ಕೋವಿಡ್ ಪರೀಕ್ಷೆ ಲ್ಯಾಬ್ ಸ್ಥಾಪಿಸದ ಖಾಸಗಿ ಆಸ್ಪತ್ರೆ ವಿರುದ್ಧ ಕ್ರಮ
Team Udayavani, Jun 4, 2020, 10:32 AM IST
ಮಂಗಳೂರು: ರಾಜ್ಯದ ಎಲ್ಲ ಖಾಸಗಿ ಮೆಡಿಕಲ್ ಆಸ್ಪತ್ರೆಗಳಲ್ಲಿ ಮುಂದಿನ ಎರಡು ವಾರಗಳೊಳಗಾಗಿ ಕೋವಿಡ್ ಪರೀಕ್ಷೆಗಾಗಿ ಆರ್ಟಿಪಿಸಿಆರ್ ಲ್ಯಾಬ್ ಸ್ಥಾಪಿಸಬೇಕು. ಇಲ್ಲವಾದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್ ಸೂಚಿಸಿದ್ದಾರೆ. ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ದ.ಕ. ಜಿಲ್ಲೆಯಲ್ಲಿ ನಾಲ್ಕು ಆಸ್ಪತ್ರೆಗಳಲ್ಲಿ ಲ್ಯಾಬ್ ಕಾರ್ಯನಿರ್ವಹಿಸುತ್ತಿದ್ದು, ಇನ್ನು ನಾಲ್ಕು ಆಸ್ಪತ್ರೆಗಳಲ್ಲಿ ತೆರೆಯಲು ಬಾಕಿ ಇದೆ. ತತ್ಕ್ಷಣವೇ ಲ್ಯಾಬ್ಗಳನ್ನು ಅಸ್ತಿತ್ವಕ್ಕೆ ತರಬೇಕು. ಇಲ್ಲವಾದಲ್ಲಿ ಅಂತಹ ಆಸ್ಪತ್ರೆಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಚಿಕಿತ್ಸೆ ನೀಡಿ ಖಾಸಗಿ ಆಸ್ಪತ್ರೆಗಳು ಕೋವಿಡ್ ಹೊರತಾಗಿ ಇತರ ರೋಗಗಳಿಂದ ಬಳಲು ತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡುವು ದನ್ನು ಮುಂದುವರಿಸಬೇಕು. ದಂತ ವೈದ್ಯರು ಮತ್ತು ಕಿವಿ, ಮೂಗು, ಗಂಟಲು ಸಂಬಂಧಿತ ಚಿಕಿತ್ಸೆ ನೀಡುವವರು ಪಿಪಿಇ ಕಿಟ್ ಧರಿಸಿಕೊಂಡೇ ಕೆಲಸ ಮಾಡಬೇಕು ಎಂದು ತಿಳಿಸಿದರು.
ಲಕ್ಷಣಗಳಿದ್ದರೆ ಮಾತ್ರ ಪರೀಕ್ಷೆ
ಕೋವಿಡ್ ಲಕ್ಷಣಗಳಿದ್ದರೆ ಮಾತ್ರ ಆ ವ್ಯಕ್ತಿಗೆ ಪರೀಕ್ಷೆ ಮಾಡುವ ಹಾಗೂ ಲಕ್ಷಣಗಳಿಲ್ಲವಾದರೆ ನೇರ 14 ದಿನಗಳ ಹೋಂ ಕ್ವಾರಂಟೈನ್ಗೊಳಪಡಿಸುವ ಬಗ್ಗೆ ಕೇಂದ್ರದ ಮಾರ್ಗಸೂಚಿ ಇದೆ. ಸಾಂಸ್ಥಿಕ ಕ್ವಾರಂಟೈನ್ಗಾಗಿ ರಂಗಮಂದಿರ, ಹೊಟೇಲ್, ವಸತಿ ನಿಲಯಗಳನ್ನು ಈವರೆಗೆ ಬಳಸಿಕೊಳ್ಳಲಾಗಿದ್ದು, ಇನ್ನು ಅವರ ದೈನಂದಿನ ವ್ಯವಹಾರಕ್ಕಾಗಿ ಬಿಟ್ಟು ಕೊಡಬೇಕಿದೆ. ಹೀಗಾಗಿ ವಿದೇಶ ಮತ್ತು ಮಹಾರಾಷ್ಟ್ರದಿಂದ ಹಿಂದಿರುಗಿ ದವ ರನ್ನು ಹೊರತುಪಡಿಸಿ ಉಳಿದವರನ್ನು ಹೋಂ ಕ್ವಾರಂಟೈನ್ಗೊಳಪಡಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ತಿಳಿಸಿದರು.
ಮೂಲಪತ್ತೆ ಇನ್ನೂ ತನಿಖೆಯಲ್ಲಿ
ಪಡೀಲಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದ ವರಿಗೆ ಮತ್ತು ಆಸ್ಪತ್ರೆಯ ಸಂಪರ್ಕ ವಿಟ್ಟುಕೊಂಡವರಿಗೆ ಕೊರೊನಾ ಸೋಂಕು ಹರಡಿದ ಮೂಲ ಪತ್ತೆ ಇನ್ನೂ ತನಿಖಾ ಹಂತದಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು. ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಕೇರಳದ ರೋಗಿಗಳು ಚಿಕಿತ್ಸೆ ಪಡೆದು ತೆರಳಿರುವುದರಿಂದ ಆ ರೋಗಿಗಳ ಗಂಟಲು ದ್ರವ ಮಾದರಿಯನ್ನು ಪರೀಕ್ಷೆ ಗೊಳಪಡಿಸುವಂತೆ ದ.ಕ. ಜಿಲ್ಲಾಡಳಿತವು ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ಈ ಹಿಂದೆ ಪತ್ರ ಬರೆದಿತ್ತು. ಅದರಂತೆ ಮುಖ್ಯ ಕಾರ್ಯದರ್ಶಿಯವರು ಕೇರಳ ರಾಜ್ಯ ಮುಖ್ಯ ಕಾರ್ಯದರ್ಶಿಯವರಿಗೆ ಕೋರಿಕೊಂಡಿದ್ದಾರೆ. ಆದರೆ ಅಲ್ಲಿ ಪರೀಕ್ಷೆ ನಡೆಸಿದ ವರದಿಗಳು ಇನ್ನೂ ಲಭಿಸಿಲ್ಲ. ಹೀಗಾಗಿ ಈ ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ ಎಂದರು.
ಶಾಸಕ ಡಿ. ವೇದವ್ಯಾಸ ಕಾಮತ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೇಯರ್ ದಿವಾಕರ ಪಾಂಡೇಶ್ವರ ಮೊದಲಾದ ವರು ಉಪಸ್ಥಿತರಿದ್ದರು.