ಸಿಇಟಿ ಪರೀಕ್ಷಾರ್ಥಿಗಳಿಗೆ ಕೋವಿಡ್ ಆತಂಕ
Team Udayavani, Jun 6, 2020, 8:40 AM IST
ಬನಹಟ್ಟಿ: ಕೋವಿಡ್-19 ಸಂದರ್ಭದಲ್ಲಿ ರಬಕವಿ ಬನಹಟ್ಟಿ ತಾಲೂಕಿನ ಅಂದಾಜು 1200 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯಲು ಜಮಖಂಡಿಗೆ ಹೋಗಬೇಕಾಗಿದ್ದು, ಕೋವಿಡ್ ಹರಡುವ ಭೀತಿಯಲ್ಲಿದ್ದಾರೆ.
ಆದ್ದರಿಂದ ರಬಕವಿ ಬನಹಟ್ಟಿಯಲ್ಲಿಯೇ ಪರೀಕ್ಷಾ ಕೇಂದ್ರ ಆರಂಭಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ನೇಕಾರ ಮಾಲೀಕರ ಮುಖಂಡ ಶಂಕರ ಜಾಲಿಗಿಡದ ತಿಳಿಸಿದರು. ಮಾಜಿ ಸಚಿವೆ ಉಮಾಶ್ರೀ ಅವರಿಗೆ ಸಿಇಟಿ ಪರೀಕ್ಷಾ ಕೇಂದ್ರ ಸ್ಥಾಪಿಸುವಂತೆ ಆಗ್ರಹಿಸಿ ಶುಕ್ರವಾರ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಮುಖಂಡ ರಾಜೇಂದ್ರ ಭದ್ರನ್ನವರ ಮಾತನಾಡಿ, ಇಲ್ಲಿಯ ಬಡ ನೇಕಾರರ ಮಕ್ಕಳು ಎರಡು ದಿನಗಳ ಕಾಲ ಜಮಖಂಡಿಗೆ ಹೋಗಿ ಬರಬೇಕಾಗಿರುವುದರಿಂದ ಆರ್ಥಿಕವಾಗಿಯೂ ತೊಂದರೆಯಾಗುತ್ತದೆ. ಇನ್ನೂ 1200 ವಿದ್ಯಾರ್ಥಿಗಳು ಬಸ್ನಲ್ಲಿ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಉಂಟಾಗುತ್ತದೆ ಎಂದು ಮನವರಿಕೆ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಮಾಜಿ ಸಚಿವೆ ಉಮಾಶ್ರೀ, ಇಷ್ಟೊಂದು ವಿದ್ಯಾರ್ಥಿಗಳಿಗೆ ಅನುಕೂಲವಾಗುವುದಾದರೆ ಸಂಬಂಧಪಟ್ಟ ಶಿಕ್ಷಣ ಸಚಿವರು ಮತ್ತು ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಿ ಇಲ್ಲಿಯೇ ಕೇಂದ್ರ ಸ್ಥಾಪಿಸುವಂತೆ ಆಗ್ರಹಿಸುವುದಾಗಿ ತಿಳಿಸಿದರು. ಈ ವೇಳೆ ಲಕ್ಷ್ಮಣ ದೇಸರಟ್ಟಿ, ಬಸವರಾಜ ಗುಡೋಡಗಿ, ಶಂಕರ ಕೆಸರಗೊಪ್ಪ, ರಾಹುಲ ಕಲಾಲ, ಕಿರಣ ಕರಲಟ್ಟಿ ಇತರರು ಇದ್ದರು.