ವಿಶ್ವ ತಂಬಾಕು ರಹಿತ ದಿನಾಚರಣೆ: ಜನ ಜಾಗೃತಿ ರಥಕ್ಕೆ ಚಾಲನೆ
Team Udayavani, Jun 3, 2020, 2:40 PM IST
ಬಾಗಲಕೋಟೆ : ವಿಶ್ವ ತಂಬಾಕು ರಹಿತ ದಿನಾಚರಣೆ ನಿಮಿತ್ತ ಬಾಗಲಕೋಟೆ ಜಿಲ್ಲೆಯಲ್ಲಿ ಯುವ ಪೀಳಿಗೆಯನ್ನು ತಂಬಾಕು ಉದ್ಯಮಿಗಳ ಕುತಂತ್ರ ಹಾಗೂ ತಂಬಾಕು ಮತ್ತು ನಿಕೋಟಿನ್ ಬಳಕೆಯಿಂದ ರಕ್ಷಣೆ ಮಾಡುವ ಘೋಷ ವಾಕ್ಯವುಳ್ಳ ಜನ ಜಾಗೃತಿ ರಥಕ್ಕೆ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ| ಅರವಿಂದ ಪಟ್ಟಣಶೆಟ್ಟಿ ಚಾಲನೆ ನೀಡಿದರು.
ಮಂಗಳವಾರ ನಗರದ 50 ಹಾಸಿಗೆಗಳ ಆಸ್ಪತ್ರೆಯ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು, ಈ ಜಾಗೃತಿ ರಥ ಸತತ ಮೂರು ದಿನಗಳವರೆಗೆ ನಾನಾ ಕಡೆ ಸಂಚರಿಸಿ ತಂಬಾಕು ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲಿದೆ. ಈ ವರ್ಷ ಕೋವಿಡ್-19 ಭೀತಿ ಹಿನ್ನೆಲೆಯಲ್ಲಿ ಲಾಕ್ ಡೌನ್ ಇರುವುದರಿಂದ ಕಾರ್ಯಕ್ರಮವನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ವಿಜಯ ಕಂಠಿ, ಜಿಲ್ಲಾ ತಂಬಾಕು ಸಲಹೆಗಾರ ಶಶಿಕಾಂತ ಕುಮಠಳ್ಳಿ, ಹಿರಿಯ ಆರೋಗ್ಯ ಮೇಲ್ವಿಚಾರಕ ಸಿ.ಬಿ. ಸೊಲ್ಲಾಪುರ, ಶಿವಲಿಂಗ ಕರಗಣ್ಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.