ಮಗಳ ಹತ್ಯೆ ಆರೋಪಿ ಇಂದ್ರಾಣಿ ಮುಖರ್ಜಿಯ ಜಾಮೀನು ಅರ್ಜಿ ತಿರಸ್ಕೃತ
Team Udayavani, Aug 7, 2020, 12:56 AM IST
ಮುಂಬೈ: ಮಗಳು ಶೀನಾ ಬೋರಾಳ ಹತ್ಯೆ ಆರೋಪಿ ಇಂದ್ರಾಣಿ ಮುಖರ್ಜಿ ಅವರು ಸಲ್ಲಿಸಿದ ಜಾಮೀನು ಅರ್ಜಿಯನ್ನು ವಿಶೇಷ ಸಿಬಿಐ ನ್ಯಾಯಾಲಯ ಆ. 6ರಂದು ತಿರಸ್ಕರಿಸಿದೆ.
2012ರ ಎ. 24ರಂದು ಶೀನಾ ಬೋರಾ ಹತ್ಯೆಯಾಗಿತ್ತು. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀನಾ ಬೋರಾ ತಾಯಿ ಇಂದ್ರಾಣಿ ಮುಖರ್ಜಿ ಮತ್ತು ಇಂದ್ರಾಣಿ ಪತಿ ಪೀಟರ್ ಮುಖರ್ಜಿ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದರು.
ಇಂದ್ರಾಣಿ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಕಾರು ಚಾಲಕ ಶ್ಯಾಮ್ ರಾಯ್ ಈ ಪ್ರಕರಣದ ಸಹ ಆರೋಪಿಗಳಾಗಿದ್ದಾರೆ.
ಪ್ರಕರಣದಲ್ಲಿ ಕೊಟ್ಯಂತರ ರೂ. ಅವ್ಯವಹಾರ ನಡೆದಿರುವುದರಿಂದ ತನಿಖೆಯನ್ನು ಸಿಬಿಐಗೆ ಮಹಾರಾಷ್ಟ್ರ ಸರಕಾರ ವಹಿಸಿತ್ತು.
ನಾಲ್ಕು ಬಾರಿ ಜಾಮೀನು ತಿರಸ್ಕೃತ
ಆರೋಪಿ ಇಂದ್ರಾಣಿ ಅವರು 4 ಬಾರಿ ಜಾಮೀನು ಸಲ್ಲಿಸಿದ್ದು ಪ್ರತಿ ಸಲವೂ ತಿರಸ್ಕೃತಗೊಂಡಿದೆ. ಪ್ರಸುತ ಅವರನ್ನು ಬೈಕುಲಾ ಜೈಲಿನಲ್ಲಿಡಲಾಗಿದೆ. ಆರೋಪಿಯು ಪ್ರಭಾವಿ ಉದ್ಯಮಿಯಾಗಿದ್ದು, ಜಾಮೀನು ನೀಡಿದರೆ ಸಾಕ್ಷಿಗಳಿಗೆ ಬೆದರಿಕೆಯೊಡ್ಡುವ ಸಾಧ್ಯತೆಯಿದೆ ಎಂದು ಸಿಬಿಐ ವಿಶೇಷ ನ್ಯಾಯಾಲಯದ ಜಡ್ಜ್ ಜೆಸಿ ಜಗದಾಳೆ ಜಾಮೀನು ಅರ್ಜಿ ತಿರಸ್ಕಾರಕ್ಕೆ ಕಾರಣ ನೀದ್ದಾರೆ. ಆರೋಗ್ಯ ಕ್ಷೀಣಿಸುತ್ತಿರುವುದನ್ನು ಉಲ್ಲೇಖಿಸಿ ಇಂದ್ರಾಣಿ ಕಳೆದ ವರ್ಷ ಡಿಸೆಂಬರ್ನಲ್ಲೂ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸಿಬಿಐ ನ್ಯಾಯಾಲಯ ತಿರಸ್ಕೃತಗೊಳಿಸಿತ್ತು.
ಕಾಲ್ ರೆಕಾರ್ಡ್ ಸಾಕ್ಷ್ಯ
2012ರ ಎಪ್ರಿಲ್ 24, 25ರ ಎರಡು ದಿನಗಳ ಇಂದ್ರಾಣಿ ಹಾಗೂ ಪೀಟರ್ ನಡುವಿನ ಫೋನ್ ಸಂಭಾಷಣೆ ವಿವರಗಳನ್ನು ಆಲಿಸಿದ ಪೊಲೀಸರಿಗೆ ಇವರಿಬ್ಬರ ಸಂಚು ಬೆಳಕಿಗೆ ಬಂದಿದೆ. ಆಗ ಪೀಟರ್ ಯುಕೆಯಲ್ಲಿ, ಇಂದ್ರಾಣಿ ಭಾರತದಲ್ಲಿದ್ದರು. ಅವರು ಶೀನಾ ಇನ್ನೂ ಯುಎಸ್ ನಲ್ಲಿದ್ದಾಳೆ ಎಂದು ಹೇಳುತ್ತಾ ಬಂದಿದ್ದರು.
2015ರಲ್ಲಿ ನಾಲ್ವರು ಆರೋಪಿಗಳ ಬಂಧನ
ಶೀನಾ ಬೋರಾ ತಂದೆ ಪೀಟರ್ ಮುಖರ್ಜಿಯನ್ನು 2015ರಲ್ಲಿ ಬಂಧಿಸಿ, ಅವರ ವಿರುದ್ಧ ಐಪಿಸಿ ಸೆಕ್ಷನ್ 302, 201, 34, 420, 364 ಹಾಗೂ 120 ಬಿ ಅನ್ವಯ ಪ್ರಕರಣ ದಾಖಲಿಸಲಾಗಿತ್ತು. ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀನಾ ಬೋರಾ ತಾಯಿ ಇಂದ್ರಾಣಿ ಹಾಗೂ ಅವರ ಕಾರು ಚಾಲಕ ಶ್ಯಾಮ್ ರಾಯ್, ಇಂದ್ರಾಣಿ ಅವರ ಮಾಜಿ ಪತಿ ಸಂಜೀವ್ ಖನ್ನಾರನ್ನು ಬಂಧಿಸಿ ವಿಚಾರಣೆಗೊಳಪಡಿಸಿ, ಜೈಲಿಗೆ ಕಳಿಸಲಾಗಿತ್ತು.