ರವಿವಾರದ ಲಾಕ್ಡೌನ್ : ಕಡಲಿಗಿಳಿಯದ ಮೀನುಗಾರರು
Team Udayavani, May 25, 2020, 10:16 AM IST
ಗಂಗೊಳ್ಳಿ: ರಾಜ್ಯದಾದ್ಯಂತ ಲಾಕ್ಡೌನ್ ಆದೇಶ ಹೊರಡಿಸಿದ್ದರೂ, ಅಗತ್ಯ ವಸ್ತು ಎನ್ನುವ ಕಾರಣಕ್ಕೆ ಮೀನುಗಾರಿಕೆಗೆ ಯಾವುದೇ ರವಿವಾರ ನಿರ್ಬಂಧ ವಿಧಿಸದಿದ್ದರೂ ಕೂಡ ಮೀನುಗಾರರೇ ಸ್ವಯಂಪ್ರೇರಿತವಾಗಿ ಲಾಕ್ಡೌನ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಯಾವುದೇ ಬೋಟ್ ಅಥವಾ ದೋಣಿಗಳು ರವಿವಾರ ಮೀನುಗಾರಿಕೆಗೆ ಹೋಗಿಲ್ಲ.
ಕೋಡಿ ಗಂಗೊಳ್ಳಿ, ಮರವಂತೆ, ಕೊಡೇರಿ, ಉಪ್ಪುಂದದ ಮಡಿಕಲ್, ಶಿರೂರು ಸೇರಿದಂತೆ ಎಲ್ಲ ಕಡೆಗಳಲ್ಲಿ ಮೀನುಗಾರರು ಕಡಲಿಗಿಳಿದಿಲ್ಲ. ಇದರಿಂದಾಗಿ ಬಹುತೇಕ ಎಲ್ಲ ಬೋಟ್ಗಳು ಹಾಗೂ ದೋಣಿಗಳು ದಡದಲ್ಲೇ ಲಂಗರು ಹಾಕಿದ್ದವು.
ಮೀನು ಮಾರಾಟಕ್ಕೆ ಅವಕಾಶವಿದ್ದರೂ, ಎಲ್ಲಿಯೂ ಕೂಡ ಮೀನು ಮಾರಾಟ ಮಾಡುತ್ತಿದ್ದುದು ಕಂಡು ಬಂದಿಲ್ಲ. ಸುಗಮವಾಗಿ ಮೀನು ಮಾರಾಟ ಹಾಗೂ ಸಾಗಾಟ ಕಷ್ಟವೆಂದು ಮೀನುಗಾರರು ಕೂಡ ಕಡಲಿಗಿಳಿಯಲು ಹಿಂದೇಟು ಹಾಕಿರಬಹುದು. ಜನ ಸಂಚಾರ ವಿರಳವಾಗಿರುವುದರಿಂದ ಮೀನು ಖರೀದಿಗೆ ಜನ ಬರುವುದಿಲ್ಲವೆಂದು ಮೀನು ಮಾರಾಟಕ್ಕೆ ಹೆಚ್ಚಿನವರು ಹಿಂದೇಟು ಹಾಕಿದ್ದರು.
ಮಲ್ಪೆ: ಮೀನುಗಾರಿಕೆ ಬಂದರು ಸಂಪೂರ್ಣ ಬಂದ್
ಮಲ್ಪೆ: ರವಿವಾರ ಹೇರಲಾದ ಲಾಕ್ಡೌನ್ಗೆ ಮಲ್ಪೆಯಲ್ಲಿ ಮೀನುಗಾರಿಕೆ ಬಂದರು ಸಂಪೂರ್ಣ ಸ್ತಬ್ಧವಾಗಿತ್ತು. ಮಲ್ಪೆ ಮೀನುಗಾರಿಕೆ ಶೇ.85ರಷ್ಟು ಬೋಟುಗಳು ಈ ಮೊದಲೇ ಲಂಗರು ಹಾಕಿದ್ದು, ಉಳಿದ ಬೋಟುಗಳು ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿವೆ. ನಾಡದೋಣಿಗಳು ಮೀನುಗಾರಿಕೆಗೆ ತೆರಳಲಿಲ್ಲ. ಬಂದರಿನಲ್ಲಿ ಯಾವುದೇ ಮೀನುಗಾರಿಕೆ ಚಟುವಟಿಕೆ ನಡೆಯಲಿಲ್ಲ. ಮೀನು ಸಾಗಾಟದ ಲಾರಿ, ಟೆಂಪೋ ಸೇರಿ ಎಲ್ಲ ವಾಹನಗಳನ್ನು ಬಂದರಿನಲ್ಲಿ ನಿಲ್ಲಿಸಲಾಗಿದೆ.