“ನೀರವ್ ಆತ್ಮಹತ್ಯೆ ಮಾಡಿಕೊಳ್ಳಬಹುದು!’
Team Udayavani, Sep 9, 2020, 12:37 AM IST
ಲಂಡನ್: “ಭಾರತಕ್ಕೆ ನೀರವ್ ಮೋದಿ ಹಸ್ತಾಂತರವಾದರೆ, ಅಲ್ಲಿ ಅವರು ಆತ್ಮಹತ್ಯೆಗೆ ಶರಣಾಗುವಂಥ ಸಂದರ್ಭಗಳು ಉಂಟಾಗಬಹುದು. ಹಾಗಾಗಿ, ಅವರನ್ನು ಭಾರತಕ್ಕೆ ಹಸ್ತಾಂತರಿಸಬಾರದು’ ಎಂದು ನೀರವ್ ಪರ ವಕೀಲರು ಯು.ಕೆ. ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ. ವೆಸ್ಟ್ ಮಿನಿಸ್ಟರ್ಸ್ ನ್ಯಾಯಾಲಯದಲ್ಲಿ ವಾದ ಮಂಡಿಸಿದ ನೀರವ್ ಪರ ವಕೀಲರು, “”ಭಾರತದಲ್ಲಿ ನೀರವ್ ಅವರ ವಿಚಾರಣೆಯು ರಾಜಕೀಯ ಪ್ರೇರಣೆಗೊಳಗಾಗುತ್ತದೆ. ಅಲ್ಲಿನ ಕಾರಾಗೃಹಗಳಲ್ಲಿ ಉತ್ತಮ ವೈದ್ಯಕೀಯ ವ್ಯವಸ್ಥೆಯೂ ಇಲ್ಲ. ಈ ಎಲ್ಲ ಒತ್ತಡಗಳಿಂದ ನೀರವ್ ಆತ್ಮಹತ್ಯೆಯನ್ನೂ ಮಾಡಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ, ಅವರ ಸುರಕ್ಷತೆಯ ದೃಷ್ಟಿಯಿಂದ ಅವರನ್ನು ಹಸ್ತಾಂತರಿಸಬಾರದು” ಎಂದಿದ್ದಾರೆ.