ಕಟಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸೀಲ್ಡೌನ್
Team Udayavani, Jul 29, 2020, 1:34 PM IST
ಗುಳೇದಗುಡ್ಡ: ತಾಲೂಕಿನಲ್ಲಿ 10 ಜನರಿಗೆ ಮಹಾಮಾರಿ ಕೋವಿಡ್ ಸೋಂಕು ದೃಢಪಟ್ಟಿದೆ. ಪುರಸಭೆ ಮುಖ್ಯಾಧಿಕಾರಿಗೂ ಸಹ ಕೋವಿಡ್ ಸೊಂಕು ಕಾಣಿಸಿಕೊಂಡಿದ್ದು, ಜನರಲ್ಲಿ ಮತ್ತಷ್ಟು ಭಯದ ವಾತಾವರಣ ಉಂಟಾಗಿದೆ.
ಪಟ್ಟಣದಲ್ಲಿ ಒಟ್ಟು ಎಂಟು ಜನರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿಗುಳೇದಗುಡ್ಡ ಪುರಸಭೆಯ ಮುಖ್ಯಾಧಿಕಾರಿಗೆ, ಕಮತಗಿ ರಸ್ತೆಯ ಹತ್ತಿರದ ಇಬ್ಬರಿಗೆ, ಸಂಗೋಂದಿ ಓಣಿಯಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದ್ದು, ಮೂವರು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಟಗೇರಿ ಗ್ರಾಮದಲ್ಲಿ ಓರ್ವನಿಗೆ, ತಿಮ್ಮಸಾಗರ ಗ್ರಾಮದಲ್ಲಿ ಒಬ್ಬರಿಗೆ ಹೀಗೆ ಒಟ್ಟು ತಾಲೂಕಿನಲ್ಲಿ ಹತ್ತು ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ ಎಂದು ತಹಶೀಲ್ದಾರ್ ಜಿ.ಎಂ. ಕುಲಕರ್ಣಿ ತಿಳಿಸಿದ್ದಾರೆ.
ಕಟಗೇರಿ ಗ್ರಾಮದ ಪ್ರಾಥಮಿಕ ಆಸ್ಪತ್ರೆಯ ವೈದ್ಯರೊಬ್ಬರಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಆಸ್ಪತ್ರೆಯನ್ನು ಸೀಲ್ಡೌನ್ ಮಾಡಲಾಗಿದೆ. ಅಲ್ಲದೇ ಕೆಲವಡಿ ಗ್ರಾಮ ಪಂಚಾಯತ ವ್ಯಾಪ್ತಿಯ ತಿಮ್ಮಸಾಗರ ಗ್ರಾಮದಲ್ಲಿ ಓರ್ವನಿಗೆ ಪಾಸಿಟಿವ್ ಬಂದಿದೆ. ಕಂದಾಯ ನಿರೀಕ್ಷಕ ಎಂ.ಎಸ್. ಅಂಗಡಿ, ಪಿಡಿಒ ಜಿ.ಎಂ. ಕಾಳಗಿ ಸ್ಯಾನಿಟೈಸರ್ ಮಾಡಿಸಿ, ಸೀಲ್ ಡೌನ್ ಮಾಡಿದ್ದಾರೆ. ಪ್ರಾಥಮಿಕ ಸಂಪರ್ಕಿತರನ್ನು ಗ್ರಾಮದ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ.
ಜು. 29ರಿಂದ ಮಧ್ಯಾಹ್ನ 12ಕ್ಕೆ ಬಂದ್: ಪಟ್ಟಣದಲ್ಲಿ ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಪಟ್ಟಣದ ಗುರು ಹಿರಿಯರ ಅನುಮತಿ ಮೇರೆಗೆ ಪುರಸಭೆ ವ್ಯಾಪ್ತಿಯಲ್ಲಿ ಬರುವ ಅಂಗಡಿ ಮುಂಗಟ್ಟುಗಳನ್ನು ಜು. 29ರಿಂದ ಆ.4ರವರೆಗೆ ಬೆ. 6ಗಂಟೆಯಿಂದ ಮಧ್ಯಾಹ್ನ 12ಗಂಟೆಯವರೆಗೆ ಮಾತ್ರ ಅಂಗಡಿ ತೆರೆಯಬೇಕು. ಮ. 12ಗಂಟೆ ನಂತರ ಎಲ್ಲ ಅಂಗಡಿಗಳನ್ನು ಬಂದ್ ಮಾಡಿ, ಸಾರ್ವಜನಿಕರ ಅನಗತ್ಯ ಸಂಚಾರ ನಿಷೇಧಿಸಲಾಗಿದೆ ಎಂದು ತಹಶೀಲ್ದಾರ್ ಜಿ.ಎಂ. ಕುಲಕರ್ಣಿ ತಿಳಿಸಿದ್ದಾರೆ.