ರಫೇಲ್ ಸಡ್ಡು: ಜುಲೈ ಅಂತ್ಯಕ್ಕೆ ಬರುವ ಸಮರ ವಿಮಾನ ನೇರ ಲಡಾಖ್ಗೆ?
Team Udayavani, Jul 20, 2020, 6:57 AM IST
ಹೊಸದಿಲ್ಲಿ: ಈ ಮಾಸಾಂತ್ಯಕ್ಕೆ ರಫೇಲ್ ಯುದ್ಧ ವಿಮಾನಗಳ ಮೊದಲ ಕಂತು ಫ್ರಾನ್ಸ್ನಿಂದ ಭಾರತಕ್ಕೆ ಆಗಮಿಸಲಿವೆ.
ಇವುಗಳನ್ನು ನೇರವಾಗಿ ಲಡಾಖ್ ಗಡಿಯಲ್ಲಿ ನಿಯೋಜಿಸಲು ಚಿಂತನೆ ನಡೆದಿದೆ.
ಇದೇ ವಾರ, ಜು.22ರಿಂದ ಎರಡು ದಿನಗಳ ಕಾಲ ಭಾರತೀಯ ವಾಯುಪಡೆಯ ಉನ್ನತ ಕಮಾಂಡರ್ಗಳ ಸಭೆ ನಡೆಯಲಿದೆ.
ಇದರಲ್ಲಿ ಲಡಾಖ್ ಸನಿಹದ ನೆಲೆಗಳಲ್ಲಿ ರಫೇಲ್ ಸಮರ ವಿಮಾನಗಳನ್ನು ನೆಲೆಗೊಳಿಸುವ ವಿಚಾರವೇ ಮುಖ್ಯವಾಗಿ ಚರ್ಚೆಯಾಗಲಿದೆ ಎಂದು ವಾಯುಪಡೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಭಾರತ – ಚೀನ ನಡುವೆ ಉದ್ವಿಗ್ನ ಸ್ಥಿತಿ ಹಿನ್ನೆಲೆಯಲ್ಲಿಯೇ ಈ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್. ಭದೌರಿಯಾ ಮತ್ತು ವಾಯುಪಡೆಯ ಎಲ್ಲ ಏಳು ಕಮಾಂಡರ್ಗಳು ಭಾಗಿಯಾಗಲಿದ್ದಾರೆ.
ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) ಪರಿಸ್ಥಿತಿ ಮತ್ತು ಚೀನಕ್ಕೆ ತಿರುಗೇಟು ನೀಡುವ ಬಗ್ಗೆ ಚರ್ಚೆ ನಡೆಯಲಿದೆ ಎನ್ನಲಾಗುತ್ತಿದೆ. ಈಗಾಗಲೇ ಆಗಿರುವ ಯುದ್ಧ ವಿಮಾನ ನಿಯೋಜನೆಯ ಬಗ್ಗೆಯೂ ಚರ್ಚಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಭಾರತೀಯ ವಾಯುಪಡೆ ತನ್ನ ಬತ್ತಳಿಕೆಯಲ್ಲಿರುವ ಎಲ್ಲ ಅತ್ಯಾಧುನಿಕ ಸಮರ ವಿಮಾನಗಳನ್ನು ಎಲ್ಎಸಿಯತ್ತ ಕಳುಹಿಸಿದೆ. ಇದರ ಜತೆಗೆ ಅತ್ಯಾಧುನಿಕ ಅಪಾಚೆ ಹೆಲಿಕಾಪ್ಟರ್ಗಳನ್ನೂ ಮುಂಚೂಣಿಯ ನೆಲೆಗಳಲ್ಲಿ ನಿಯೋಜಿಸಿದೆ.
ನೌಕಾಪಡೆಯಿಂದ ಅಭ್ಯಾಸ
ಎಲ್ಎಸಿಯಿಂದ ಚೀನ ಇನ್ನೂ ಪೂರ್ಣವಾಗಿ ಹಿಂದೆ ಸರಿಯದಿರುವ ಕಾರಣ ಭಾರತೀಯ ನೌಕಾಪಡೆಯು ಅಂಡಮಾನ್ ಮತ್ತು ನಿಕೋಬಾರ್ ಬಳಿಯ ಸಮುದ್ರ ಪ್ರದೇಶದಲ್ಲಿ ಅಭ್ಯಾಸ ನಡೆಸುತ್ತಿದೆ. ಈಸ್ಟರ್ನ್ ನೇವಲ್ ಕಮಾಂಡ್ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ನೇವಲ್ ಕಮಾಂಡ್ಗಳು ಈ ಅಭ್ಯಾಸದಲ್ಲಿ ಭಾಗಿಯಾಗಿವೆ.
ರಫೇಲ್ನಿಂದ ನೂರಾನೆ ಬಲ
ರಫೇಲ್ ಯುದ್ಧ ವಿಮಾನಗಳನ್ನೂ ಎಲ್ಎಸಿ ಬಳಿ ನಿಯೋಜಿಸಿದರೆ ಭಾರತದ ಕೈ ಮೇಲಾಗುತ್ತದೆ ಎಂಬುದು ವಾಯುಪಡೆಯ ಹಿರಿಯ ಅಧಿಕಾರಿಗಳ ನಿಲುವು. ರಫೇಲ್ಗಳು ಅತ್ಯಾಧುನಿಕವಾಗಿರುವುದಷ್ಟೇ ಅಲ್ಲದೆ, ಹೊಸ ಶಸ್ತ್ರಾಸ್ತ್ರಗಳ ಸಹಿತ ಹೋರಾಡಬಲ್ಲವು. ರಫೇಲ್ನಲ್ಲಿ ಏರ್ ಟು ಏರ್ ಕ್ಷಿಪಣಿಗಳನ್ನೂ ಅಳವಡಿಸಿ ದಾಳಿ ನಡೆಸಬಹುದು. ಇದರಿಂದ ದಕ್ಷಿಣ ಏಶ್ಯಾದಲ್ಲಿ ಭಾರತವು ಚೀನ ಮತ್ತು ಪಾಕಿಸ್ಥಾನಗಳಿಗಿಂತ ಬಲಿಷ್ಠವಾಗುತ್ತದೆ.