬಯಿ: ಮಹಾರಾಷ್ಟ್ರದಿಂದ 35 ರೈಲುಗಳಲ್ಲಿ ಈವರೆಗೆ ಸುಮಾರು 42,000 ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ಕರೆದೊಯ್ಯಲಾಗಿದೆ ಎಂದು ರಾಜ್ಯ ಗೃಹ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಕೇಂದ್ರವು ಕೋವಿಡ್ ವೈರಸ್ ಪ್ರೇರಿತ ಲಾಕ್ಡೌನ್ನಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಸಿಕ್ಕಿಕೊಂಡಿರುವ ಜನರನ್ನು ಆಯಾ ರಾಜ್ಯಗಳಿಗೆ ಸಾಗಿಸಲು ರೈಲುಗಳನ್ನು ಬಳಸಲು ಅನುಮತಿ ನೀಡಿದೆ.
ಮಹಾರಾಷ್ಟ್ರದ ವಿವಿಧ ಭಾಗಗಳಿಂದ 35 ರೈಲುಗಳಲ್ಲಿ ಸುಮಾರು 42,000 ವಲಸೆ ಕಾರ್ಮಿಕರನ್ನು ತಮ್ಮ ರಾಜ್ಯಗಳಿಗೆ ಕಳುಹಿಸಲಾಗಿದೆ. ವಲಸೆ ಕಾರ್ಮಿಕರಿಗಾಗಿ ಹೆಚ್ಚಿನ ರೈಲುಗಳನ್ನು ಓಡಿಸುವ ಭಾರತೀಯ ರೈಲ್ವೇಯ ನಿರ್ಧಾರದಿಂದಾಗಿ ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗಲಿದೆ
ಎಂದು ಅಧಿಕಾರಿ ಹೇಳಿದ್ದಾರೆ. ಮಹಾರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರು ತಮ್ಮ ಮನೆಗೆ ಹಿಂದಿರುಗುವ ಪ್ರಯತ್ನದಲ್ಲಿ ಸ್ಥಳೀಯ ಪೊಲೀಸರೊಂದಿಗೆ ತಮ್ಮನ್ನು ನೋಂದಾಯಿಸಿಕೊಳ್ಳುತ್ತಿದ್ದಾರೆ. ರಾಜ್ಯದ ದೂರದ-ರೈಲುಗಳ ಕೆಲವು ಮುಖ್ಯ ರೈಲ್ವೇ ನಿಲ್ದಾಣಗಳು ಮನೆಗೆ ಹಿಂದಿರುಗಲು ಹತಾಶರಾಗಿರುವ ವಲಸೆ ಕಾರ್ಮಿಕರ ಸ್ಥಿರ ಪ್ರವಾಹಕ್ಕೆ ಸಾಕ್ಷಿಯಾಗುತ್ತಿವೆ.
ತವರೂರಿಗೆ ಹೊರಟಿರುವ ವಲಸೆ ಕಾರ್ಮಿಕರನ್ನು ಮಧ್ಯಪ್ರದೇಶದ ಉದ್ದಕ್ಕೂ ರಾಜ್ಯದ ಗಡಿಯಲ್ಲಿ ಇಳಿಸಲು ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ನಿಗಮ (ಎಂಎಸ್ಆರ್ಟಿಸಿ) ಈವರೆಗೆ ಸುಮಾರು 300 ಬಸ್ ಸೇವೆಗಳನ್ನು ನಿರ್ವಹಿಸಿದೆ ಎಂದು ಇನ್ನೋರ್ವ ಅಧಿಕಾರಿ ಹೇಳಿದ್ದಾರೆ. ಕಾಲ್ನಡಿಗೆಯಲ್ಲಿ ಮನೆಗಳಿಗೆ ತೆರಳಿರುವ ಕಾರ್ಮಿಕರ ಸಾಗಣೆಗೆ ಅನುಕೂಲವಾಗುವಂತೆ ಇದನ್ನು ಮಾಡಲಾಗಿದೆ ಎಂದು ಎಂಎಸ್ಆರ್ಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಂಎಸ್ಆರ್ಟಿಸಿ ರಸ್ತೆಗಳಲ್ಲಿ ನಡೆಯುತ್ತಿರುವ ಕಾರ್ಮಿಕರಿಗಾಗಿ ನಾಸಿಕ್, ಪುಣೆ ಮತ್ತು ಮುಂಬಯಿಯಿಂದ ಕೆಲವು ಬಸ್ಸೇವೆಗಳನ್ನು ನಡೆಸುತ್ತಿದೆ. ಅವರ ಕೆಲವು ಪ್ರಯಾಣದ ತೊಂದರೆಗಳನ್ನು ಕಡಿಮೆ ಮಾಡಲು ನಾವು ಅವರನ್ನು ಕನಿಷ್ಠ ಮಹಾರಾಷ್ಟ್ರ-ಮಧ್ಯಪ್ರದೇಶದ ಗಡಿಯಲ್ಲಿ ಬಿಡಲು ನಿರ್ಧರಿಸಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ.