ಉದ್ಯೋಗ ಯೋಜನೆಗೆ ಮೋದಿ ಇಂದು ಚಾಲನೆ
Team Udayavani, Jun 25, 2020, 9:02 AM IST
ಲಕ್ನೋ: ಲಾಕ್ಡೌನ್ ಪರಿಣಾಮ ದೇಶದಲ್ಲಿ ಜನತೆಗೆ ಇರುವ ಕೆಲಸ ಕಳೆದು ಕೊಳ್ಳುವ ಪರಿಸ್ಥಿತಿ ಎದುರಾಗುತ್ತಿದ್ದರೆ, ಇತ್ತ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೂ. 26ರಂದು ಒಂದು ಕೋಟಿ ವಲಸಿಗರಿಗೆ ಉದ್ಯೋಗ ಕೊಡುವ ಕಾರ್ಯಕ್ರಮ ಆಯೋಜಿಸಿದ್ದಾರೆ. ಈ ಮೂಲಕ ಇಡೀ ದೇಶದಲ್ಲಿ ಉತ್ತರ ಪ್ರದೇಶ ತನ್ನ ರಾಜ್ಯಕ್ಕೆ ವಾಪಸು ಬಂದ ವಲಸೆ ಕಾರ್ಮಿಕರಿಗೆ ಕೈ ತುಂಬ ಕೆಲಸ ಕೊಡುತ್ತಿರುವ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವೀಡಿಯೋ ಕಾನ್ಪರೆನ್ಸ್ನಲ್ಲಿ ಭಾಗಿಯಾಗುವ ಮೂಲಕ ಯೋಜನೆಗೆ ಸಾಂಕೇತಿಕವಾಗಿ ಚಾಲನೆ ನೀಡಲಿದ್ದಾರೆ.
“ಈಗಾಗಲೇ ಉದ್ಯೋಗ ಖಾತ್ರಿ ಯೋಜನೆ ಯಡಿ 1.80 ಕೋಟಿ ಜನ ನೋಂದಣಿಯಾಗಿದ್ದು, ಇದರಲ್ಲಿ ಶೇ. 85ಲಕ್ಷ ಜನ ಸಕ್ರಿಯರಾಗಿದ್ದಾರೆ. ರಾಜ್ಯದ ಪ್ರಮುಖ ಇಲಾಖೆಗಳು, ವಲಸೆ ಬಂದವರಿಗಾಗಿಯೇ ಹೆಚ್ಚುವರಿ ಉದ್ಯೋಗ ಗಳನ್ನು ಸೃಷ್ಟಿಮಾಡಿದೆ. ಇದರಲ್ಲಿ ಸಣ್ಣ, ಮಧ್ಯಮ ಕೈಗಾರಿಕೆ, ಲೋಕೋಪಯೋಗಿ, ತೋಟಗಾರಿಕೆ ಉದ್ಯೋಗ ಸೃಷ್ಟಿಗೆ ಮುಂದಾಗಿವೆ. ಇದರ ಜೊತೆಗೆ, ರಾಷ್ಟ್ರೀಯ ರಿಯಲ್ ಎಸ್ಟೇಟ್ ಅಭಿ ವೃದ್ಧಿ ನಿಗಮ ಕೂಡ ಒಂದು ಲಕ್ಷ ಜನಕ್ಕೆ ಕೆಲಸ ಕೊಡಲು ಮುಂದೆ ಬಂದಿದೆ’ ಎಂದು ಸರಕಾರದ ಮುಖ್ಯಕಾರ್ಯದರ್ಶಿ ಕೆ. ತಿವಾರಿ ಹೇಳಿದ್ದಾರೆ.