ಯೂರಿಯಾ ಕಡಿಮೆಯಾಗದಂತೆ ಜಾಗೃತಿ ವಹಿಸಲು ಮನವಿ
Team Udayavani, Sep 9, 2020, 4:05 PM IST
ಸಿಂಧನೂರು: ರೈತರಿಗೆ ಯೂರಿಯಾ ಗೊಬ್ಬರ ಕಡಿಮೆಯಾಗದಂತೆ ಸರ್ಕಾರ ಜಾಗೃತಿ ವಹಿಸಬೇಕು. ಹೆಚ್ಚಿನ ದರಕ್ಕೆ ಗೊಬ್ಬರ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತಸಂಘದ ವತಿಯಿಂದ ಮಂಗಳವಾರ ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.
ಸಂಘದ ಜಿಲ್ಲಾ ಅಧ್ಯಕ್ಷ ಶರಣಪ್ಪ ಮರಳಿ ಮಾತನಾಡಿ,ಯೂರಿಯಾ ಗೊಬ್ಬರದ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರಕ್ಕೆ ಮಾರಾಟಗಾರು ಗೊಬ್ಬರ ಮಾರುತ್ತಿದ್ದಾರೆ. ಮೊದಲೇ ಕಳೆದ ನಾಲ್ಕೈದು ವರ್ಷಗಳಿಂದ ಮಳೆಯಾಗಿಲ್ಲ, ಸರಿಯಾಗಿ ಕಾಲುವೆಗಳಿಗೆ ನೀರು ಬಾರದೇ ರೈತರು ಕಂಗಾಲಾಗಿದ್ದಾರೆ. ಆದರೆ ಈ ವರ್ಷ ಮಳೆ ಚೆನ್ನಾಗಿ ಆದರೂ ಗೊಬ್ಬರದ ಕೊರತೆ, ಕಳಪೆ ಕ್ರಿಮಿನಾಶಕ-ಬೀಜಗಳ ಮಾರಾಟ, ಎಪಿಎಂಸಿಯಲ್ಲಿಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ರೈತರ ಉತ್ಪನ್ನ ಮಾರಾಟ, ಹಳ್ಳಿಗಳಿಗೆ ಮತ್ತು ಕೃಷಿ ಪಂಪ್ ಸೆಟ್ಗಳಿಗೆವಿದ್ಯುತ್ ಸರಬರಾಜಿನಲ್ಲಿ ತೊಂದರೆಯಾಗಿ ರೈತರು ಅಕ್ಷರಶಃ ಬೇಸತ್ತಿದ್ದಾರೆ ಎಂದರು.
ಪರಿಸ್ಥಿತಿ ಹೀಗಿರುವಾಗ ಕೂಡಲೇ ಸರ್ಕಾರ ಎಚ್ಚೆತ್ತು ರೈತರಿಗೆ ಯೂರಿಯಾ ಗೊಬ್ಬರ ಒದಗಿಸಬೇಕು, ಜಮೀನುಗಳಿಗೆ ಹೋಗುವ ರಸ್ತೆ ದುರಸ್ತಿಗೊಳಿಸಬೇಕು, ಹಳ್ಳ ಮತ್ತು ನದಿ ದಂಡೆ ಜನರಿಗೆ ಮನೆ ಕಟ್ಟಲು ಮುಂದಾಗಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ರೈತ ಮುಖಂಡರಾದ ರಾಮಯ್ಯ ಜವಳಗೇರಾ, ಶಿವರಾಜ್ ಸಾಸಲಮರಿ, ಹುಲುಗಯ್ಯ, ತಿಮ್ಮಣ್ಣ ಭೋವಿ, ಸಿ.ಎಸ್. ರವಿಕುಮಾರ, ಚಂದ್ರಶೇಖರ, ಗೊರೇಬಾಳ, ನಾಗರಾಜ, ಸಲೀಂ ಇತರರು ಇದ್ದರು.