ತಿಪಟೂರಿಗೆ ಎತ್ತಿನಹೊಳೆ ನೀರು ಹರಿಸಿ
Team Udayavani, Jun 10, 2020, 7:08 AM IST
ತಿಪಟೂರು: ಎತ್ತಿನಹೊಳೆ ಯೋಜನೆಯಿಂದ ತಿಪಟೂರು ತಾಲೂಕಿಗೆ ನೀರು, ಸಂತ್ರಸ್ತರಿಗೆ ನ್ಯಾಯಯುತ ಭೂ ಪರಿಹಾರ ಮತ್ತು ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎತ್ತಿನ ಹೊಳೆ ಹೋರಾಟ ಸಮಿತಿ ಮುಖಂಡರು ಉಪ ವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಸಮಿತಿ ಹೋರಾಟಗಾರರು ಮಾತನಾಡಿ, ಎತ್ತಿನಹೊಳೆ ಯೋಜನೆ ತಿಪಟೂರಿನಲ್ಲಿ ಹಾದು ಹೋಗಿದ್ದು, ಸಾವಿರಾರು ರೂ. ಎಕರೆ ಭೂಮಿ ಸ್ವಾಧೀನ ಪಡಿಸಿಕೊಂಡಿದ್ದಾರೆ. ಆದರೆ ಈ ಭಾಗದ ರೈತರಿಗೆ ನೀರು ಕೊಡುವುದಿಲ್ಲವೆಂದರೆ ಯಾವ ನ್ಯಾಯ? ಭೂ ಪರಿಹಾರಕ್ಕೆ ಸಂಬಂಧಪಟ್ಟಂತೆ ರೈತರ ಆತಂಕವನ್ನು ನಿವಾರಿಸುವ ದಿಕ್ಕಿನಲ್ಲಿ ಯಾವ ಪ್ರಯತ್ನವೂ ಅಧಿಕಾರಿಗಳಿಂದ ಅಥವಾ ಜಿಲ್ಲಾಡಳಿತದಿಂದ ನಡೆದಿಲ್ಲ ಎಂದು ಆರೋಪಿಸಿದರು.
ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳುವ ಮತ್ತು ಬರ ಹಾಗೂ ಅಂತರ್ಜಲ ಕೊರತೆಯಿಂದ ನರಳು ತ್ತಿರುವ ತಿಪಟೂರು, ಗುಬ್ಬಿ, ಚಿಕ್ಕನಾಯಕನಹಳ್ಳಿ ತಾಲೂಕು ಗಳಿಗೆ ಅಗತ್ಯ ಪ್ರಮಾಣದ ನೀರನ್ನೂ ಹಂಚಿಕೆ ಮಾಡದೇ ವಂಚನೆ ಮಾಡಲಾಗಿದೆ ಎಂದು ದೂರಿದರು. ಕಳೆದ 2 ತಿಂಗಳಿಂದ ಲಾಕ್ಡೌನ್ನಿಂದಾಗಿ ಇಡೀ ಜಿಲ್ಲೆಯ ರೈತರ ಸಮುದಾಯ ಸಾಕಷ್ಟು ನಷ್ಟಕ್ಕೆ ಗುರಿ ಯಾಗಿದ್ದು, ಅವರ ಸಮಸ್ಯೆಯನ್ನು ಸರ್ಕಾರ ಪರಿಹರಿ ಸಿಲ್ಲ.
ತರಾತುರಿಯಲ್ಲಿ ಯೋಜನೆ ಮುಗಿಸಲು ಸರ್ಕಾರ ಜಮೀನು ಕಳೆದುಕೊಳ್ಳುವ ಸಂತ್ರಸ್ತರ ಸಮಸ್ಯೆಗಳನ್ನು ಮಾತ್ರ ಕೇಳುತ್ತಿಲ್ಲ ಎಂದರು. ರೈತರಿಗೆ ಸಂಪೂರ್ಣ ಪರಿಹಾರ ಸಂದಾಯವಾದ ನಂತರವಷ್ಟೇ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು. ಸಮಿತಿ ಅಧ್ಯಕ್ಷ ದೇವರಾಜು ತಿಮ್ಲಾಪುರ, ಕಾರ್ಯದರ್ಶಿ ಎಸ್.ಎನ್.ಸ್ವಾಮಿ, ಉಪಾಧ್ಯಕ್ಷ ಬಿ.ಬಿ.ಸಿದ್ದಲಿಂಗಮೂರ್ತಿ, ಸಹ ಕಾರ್ಯ ದರ್ಶಿಗಳಾದ ಲೋಕೇಶ್, ಮನೋಹರ್ ಪಟೇಲ್, ಆರ್.ಡಿ. ಯೋಗಾನಂದಸ್ವಾಮಿ ಇತರರು ಇದ್ದರು.