ಬೆಳೆಯುವ ಗಿಡಗಳನ್ನು ಮಕ್ಕಳಂತೆ ಕಾಪಾಡುತ್ತಾರೆ ಗಂಗಾವತಿಯ ಮಧು!ಇವರ ಸೇವೆ ಎಲ್ಲರಿಗೂ ಮಾದರಿ
Team Udayavani, Sep 1, 2020, 12:11 PM IST
ಗಂಗಾವತಿ: ಪರಿಸರ ಸಂರಕ್ಷಣೆ ಕುರಿತು ಭಾಷಣ ಮಾಡುವವರೆ ಹೆಚ್ಚಿರುವಾಗ ನಗರದ ಮಧುಸೂಧನ ಶೆಡ್ಡಿ ಎನ್ನುವ ಯುವಕ ನಗರದಾದ್ಯಂತ 5000 ಕ್ಕೂ ಅಧಿಕ ಸಸಿಗಳನ್ನು ನೆಟ್ಟು ಮಕ್ಕಳಂತೆ ಜೋಪಾನ ಮಾಡುತ್ತಿದ್ದಾರೆ.
ಕಳೆದ 5 ವರ್ಷಗಳಿಂದ ನಗರದ ಪ್ರಮುಖ ರಸ್ತೆ, ಜೂನಿಯರ್ ಕಾಲೇಜು, ತಾಲ್ಲೂಕು ಕ್ರೀಡಾಂಗಣ ಪ್ರಮುಖ ಸರಕಾರಿ ಶಾಲೆ ಕಾಲೇಜುಗಳ ಮೈದಾನದಲ್ಲಿ ಸಸಿಗಳನ್ನು ನೆಟ್ಟು ಸ್ವಂತ ಖರ್ಚಿನಲ್ಲಿ ಗಾರ್ಡ್ ಗಳನ್ನು ಹಾಕಿದ್ದಾರೆ. ಮಳೆಗಾಲದಲ್ಲಿ ಬೆಳೆಯುವ ಗಿಡಗಳಿಗೆ ಬಿಳಿರೋಗ ಬಾರದಂತೆ ಬೇವಿನ ರಸವನ್ನು ನಿತ್ಯವೂ ಗಿಡಗಳಿಗೆ ಸಿಂಪಡಣೆ ಮಾಡುತ್ತಿದ್ದಾರೆ.
ಮರಗಳ ಸಂರಕ್ಷಣೆಯಲ್ಲಿ ಸದಾ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವ ಮಧುಸೂದನ್ ಶೆಡ್ಡಿಯವರಿಗೆ ಮನೆಯರು ಸಂಪೂರ್ಣ ಸಹಕಾರ ನೀಡಿದ್ದಾರೆ. ಈಗಾಗಲೇ ಹಲವು ಸಂಘಸಂಸ್ಥೆಯವರು ಶೆಡ್ಡಿಯವರನ್ನು ಸನ್ಮಾನಿಸಿದ್ದಾರೆ.
ತಮ್ಮ ಬಿಡುವಿನ ಸಮಯದಲ್ಲಿ ಯಾವುದಾದರೂ ಜಾಗದಲ್ಲಿ ಹಾಕಿದ ಸಸಿಗಳನ್ನು ಪೋಷಣೆ ಮಾಡುವ ಶೆಡ್ಡಿ ಭಾಷಣಗಳನ್ನು ಮಾಡದೇ ಮೌನವಾಗಿ ಪರಿಸರ ಸಂರಕ್ಷಣೆಯಲ್ಲಿ ನಿರತರಾಗಿದ್ದಾರೆ.
ಜೀವಸಂಕುಲಕ್ಕೆ ಅರಣ್ಯ ಅವಶ್ಯ: ವಿಶ್ವದಲ್ಲಿ ಮನುಷ್ಯ ಸೇರಿ ಜೀವ ಸಂಕುಲ ಉಳಿಯಲು ಅರಣ್ಯ ಅತ್ಯವಶ್ಯಕವಾಗಿದೆ. ಪ್ರತಿ ವರ್ಷ ಕೋಟ್ಯಾಂತರ ರೂ.ಗಳನ್ನು ಅರಣ್ಯ ಬೆಳೆಸಲು ಬಜೆಟ್ ನಲ್ಲಿ ಇಡಲಾಗುತ್ತದೆ. ಸ್ವಾತಂತ್ರ್ಯ ನಂತರ ಅರಣ್ಯ ಬೆಳೆಸಲು ತೋರಿಸಿದ ಖರ್ಚಿನಲ್ಲಿ ಇಡೀ ಭೂಮಂಡಲ ಅರಣ್ಯದಿಂದ ತುಂಬಿರಬೇಕಿತ್ತು. ಯುವಕರು ಮುಂದೆ ಬಂದು ಅರಣ್ಯ ಬೆಳೆಸಿ ಪರಿಸರ ಸಮತೋಲನ ಕಾಪಾಡಬೇಕಿದೆ ಎಂದು ಮಧುಸೂದನ್ ಶೆಡ್ಡಿ ಉದಯವಾಣಿ ಜತೆ ಮಾತನಾಡುತ್ತ ಮನವಿ ಮಾಡಿದ್ದಾರೆ.