ಡಿಕೆಶಿಗೆ ಕೇಡರ್ ಬೇಸ್ ಸವಾಲು!
"ವಿಸಿಟಿಂಗ್ ಕಾರ್ಡ್ ಹಿಂಬಾಲಕರ' ಬಿಟ್ಟು ನಿಷ್ಠಾವಂತರ ನೇಮಕ ತಂತ್ರ
Team Udayavani, Jul 6, 2020, 6:20 AM IST
ಬೆಂಗಳೂರು: ವರ್ಚುವಲ್ ಪದಗ್ರಹಣದ ಮೂಲಕ ಅಧಿಕಾರ ಸ್ವೀಕರಿಸಿ ಸಂಚಲನ ಮೂಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮುಂದೆ ಪದಾಧಿಕಾರಿಗಳ ತಂಡ ಕಟ್ಟುವ ಸವಾಲು ಎದುರಾಗಿದೆ.
ಒಂದು ವರ್ಷದಿಂದ ಪದಾಧಿಕಾರಿಗಳಿಲ್ಲದೆ ರಾಜ್ಯ ಕಾಂಗ್ರೆಸ್ ಕಾರ್ಯ ನಿರ್ವಹಿಸುತ್ತಿದೆ. ಈಗ ಡಿ.ಕೆ. ಶಿವ ಕುಮಾರ್ ಅಧಿಕಾರ ಸ್ವೀಕರಿಸಿರುವುದ ರಿಂದ ಪಕ್ಷದ ಪದಾಧಿಕಾರಿಗಳಾಗುವ ಆಕಾಂಕ್ಷಿಗಳಲ್ಲಿ ಆಸೆ ಗರಿಗೆದರಿದೆ. ಹಲವರು ತೆರೆಮರೆಯ ಲಾಬಿ ಆರಂಭಿಸಿದ್ದಾರೆ ಎನ್ನಲಾಗಿದೆ.
ಕೇಡರ್ ಬೇಸ್ ತಂಡ ರಚನೆ
ಡಿ.ಕೆ. ಶಿವ ಕುಮಾರ್ ಪಕ್ಷವನ್ನು ಮಾಸ್ ಬೇಸ್ ನಿಂದ ಕೇಡರ್ ಬೇಸ್ಗೆ ಪರಿ ವರ್ತಿಸುವ ಗುರಿ ಇರಿಸಿಕೊಂಡಿ ದ್ದಾರೆ. ಆದರೆ ಈ ಹಿಂದೆ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿಯಾಗಿ ಚೆನ್ನಾಗಿ ಕೆಲಸ ಮಾಡಿ ದವರನ್ನು ಮುಂದುವರಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಹಿಂದಿನ ಸಮಿತಿಯಲ್ಲಿ ನೇಮಕ ಗೊಂಡವರಲ್ಲಿ ಶೇ. 50 ಪದಾಧಿಕಾರಿ ಗಳು ಕೇವಲ “ವಿಸಿಟಿಂಗ್ ಕಾರ್ಡ್ ಪದಾಧಿಕಾರಿ’ಗಳಾಗಿದ್ದರು ಎಂಬ ಆರೋಪವೂ ಇದೆ.
ಹೊಸ ತಂಡ ರಚಿಸುವ ಸಂದರ್ಭದಲ್ಲಿ ಡಿಕೆಶಿ ಪಕ್ಷದ ಬೇರೆ ನಾಯಕರ ಅಭಿಪ್ರಾಯ ಮೀರಿ ನೇಮಕ ಮಾಡುವುದು ಕಷ್ಟ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು “ವಿಸಿಟಿಂಗ್ ಕಾರ್ಡ್’ ಹಿಂಬಾಲಕರನ್ನು ಕೈಬಿಟ್ಟು ನಿಷ್ಠಾವಂತ ಮತ್ತು ಯುವ ಕಾರ್ಯಕರ್ತರಿಗೆ ಅವಕಾಶ ಕೊಡಲು ಯಾವ ತಂತ್ರ ಪ್ರಯೋಗಿಸುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.
ಶಕ್ತಿ ಕೇಂದ್ರಗಳ ಪ್ರಭಾವ
ರಾಜ್ಯ ಕಾಂಗ್ರೆಸ್ನಲ್ಲಿ ಈಗ ಕೆಪಿಸಿಸಿ ಅಧ್ಯಕ್ಷರ ಹೊರತಾಗಿ ಮೂರು ಶಕ್ತಿ ಕೇಂದ್ರಗಳಿದ್ದು, ಸಿದ್ದರಾಮಯ್ಯ, ಖರ್ಗೆ ಮತ್ತು ಬಿ.ಕೆ. ಹರಿಪ್ರಸಾದ್ ತಮ್ಮ ಬೆಂಬಲಿಗರನ್ನು ಹೊಸ ಸಮಿತಿಯಲ್ಲಿ ಸೇರಿಸುವ ಸಾಧ್ಯತೆ ಇದೆ. ಅಲ್ಲದೆ ಮೂವರು ಕಾರ್ಯಾಧ್ಯಕ್ಷರು ತಮ್ಮ ಹಿಂಬಾಲಕರನ್ನು ಸೇರಿಸಲು ಪಟ್ಟು ಹಿಡಿಯುವ ಸಾಧ್ಯತೆ ಇದೆ.
ನೇಮಕ ಸದ್ಯಕ್ಕಿಲ್ಲ
ಸದ್ಯದ ಕೋವಿಡ್ ಪರಿಸ್ಥಿತಿಯಲ್ಲಿ ಪದಾಧಿಕಾರಿಗಳ ನೇಮಕದ ಆಲೋಚನೆ ಮಾಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದ್ದಾರೆ. ಮಾಧ್ಯಮ ಗಳೊಂದಿಗೆ ಮಾತ ನಾಡಿ, ಮೊದಲು ಪಕ್ಷದ ಮುಖಂಡರು ಆರೋಗ್ಯದತ್ತ ಗಮನ ಕೊಡಲಿ. ಸದ್ಯಕ್ಕೆ ಯಾವುದೇ ಪದಾಧಿಕಾರಿಗಳ ನೇಮಕದ ಚರ್ಚೆ ಇಲ್ಲ ಎಂದಿದ್ದಾರೆ.
ಒಂದು ವಾರದ ಬಳಿಕ ಕೋವಿಡ್ ಪರಿಸ್ಥಿತಿ ನೋಡಿಕೊಂಡು ಕೆಪಿಸಿಸಿ ಘಟಕಗಳಿಗೆ ಪದಾಧಿಕಾರಿಗಳ ನೇಮಕ ಮಾಡುವ ಕಡೆಗೆ ಗಮನಹರಿಸುತ್ತೇವೆ. ಗಡಿಬಿಡಿಯಲ್ಲಿ ಏನನ್ನೂ ಮಾಡುವುದು ಸರಿಯಲ್ಲ. ಇದರಿಂದ ಸರಕಾರಕ್ಕೆ ಸಮಸ್ಯೆ ಉಂಟಾಗುವುದು ಬೇಡ.
– ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ