ಸಾಮುದಾಯಿಕ ಮಟ್ಟದಲ್ಲಿ ಕೋವಿಡ್ 19 ವೈರಸ್: ಹಲವು ರಾಜ್ಯ ಸರಕಾರಗಳ ಆತಂಕ
ವಾರದ ಅವಧಿಯಲ್ಲಿ ಸುಳಿವು ನೀಡಿದ 3 ರಾಜ್ಯಗಳು
Team Udayavani, Jul 27, 2020, 6:41 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ದೇಶದಲ್ಲಿ ಕೋವಿಡ್ 19 ಸೋಂಕು ಸಾಮುದಾಯಿಕ ಮಟ್ಟದಲ್ಲಿ ಹಬ್ಬಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ಕೇಂದ್ರ ಆರೋಗ್ಯ ಸಚಿವಾಲಯ ಪದೇ ಪದೆ ಸ್ಪಷ್ಟಪಡಿಸುತ್ತಿದ್ದರೂ, ನಾವೀಗಾಗಲೇ ಸಾಮುದಾಯಿಕ ವ್ಯಾಪಿಸುವಿಕೆಯ ಹಂತಕ್ಕೆ ತಲುಪಿದ್ದೇವೆ ಎಂಬ ಅನುಮಾನವನ್ನು ಹಲವು ರಾಜ್ಯಗಳು ವ್ಯಕ್ತಪಡಿಸಿವೆ.
ಕಳೆದೊಂದು ವಾರದಲ್ಲೇ ಕನಿಷ್ಠ 3 ರಾಜ್ಯಗಳು ಇಂಥದ್ದೊಂದು ಸುಳಿವನ್ನು ನೀಡಿವೆ. ಮೊದಲನೆಯದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೇ ಸ್ವತಃ, ಸೋಂಕು ರಾಜ್ಯದ ಕೆಲವು ಕರಾವಳಿ ಪ್ರದೇಶಗಳಲ್ಲಿ ಸಮುದಾಯ ಮಟ್ಟದಲ್ಲಿ ವ್ಯಾಪಿಸಿರುವ ಲಕ್ಷಣ ಕಾಣಿಸುತ್ತಿದೆ ಎಂದು ಹೇಳಿದ್ದರು. ಅದಾದ ಬಳಿಕ, ತೆಲಂಗಾಣ ಕೂಡ ತನ್ನ ಕೋವಿಡ್ 19 ಸ್ಥಿತಿಯನ್ನು ಉಲ್ಲೇಖಿಸುತ್ತಾ ಇದೇ ರೀತಿಯ ಅನುಮಾನವನ್ನು ವ್ಯಕ್ತಪಡಿಸಿದೆ.
ಈಗ ಮಹಾರಾಷ್ಟ್ರ ಆರೋಗ್ಯ ಕಾರ್ಯದರ್ಶಿಯವರೂ, ಸಾಮುದಾಯಿಕ ಮಟ್ಟದಲ್ಲಿ ಸೋಂಕು ವ್ಯಾಪಿಸಿಲ್ಲ ಎಂದು ಹೇಳಲಾಗದು. ಆದರೆ, ಆ ಕುರಿತು ಅಧಿಕೃತ ಘೋಷಣೆಯನ್ನು ಸರಕಾರವೇ ಮಾಡಬೇಕು ಎಂದಿದ್ದಾರೆ. ಬಹುತೇಕ ಆರೋಗ್ಯ ತಜ್ಞರು ಹಾಗೂ ವಿಜ್ಞಾನಿಗಳು ಕೂಡ ಭಾರತವು ಸಾಮುದಾಯಿಕ ವ್ಯಾಪಿಸುವಿಕೆಯ ಹಂತಕ್ಕೆ ತಲುಪಿರುವುದು ನಿಜ ಎಂದೇ ಹೇಳುತ್ತಿದ್ದಾರೆ.
48,661 ಹೊಸ ಪ್ರಕರಣ ಪತ್ತೆ
ಭಾರತದಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ 14 ಲಕ್ಷ ಸಮೀಪಿಸುತ್ತಿದ್ದು, ಶನಿವಾರದಿಂದ ರವಿವಾರಕ್ಕೆ 24 ಗಂಟೆಗಳ ಅವಧಿಯಲ್ಲಿ 48,661 ಮಂದಿಗೆ ಸೋಂಕು ದೃಢಪಟ್ಟಿದೆ. ಜತೆಗೆ 705 ಸೋಂಕಿತರು ಅಸುನೀಗುವ ಮೂಲಕ, ಸಾವಿನ ಸಂಖ್ಯೆ 32 ಸಾವಿರ ದಾಟಿದೆ. ಪ್ರಸ್ತುತ ದೇಶದಲ್ಲಿ 4.67 ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿದ್ದು, ಸತತ 4ನೇ ದಿನವೂ ದೈನಂದಿನ ಸೋಂಕಿತರ ಸಂಖ್ಯೆ 45 ಸಾವಿರದ ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಗುಣಮುಖ ಪ್ರಮಾಣದಲ್ಲಿ ಹೊಸ ದಾಖಲೆ
ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ನಡುವೆಯೂ ದೇಶದಲ್ಲಿ ಗುಣಮುಖ ಪ್ರಮಾಣದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ಇದೇ ಮೊದಲ ಬಾರಿಗೆ ಕೇವಲ 24 ಗಂಟೆಗಳಲ್ಲಿ ಬರೋಬ್ಬರಿ 36,145 ಸೋಂಕಿತರು ಗುಣಮುಖರಾಗಿ ಮನೆಗೆ ಮರಳಿದ್ದಾರೆ.
ಈ ಮೂಲಕ ಗುಣಮುಖ ಪ್ರಮಾಣವು ಶೇ.63.92ಕ್ಕೇರಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಒಟ್ಟಿನಲ್ಲಿ ಈವರೆಗೆ 8.85 ಲಕ್ಷಕ್ಕೂ ಅಧಿಕ ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇದೇ ವೇಳೆ, ದೇಶದ ಮರಣ ಪ್ರಮಾಣ ಶೇ.2.31ಕ್ಕಿಳಿದಿರುವುದಾಗಿಯೂ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.