ಕೊಣಾಜೆ ಪ್ರಥಮ ದರ್ಜೆ ಕಾಲೇಜು ಬಂದ್ ಮಾಡದಿರಲು ತೀರ್ಮಾನ
Team Udayavani, Jul 28, 2020, 8:16 AM IST
ಮಂಗಳೂರು: ಸರಕಾರದ ಅನು ಮೋದನೆ ಇಲ್ಲದಿರುವುದು ಹಾಗೂ ಆರ್ಥಿಕ ಹೊರೆ ಕಡಿಮೆಗೊಳಿಸುವ ಉದ್ದೇಶದಿಂದ ಬಂದ್ ಮಾಡಲು ಉದ್ದೇಶಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕೊಣಾಜೆ ಕ್ಯಾಂಪಸ್ನ ಪ್ರಥಮ ದರ್ಜೆ ಕಾಲೇಜನ್ನು ಮುಂದುವರಿಸಲು ತೀರ್ಮಾನಿಸಲಾಗಿದ್ದು, ಈ ವರ್ಷವೂ ವಿದ್ಯಾರ್ಥಿಗಳ ದಾಖಲಾತಿಗೆ ಅವಕಾಶ ಕಲ್ಪಿಸಲಾಗಿದೆ.
“ಕೊಣಾಜೆ ಕ್ಯಾಂಪಸ್ನ ಪ್ರ.ದ. ಕಾಲೇಜು ಬಂದ್’ ಎಂಬ ಶೀರ್ಷಿಕೆಯಲ್ಲಿ ಜೂ. 22ರಂದು “ಉದಯವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ಕಾಲೇಜನ್ನು ಬಂದ್ ಮಾಡದಂತೆ ಸಾಮಾಜಿಕ ಮುಖಂಡರ ಸಹಿತ ಹಲವರು ಸರಕಾರವನ್ನು ಆಗ್ರಹಿಸಿದ್ದರು.
“ಉದಯವಾಣಿ’ ಜತೆಗೆ ಮಾತನಾಡಿದ ವಿ.ವಿ. ಕುಲಪತಿ ಪ್ರೊ| ಪಿ.ಎಸ್. ಯಡಪಡಿತ್ತಾಯ ಅವರು, “ಕೊಣಾಜೆಯ ಪ್ರ.ದ. ಕಾಲೇಜು ಬಂದ್ ಮಾಡುವ ಬಗ್ಗೆ ವಿ.ವಿ. ಈ ಹಿಂದೆ ಯೋಚಿಸಿತ್ತು. ಆದರೆ ಕೊರೊನಾ ಹಿನ್ನೆಲೆ ಹಾಗೂ ವಿದ್ಯಾರ್ಥಿಗಳು-ಪೋಷಕರಿಗೆ ಸಮಸ್ಯೆ ಆಗಬಾರದು ಎಂಬ ನೆಲೆಯಲ್ಲಿ ಈ ವರ್ಷ ಕಾಲೇಜು ಬಂದ್ ಮಾಡುವುದು ಬೇಡ ಎಂಬ ತೀರ್ಮಾನವನ್ನು ವಿ.ವಿ. ಸಿಂಡಿಕೇಟ್ ಸಭೆ ತೀರ್ಮಾನಿಸಿದೆ. ಸರಕಾರಕ್ಕೆ ಈ ಸಂಬಂಧ ಪತ್ರವನ್ನೂ ಬರೆಯಲಾಗಿದೆ. ಬಂದ್ ಮಾಡದಂತೆ ಉನ್ನತ ಶಿಕ್ಷಣ ಸಚಿವರು ಕೂಡ ದೂರವಾಣಿ ಮೂಲಕ ಸೂಚಿಸಿದ್ದಾರೆ. ಸರಕಾರದಿಂದ ಅಧಿಕೃತ ಪ್ರಕಟನೆ ಇನ್ನಷ್ಟೇ ಬರಬೇಕಿದೆ. ಇದೀಗ ವಿದ್ಯಾರ್ಥಿಗಳ ಸೇರ್ಪಡೆ ಆರಂಭಿಸಲಾಗಿದೆ’ ಎಂದರು.