ಮೈಸೂರು: 6 ಜನರಲ್ಲಿ ಸೋಂಕು ಪತ್ತೆ
Team Udayavani, Jun 20, 2020, 5:30 AM IST
ಮೈಸೂರು: ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ ಆರು ಮಂದಿಯಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 129ಕ್ಕೇರಿದೆ. ತಮಿಳುನಾಡಿನಿಂದ ವಾಪಾಸಾಗಿದ್ದ ಇಟ್ಟಿಗೆಗೂಡಿನ ದಂಪತಿಯ ಪ್ರಾಥಮಿಕ ಸಂಪರ್ಕದಲ್ಲಿದ್ದ ನಾಲ್ವರಿಗೆ ಸೋಂಕು ದೃಢಪಟ್ಟಿದ್ದರೆ, ಬೆಂಗಳೂರಿನಿಂದ ನಂಜನಗೂಡಿಗೆ ಹಿಂತಿರುಗಿದ್ದ ಸೋಂಕಿತನ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಗೆ ಸೋಂಕು ಹರಡಿದೆ.
ಜೊತೆಗೆ ಕೋಲಾರದಿಂದ ಬಂದಿದ್ದ ವ್ಯಕ್ತಿಯಿಂದ ಆತನ ಸಹೋದರಿಗೆ ಸೋಂಕು ಹರಡಿದ್ದು, ಈ 6 ಮಂದಿಯನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 129 ಸೋಂಕಿತರಿದ್ದು, ಅವರಲ್ಲಿ 112 ಮಂದಿ ಗುಣಮುಖರಾಗಿದ್ದಾರೆ. 17 ಸಕ್ರಿಯ ಸೋಂಕಿತರಿದ್ದಾರೆ. ಈವರೆಗೆ 7247 ಮಂದಿ 14 ದಿನಗಳ ಕ್ವಾರಂಟೈನ್ ಮುಗಿಸಿದ್ದು, 1893 ಮಂದಿ ಕ್ವಾರಂಟೈನ್ ನಲ್ಲಿದ್ದಾರೆ. ಕೋಲಾರದ ಸೋಂಕಿತರ ಸಹೋದರಿ ನಗರದ ಸರಸ್ವತಿಪುರಂನಲ್ಲಿ ರುವ ಬ್ಯಾಂಕ್ವೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಸೋಂಕು ದೃಢಪಟ್ಟ ಹಿನ್ನೆಲೆ ಅಧಿಕಾರಿಗಳು ಬ್ಯಾಂಕನ್ನು ಸೀಲ್ಡೌನ್ ಮಾಡಿ ಸೋಂಕು ನಿವಾರಕ ದ್ರಾವಣ ಸಿಂಪಡಿಸಿದರು. ಸೋಂಕಿತೆ ವಾಸವಿರುವ ನಗರದ ಟಿ.ಕೆ.ಲೇಔಟ್ ಬಡಾವಣೆ ಮನೆಯ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕು ಹರಡಿರುವ ಹಿನ್ನೆಲೆ ಆಕೆಯೊಂದಿಗೆ ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಿ ಆಕೆಯ ನಿವಾಸದ ಸುತ್ತಾ ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ ಎಂದು ಡೀಸಿ ಅಭಿರಾಮ್ ಜಿ.ಶಂಕರ್ ಸಲಹೆ ನೀಡಿದರು.
ಕ್ವಾರಂಟೈನ್ ಕಡ್ಡಾಯ: ಮೈಸೂರಿನ ಸರಸ್ವತಿಪುರಂ ಶಾಖೆಯ ರಾಷ್ಟ್ರೀಕೃತ ಬ್ಯಾಂಕಿನ ಉದ್ಯೋಗಿ ಯಲ್ಲಿ ಸೋಂಕು ದೃಢಪಟ್ಟಿದ್ದು, ಕಳೆದ 2 ವಾರಗಳಲ್ಲಿ ಈ ಬ್ಯಾಂಕಿಗೆ ಭೇಟಿ ನೀಡಿರುವ ಅಧಿಕಾರಿಗಳು, ಸಿಬ್ಬಂದಿ, ಗ್ರಾಹಕರು ಸ್ವಯಂ ಪ್ರೇರಿತರಾಗಿ ದೂ: 0821-2423200 ಅಥವಾ 1077 ಇಲ್ಲಿಗೆ ಕರೆ ಮಾಡಿ ತಮ್ಮನ್ನು ನೋಂದಾಯಿಸಿಕೊಂಡು ಕಡ್ಡಾಯ ವಾಗಿ 14 ದಿನ ತಮ್ಮ ಮನೆ ಯಲ್ಲೇ ಕಡ್ಡಾಯವಾಗಿ ಕ್ವಾರಂಟೈನ್ ಆಗಬೇಕು ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಮನವಿ ಮಾಡಿದ್ದಾರೆ.