GST: ಸಾಲದ ‘ಆಯ್ಕೆ’: ಹೆಚ್ಚು ಸಾಲ ಪಡೆಯಲು ಆಯ್ಕೆ-1 ಆರಿಸಿದ ರಾಜ್ಯ ಸರಕಾರ
GST ಜಾರಿ ಕೊರತೆಗಷ್ಟೇ ಪರಿಹಾರ ಪಡೆಯಲು ನಿರ್ಧಾರ
Team Udayavani, Sep 3, 2020, 7:08 AM IST
ಬೆಂಗಳೂರು: ಜಿಎಸ್ಟಿ ಪರಿಹಾರಕ್ಕೆ ಸಂಬಂಧಪಟ್ಟಂತೆ ಕೇಂದ್ರ ಸರಕಾರ ನೀಡಿದ್ದ ಎರಡು ಆಯ್ಕೆಗಳ ಪೈಕಿ, ರಾಜ್ಯ ಸರಕಾರ ಮೊದಲನೆಯದನ್ನು ಆರಿಸಿಕೊಂಡಿದೆ.
ಅಂದರೆ ಜಿಎಸ್ಟಿ ಜಾರಿಯಿಂದಾದ ಕೊರತೆಗಷ್ಟೇ ಪರಿಹಾರ ಪಡೆಯಲು ನಿರ್ಧರಿಸುವ ಮೂಲಕ ಸದ್ಯದ ಪರಿಸ್ಥಿತಿಯಲ್ಲಿ ಅತಿ ಹೆಚ್ಚು ಸಾಲ ಪಡೆಯಲು ನೆರವಾಗುವ ಆಯ್ಕೆ-1ರ ಮೊರೆ ಹೋಗಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಐದು ತಿಂಗಳ ಜಿಎಸ್ಟಿ ಪರಿಹಾರವಾಗಿ 18,289 ಕೋಟಿ ರೂ. ಪಡೆಯಲು ರಾಜ್ಯ ಸರಕಾರ ಅರ್ಹವಾಗಿದೆ.
ಇದರಲ್ಲಿ 6,965 ಕೋಟಿ ರೂ. ಉಪಕರದಿಂದ ಸಂಗ್ರಹ ವಾಗಲಿದೆ. ಬಾಕಿ ಉಳಿದ 11,324 ಕೋಟಿ ರೂ.ಗಳನ್ನು ವಿಶೇಷ ಗವಾಕ್ಷಿ ಮೂಲಕ ಸಾಲ ಪಡೆಯಲಿದೆ.
ಜತೆಗೆ ಅಗತ್ಯ ಬಿದ್ದರೆ ಕೇಂದ್ರ ಸರಕಾರದ ನೆರವಿನೊಂದಿಗೆ ಜಿಎಸ್ ಡಿಪಿಯ ಶೇ. 1ರಷ್ಟು (18,036 ಕೋ.ರೂ.) ಹೆಚ್ಚುವರಿ ಸಾಲ ಪಡೆಯಲು ಅವಕಾಶವಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ಆಯ್ಕೆಯ ಮೊರೆ ಹೋಗಿದೆ.
ಕೇಂದ್ರದ ಆಯ್ಕೆಗಳೇನು?
ಮೊದಲ ಆಯ್ಕೆಯಡಿ ಜಿಎಸ್ಟಿ ವ್ಯವಸ್ಥೆಯಿಂದ ಆಗಿರುವ ಆದಾಯ ಕೊರತೆಯಾದ ಒಟ್ಟಾರೆ 97,000 ಕೋಟಿ ರೂ. ಸಾಲ ಪಡೆಯುವುದು. ಎರಡನೇ ಆಯ್ಕೆಯಡಿ ಜಿಎಸ್ಟಿ ಆದಾಯ ಕೊರತೆ ಹಾಗೂ ಕೋವಿಡ್- 19ರಿಂದ ಆಗಿರುವ ನಷ್ಟವನ್ನು ಒಳಗೊಂಡ ಒಟ್ಟಾರೆ 2.35 ಲಕ್ಷ ಕೋಟಿ ರೂ.ಗಳನ್ನು ಸಾಲವಾಗಿ ಪಡೆಯುವುದು. ಏಳು ದಿನದಲ್ಲಿ ಒಂದು ಆಯ್ಕೆ ಮಾಡಿ ತಿಳಿಸುವಂತೆ ಕೇಂದ್ರ ಸೂಚಿಸಿತ್ತು.
ಸಮರ್ಥನೀಯ ಅಂಶಗಳು
ಆಯ್ಕೆ- 1ರ ಅಡಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಎಪ್ರಿಲ್ನಿಂದ ಆಗಸ್ಟ್ವರೆಗೆ ಒಟ್ಟು 18,289 ಕೋಟಿ ರೂ. ಪರಿಹಾರ ಪಡೆಯಲು ರಾಜ್ಯ ಅರ್ಹವಾಗಿದೆ. ಇದರಲ್ಲಿ 6,965 ಕೋಟಿ ರೂ. ಸೆಸ್ನಿಂದ ಸಂಗ್ರಹವಾಗುತ್ತದೆ. ಬಾಕಿ ಉಳಿದ 11,324 ಕೋ.ರೂ.ಗಳನ್ನು ರಾಜ್ಯವು ವಿಶೇಷ ಗವಾಕ್ಷಿ ಮೂಲಕ ಸಾಲ ಪಡೆಯಲು ಕೇಂದ್ರ ಸರಕಾರ ಅನುವು ಮಾಡಿಕೊಡಲಿದೆ.
ಜತೆಗೆ ಭವಿಷ್ಯದಲ್ಲಿ ಪರಿಹಾರ ಸೆಸ್ ನಿಧಿಯಿಂದ ಅಸಲು ಮತ್ತು ಬಡ್ಡಿ ಮರುಪಾವತಿಯಾಗಲಿದೆ. ಇದಲ್ಲದೆ ಜಿಎಸ್ಡಿಪಿ ಶೇ. 1ರಷ್ಟು (18,036 ಕೋ.ರೂ.) ಹೆಚ್ಚುವರಿ ಸಾಲವನ್ನು ಯಾವುದೇ ಷರತ್ತಿಗೆ ಒಳಪಡದೆ ಪಡೆಯಬಹುದು. ಅಗತ್ಯವಿದ್ದರೆ ಈ ಹೆಚ್ಚುವರಿ ಸಾಲವನ್ನು ಮುಂದಿನ ಹಣಕಾಸು ವರ್ಷಕ್ಕೂ ಸಹ ವಿಸ್ತರಿಸಲು ಅವಕಾಶವಿರಲಿದೆ.
ಆಯ್ಕೆ -2ರಿಂದ ಸಾಲ ಕಡಿಮೆ
ಆಯ್ಕೆ-2ರಡಿ ಜಿಎಸ್ಟಿ ಆದಾಯ ಕೊರತೆ ಹಾಗೂ ಕೋವಿಡ್-19ರಿಂದ ಆಗಿರುವ ನಷ್ಟವಾಗಿ ರಾಜ್ಯ ಒಟ್ಟು 25,508 ಕೋಟಿ ರೂ. ಪರಿಹಾರ ಪಡೆಯಲು ಅರ್ಹವಾಗಿದೆ. ಇದರಲ್ಲಿ 6,965 ಕೋಟಿ ರೂ. ಸೆಸ್ನಿಂದ ಸಂಗ್ರಹವಾಗಲಿದೆ. ಉಳಿದ ಮೊತ್ತವಾದ 18,543 ಕೋಟಿ ರೂ.ಗಳನ್ನು ಮಾರುಕಟ್ಟೆ ಸಾಲದ ಮೂಲಕ ಪಡೆಯಲು ಅವಕಾಶವಿರುತ್ತದೆ.
ಆದರೆ ಜಿಎಸ್ಡಿಪಿಯ ಶೇ. 1ರಷ್ಟು (18,036 ಕೋ.ರೂ.) ಸಾಲವನ್ನು ಯಾವುದೇ ಷರತ್ತಿಗೆ ಒಳಪಡದೆ ಪ್ರತ್ಯೇಕವಾಗಿ ಪಡೆಯಲು ಅವಕಾಶವಿರುವುದಿಲ್ಲ. ಇದರಿಂದ ರಾಜ್ಯ ಪಡೆಯಬಹುದಾದ ಸಾಲದ ಮೊತ್ತ 10,817 ಕೋಟಿ ರೂ. ವರೆಗೆ ಕಡಿಮೆಯಾಗಲಿದೆ. ಅಲ್ಲದೆ, ಮಾರುಕಟ್ಟೆ ಸಾಲದ ಮೇಲಿನ ಬಡ್ಡಿಯನ್ನು ರಾಜ್ಯ ತನ್ನದೇ ಆದ ಸಂಪನ್ಮೂಲದಿಂದ ಪಾವತಿಸಬೇಕಾಗುತ್ತದೆ ಎಂಬುದು ರಾಜ್ಯ ಸರಕಾರದ ವಾದ.
ಆಯ್ಕೆ-1 ರಾಜ್ಯದ ಆರ್ಥಿಕತೆಗೆ ಹೆಚ್ಚು ಪ್ರಯೋಜನಕಾರಿ ಎಂಬ ಭಾವನೆ ಸರಕಾರದ್ದು. ಹಾಗಾಗಿ ಕರ್ನಾಟಕ ಸರಕಾರ ಆಯ್ಕೆ-1ಕ್ಕೆ ಆದ್ಯತೆ ನೀಡುವುದಾಗಿ ಕೇಂದ್ರ ಸರಕಾರಕ್ಕೆ ತಿಳಿಸಲು ನಿರ್ಧರಿಸಿದೆ. ಇದು ಪ್ರಸಕ್ತ ಆರ್ಥಿಕ ವರ್ಷದಲ್ಲಿ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ನೆರವಾಗಲಿದೆ ಎಂಬ ವಿಶ್ವಾಸವನ್ನು ಸರಕಾರ ವ್ಯಕ್ತಪಡಿಸಿದೆ.
ಸದ್ಯ ಸರಕಾರವೇ ಭರಿಸಬೇಕು
ಕೇಂದ್ರ ಸರಕಾರ ನೀಡಿರುವ 2 ಆಯ್ಕೆಗಳ ಪೈಕಿ 6,965 ಕೋಟಿ ರೂ.ಗಳನ್ನು ಮುಂದಿನ ತಿಂಗಳುಗಳಲ್ಲಿ ಸೆಸ್ ರೂಪದಲ್ಲಿ ಸಂಗ್ರಹಿಸಲಾಗುವುದು. ಬಾಕಿ ಅರ್ಹ ಪರಿಹಾರ ಮೊತ್ತವನ್ನು (ಆಯ್ಕೆ-1ರಲ್ಲಿ 11,324 ಕೋಟಿ ರೂ./ ಆಯ್ಕೆ-2ರಲ್ಲಿ 18,543 ಕೋಟಿ ರೂ.) ರಾಜ್ಯ ಸರಕಾರಗಳು ಸಾಲ ಪಡೆದು ಅಸಲು, ಬಡ್ಡಿಯನ್ನು ಪಾವತಿಸಬೇಕು. ಸದ್ಯದ ಕಾಯ್ದೆ ಪ್ರಕಾರ 2022ರ ಜೂನ್ವರೆಗೆ ಮಾತ್ರ ಸೆಸ್ ವಿಧಿಸಬಹುದು. ಅನಂತರವೂ ವಿಸ್ತರಿಸಿ ಸಂಗ್ರಹಿಸುವ ಸೆಸ್ ಹಣದಲ್ಲಿ ರಾಜ್ಯ ಸರಕಾರಗಳ ಅಸಲು, ಬಡ್ಡಿ ಪಾವತಿಸುವುದಾಗಿ ಕೇಂದ್ರ ಭರವಸೆ ನೀಡಿದೆ. ಹಾಗಾಗಿ ರಾಜ್ಯ ಸರಕಾರ ಹೆಚ್ಚಿನ ಸಾಲ ಪಡೆಯಬಹುದು ಎನ್ನುತ್ತಾರೆ ಆರ್ಥಿಕ ತಜ್ಞರು.
ಬಾಕಿ ಕೊಡಿ: ಸಿಎಂಗಳ ಆಗ್ರಹ
ಜಿಎಸ್ಟಿ ಬಾಕಿ ಮರುಪಾವತಿಗೆ ಸಂಬಂಧಿಸಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳ ನಡುವಿನ ಕಿತ್ತಾಟ ಮುಂದುವರಿದಿರುವಂತೆಯೇ, ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ 6 ರಾಜ್ಯಗಳ ಮುಖ್ಯಮಂತ್ರಿಗಳು ಪ್ರಧಾನಿ ಮೋದಿಗೆ ಪತ್ರ ಬರೆದು ಜಿಎಸ್ಟಿ ಬಾಕಿ ಪಾವತಿಗೆ ಆಗ್ರಹಿಸಿದ್ದಾರೆ. ಕೇಂದ್ರ ಸರಕಾರವು ನೀಡಿರುವ ಮರುಪಾವತಿ ಆಯ್ಕೆಯನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ, ಕೇರಳದ ಪಿಣರಾಯಿ ವಿಜಯನ್, ದಿಲ್ಲಿಯ ಅರವಿಂದ ಕೇಜ್ರಿವಾಲ್, ತಮಿಳುನಾಡಿನ ಎಡಪ್ಪಾಡಿ ಕೆ. ಪಳನಿಸ್ವಾಮಿ, ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಮತ್ತು ಛತ್ತೀಸ್ಗಢ ಸಿಎಂ ಭೂಪೇಶ್ ಬಘೇಲ್, ಜಿಎಸ್ಟಿ ಬಾಕಿ ಪಾವತಿಯು ಕೇಂದ್ರ ಸರಕಾರದ ಸಾಂವಿಧಾನಿಕ, ನೈತಿಕ ಹಾಗೂ ಕಾನೂನಾತ್ಮಕ ಜವಾಬ್ದಾರಿ. ಕೇಂದ್ರ ಸರಕಾರದ ನಡೆಯು ರಾಜ್ಯಗಳಿಗೆ ಮಾಡಿದ ನಂಬಿಕೆ ದ್ರೋಹವಾಗಿದೆ ಎಂದು ಹೇಳಿದ್ದಾರೆ.
ರಾಜ್ಯ ಸರಕಾರ ಒಟ್ಟು 18,289 ಕೋಟಿ ರೂ. ಪರಿಹಾರ ಪಡೆಯುವ ಕೇಂದ್ರದ ಮೊದಲ ಆಯ್ಕೆಯನ್ನೇ ಒಪ್ಪಿದೆ. ಪ್ರಸ್ತುತ ಹಣಕಾಸು ವರ್ಷದಲ್ಲಿ ಆದಾಯ ಹೆಚ್ಚಳಕ್ಕೆ ಇದು ಸಹಕಾರಿಯಾಗಲಿದೆ.
– ಬಿ.ಎಸ್. ಯಡಿಯೂರಪ್ಪ, ಮುಖ್ಯಮಂತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್