ಉದಯವಾಣಿ ಫಾಲೋಅಪ್: ತಪ್ಪಿತಸ್ಥ ಮೌಲ್ಯಮಾಪಕರ ವಿರುದ್ಧ ಕ್ರಮಕ್ಕೆ ಶಿಕ್ಷಣ ಸಚಿವರ ಸೂಚನೆ
Team Udayavani, Aug 22, 2020, 6:30 AM IST
ಮಂಗಳೂರು: ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಕಡಿಮೆ ಅಂಕ ನೀಡಿ ಅನುತ್ತೀರ್ಣಗೊಳಿಸಿದ ಮೌಲ್ಯಮಾಪಕರ ವಿರುದ್ಧ ತತ್ಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದಾಗಿ ಎಸೆಸೆಲ್ಸಿ ಪರೀಕ್ಷಾ ಮಂಡಳಿಯ ನಿರ್ದೇಶಕರಿಗೆ ಶಿಕ್ಷಣ ಸಚಿವ ಎಸ್. ಸುರೇಶ್ಕುಮಾರ್ ಸೂಚಿಸಿದ್ದಾರೆ.
ಎಸೆಸ್ಸೆಲ್ಸಿ ಫಲಿತಾಂಶಕ್ಕೆ ಸಂಬಂಧಿಸಿದಂತೆ ಕೆಲವು ವಿದ್ಯಾರ್ಥಿಗಳಿಗೆ ಉತ್ತೀರ್ಣರಾದರೂ ಕಡಿಮೆ ಅಂಕ ನೀಡಿ ಅನುತ್ತೀರ್ಣ ಗೊಳಿಸಿರುವುದು ಗಮನಕ್ಕೆ ಬಂದಿದೆ. ಹೆಚ್ಚು ಅಂಕ ಪಡೆದವರಿಗೆ ಅವರು ಬರೆದ ಒಟ್ಟು ಪುಟ ಸಂಖ್ಯೆಯನ್ನೇ ಅಂಕವನ್ನಾಗಿ ನೀಡಿ ಅನುತ್ತೀರ್ಣಗೊಳಿಸಿ ರುವುದು ಅಕ್ಷಮ್ಯ. ಇಂತಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೌಲ್ಯಮಾಪನ ನಡೆಸಿದ ಮೌಲ್ಯಮಾಪಕರ ವಿರುದ್ಧ ತತ್ಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಮಂಡಳಿ ನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ ಎಂದು ಸಚಿವರ ಆಪ್ತ ಸಹಾಯಕರು “ಉದಯವಾಣಿ’ಗೆ ತಿಳಿಸಿದ್ದಾರೆ.
ಮೌಲ್ಯಮಾಪಕರ ಎಡವಟ್ಟಿ ನಿಂದಾಗಿ ವಿದ್ಯಾರ್ಥಿಗಳು ಅಂಕ ಕಳೆದುಕೊಂಡಿರುವ ಬಗ್ಗೆ “ಉದಯವಾಣಿ’ ಆ. 19 ಮತ್ತು
ಆ. 21ರಂದು ವರದಿ ಪ್ರಕಟಿಸಿತ್ತು. ಅಲ್ಲದೆ ಈ ವರದಿಯನ್ನು ಶಿಕ್ಷಣ ಸಚಿವರಿಗೆ ಕಳುಹಿಸಿಕೊಡಲಾಗಿತ್ತು. ವರದಿಯ ತುಣುಕನ್ನೂ ಸಚಿವರು ಎಸೆಸೆಲ್ಸಿ ಪರೀಕ್ಷಾ ಮಂಡಳಿ ನಿರ್ದೇಶಕರಿಗೆ ನೀಡಿದ್ದಾರೆ ಎಂದವರು ತಿಳಿಸಿದ್ದಾರೆ.