ಶಿರಾದಲ್ಲಿ ಆತಂಕ ಹೆಚ್ಚಿಸಿದ ಸೀಲ್ಡೌನ್
Team Udayavani, Jun 19, 2020, 5:48 AM IST
ಶಿರಾ: ಆಂಧ್ರದ ಹಿಂದೂಪುರಕ್ಕೆ ಭೇಟಿ ನೀಡಿ ನಗರಕ್ಕೆ ವಾಪಸ್ ಬಂದಿದ್ದ ಪಾತ್ರೆ ವ್ಯಾಪಾರಿಯಲ್ಲಿ ಕಾಣಿಸಿಕೊಂಡಿದ್ದ ಕೊರೊನಾ ನಗರದಲ್ಲಿ ಸದ್ದಿಲ್ಲದೇ ವ್ಯಾಪಿಸು ತ್ತಿದೆಯೇ ಎನ್ನುವ ಆತಂಕ ಜನರಲ್ಲಿ ಮೂಡಿಸಿದೆ. ಮೊದಲಿಗೆ ಆತನಲ್ಲಿ ಕಾಣಿಸಿಕೊಂಡ ಸೋಂಕು, ಆತನ ಪ್ರಾಥಮಿಕ ಸಂಪರ್ಕಗಳಲ್ಲಿಯೂ ದೃಢಪಟ್ಟು ಒಮ್ಮೆಗೆ ಆತನ ಕುಟುಂಬ ವರ್ಗದ 6 ಮಂದಿಗೆ ಖಾತರಿಗೊಳ್ಳುವ ಮೂಲಕ ಸೋಂಕಿತರ ಸಂಖ್ಯೆ ಹೆಚ್ಚಿಸಿತ್ತು.
ನಂತರ ಆತನ ಸಂಪರ್ಕದಲ್ಲಿದ್ದ ಕಚೇರಿ ಮೊಹಲ್ಲಾ ವಾಸಿ ಸುಮಾರು 35 ವರ್ಷದ ವ್ಯಕ್ತಿಯೊಬ್ಬನಲ್ಲಿ ಸೋಂಕು ದೃಢಗೊಂಡು, ಸೋಂಕಿತರ ಸಂಖ್ಯೆಯನ್ನು ವೃದಿಸಿತ್ತು. ಸೋಂಕು ಕಂಡ ಬಂದ ಪ್ರದೇಶಗಳಲ್ಲಿ ಸೀಲ್ಡೌನ್ ಕಾರ್ಯ ನಡೆಸಲಾಗಿತ್ತು. ಇದರ ನಡುವೆ ಇಲ್ಲಿನ ಹೊಸ ಬಸ್ನಿಲ್ದಾಣದ ರಸ್ತೆ ಯಲ್ಲಿ ಬಸ್ ನಿಲ್ದಾಣದಿಂದ ಗಣಪತಿ ದೇವಾಲಯದ ಮಾರುಕಟ್ಟೆವರೆಗೆ ಮತ್ತು ಹಳೆ ಅಂಚೆ ಕಚೇರಿ ರಸ್ತೆಯಲ್ಲಿ ರಾಘವೇಂದ್ರ ಸ್ವಾಮಿ ದೇವಾಲಯದ ಬಳಿಯಿಂದ ಮೆಕ್ಕಾ ರೈಸ್ಮಿಲ್ ರಸ್ತೆ ತಿರುವು ಸೇರಿದಂತೆ ಗಾಂಧಿ ನಗರ ಬಡಾವಣೆ ಸೀಲ್ ಡೌನ್ ಮಾಡಲಾಗಿದೆ.
ಈ ಪ್ರದೇಶದಲ್ಲಿನ ರಸ್ತೆ ವ್ಯಾಪಾರ ವಹಿವಾಟು ಒಳಗೊಂ ಡಂತೆ ಎಲ್ಲ ಬಗೆಯ ಓಡಾಟ, ವಹಿವಾಟುಗಳನ್ನು ನಿಷೇಧಿಸಲಾಗಿದೆ ಮತ್ತು ನಿಷೇಧಿತ ಪ್ರದೇಶದಲ್ಲಿ ಸೋಂಕು ನಿವಾರಣಾ ದ್ರಾವಣ ಸಿಂಪಡಿಸಲಾಗುತ್ತಿದೆ. ನಗರದ ಪ್ರಮುಖ ವ್ಯಾಪಾರಗಳೆಲ್ಲವೂ ಇದೇ ಪ್ರದೇಶದಲ್ಲಿ ಕೇಂದ್ರಿಕೃತವಾಗಿದ್ದು, ಬಹು ಮುಖ್ಯವಾದಪ್ರದೇಶವನ್ನು ಸೀಲ್ಡೌನ್ ಮಾಡಿದ ಹಿನ್ನೆಲೆಯಲ್ಲಿ ನಗರವಾಸಿಗಳು ಆತಂಕಕ್ಕೆ ಈಡಾಗಿದ್ದಾರೆ.
ಇದರ ಮಧ್ಯದಲ್ಲಿ ಜನರ ನಡುವೆ ಸೋಂಕಿತರ ಸಂಖ್ಯೆ ಕುರಿತಂತೆ ಕ್ಷಣಕ್ಕೊಂದು ಗುಲ್ಲು ವ್ಯಾಪಿಸುತ್ತಿದ್ದು, ಸರಿಯಾದ ಮಾಹಿತಿ ಸಿಕ್ಕದೇ ಗೊಂದಲಕ್ಕೀಡಾಗಿದ್ದಾರೆ. ಸೋಂಕು ಹೆಚ್ಚಿದ ಹಿನ್ನೆಲೆಯಲ್ಲಿ ಇಲ್ಲಿನ ತಾಲೂಕು ಕಚೇರಿಗೆ ಹೋಗಿ ಬರುವವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ.