ಮೃತ ಉದ್ಯೋಗಿಗಳ ಕುಟುಂಬಕ್ಕೆ ಇನ್ನುಸುಲಭವಾಗಿ ತಾತ್ಕಾಲಿಕ ಪಿಂಚಣಿ ಲಭ್ಯ
Team Udayavani, Aug 3, 2020, 9:26 AM IST
ಸಾಂದರ್ಭಿಕ ಚಿತ್ರ
ನವದೆಹಲಿ: ಸೇವಾವಧಿ ಮುಗಿಯುವ ಮುನ್ನವೇ ಮೃತಪಟ್ಟ ಸರ್ಕಾರಿ ಉದ್ಯೋಗಿಯ ಕುಟುಂಬಕ್ಕೆ ಇನ್ನು ಅಲ್ಪಮಟ್ಟಿಗೆ ನಿರಾಳತೆ ಸಿಗಲಿದೆ. ಉದ್ಯೋಗಿ ಮರಣ ಹೊಂದಿದ ವೇಳೆ ಕುಟುಂಬಿಗರಿಗೆ ಸಿಗಬೇಕಾದ ತಾತ್ಕಾಲಿಕ ಕೌಟುಂಬಿಕ ಪಿಂಚಣಿ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಸಿದೆ. ಅಗತ್ಯ ದಾಖ ಲೆಗಳನ್ನು ಸಲ್ಲಿಸಿದರೆ ತಕ್ಷಣವೇ ಈ ಪಿಂಚಣಿಯನ್ನು ಪಡೆಯಲು ಕುಟುಂಬಸ್ಥರಿಗೆ ಸಾಧ್ಯವಾಗಲಿದೆ.
ಇಲ್ಲಿಯವರೆಗೆ ಉದ್ಯೋಗಿಯೊಬ್ಬ ಸೇವಾವಧಿ ಯಲ್ಲಿರುವಾಗ ಮೃತಪಟ್ಟಾಗ ವಿಭಾಗದ ಮುಖ್ಯಸ್ಥರು, ಕೌಟುಂಬಿಕ ಪಿಂಚಣಿಯನ್ನು ಮಂಜೂರು ಮಾಡುವುದು, ಹಣವನ್ನು ಪಡೆದುಕೊಳ್ಳುವುದು ಅದಕ್ಕೆ ಸಂಬಂಧಪಟ್ಟ ಪತ್ರಕ 18 ಅನ್ನು ಪಾವತಿ ಮತ್ತು ಲೆಕ್ಕ (ಪೇ ಆ್ಯಂಡ್ ಅಕೌಂಟ್ಸ್) ಕಚೇರಿಗೆ ವರ್ಗಾಯಿಸುವುದು ಮಾಡುತ್ತಿದ್ದರು. ಇಲ್ಲಿ ಕೇಂದ್ರದ ಗಮನಕ್ಕೆ ಬಂದ ಸಂಗತಿಯೆಂದರೆ ಈ ರೀತಿ ದಾಖಲೆ ಸಲ್ಲಿಕೆ ಪ್ರಕ್ರಿಯೆಯೇ ವಿಪರೀತ ವಿಳಂಬವಾಗುತ್ತಿದೆ. ಆದ್ದರಿಂದ ಉದ್ಯೋಗಿ ಮರಣ ಹೊಂದಿದ ವೇಳೆಯಲ್ಲಿ ಈ ಹಣ ಕುಟುಂಬಸ್ಥರಿಗೆ ಸಿಗದೇ ಬಹಳ ತಾಪತ್ರಯವಾಗಿದೆ.
ಬದಲಾಗಿದ್ದೇನು?: ಈ ಪರಿಸ್ಥಿತಿಯನ್ನು ಸರಿಪಡಿಸಲು ಕೇಂದ್ರ ಒಂದು ಮಹತ್ವದ ಹೆಜ್ಜೆಯಿಟ್ಟಿದೆ. 1978ರ ಸಿಸಿಎಸ್ (ಸೆಂಟ್ರಲ್ ಸಿವಿಲ್ ಸರ್ವಿಸಸ್) ನಿಯಮಗಳಲ್ಲಿ 80 ಎಯನ್ನು ಬದಲಿಸಿದೆ. ತಾತ್ಕಾಲಿಕ ಪಿಂಚಣಿಗಾಗಿ ಕುಟುಂಬಸ್ಥರು ಸಲ್ಲಿಸುವ ಪತ್ರಕ 14, ಮರಣಪತ್ರ, ಹಕ್ಕುದಾರರ ಬ್ಯಾಂಕ್ ಖಾತೆ ವಿವರಗಳು ಸರಿಯಾಗಿದೆ ಎಂದು ಕಂಡುಬಂದರೆ, ಕೂಡಲೇ ವಿಭಾ ಗದ ಮುಖ್ಯಸ್ಥ ಹಣ ಪಾವತಿ ಮಾಡ ಬಹುದು ಎಂದು ನಿಯಮ ಬದಲಾಗಿದೆ.