ಬಾಬ್ರಿ ಪ್ರಕರಣ: ಆರೋಪಿಗಳ ಖುಲಾಸೆಗೆ ನ್ಯಾಯಾಧೀಶರು ನೀಡಿರುವ 5 ಪಾಯಿಂಟ್ಸ್
Team Udayavani, Sep 30, 2020, 2:20 PM IST
ಲಕ್ನೋ: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಲಕ್ನೋದಲ್ಲಿರುವ ವಿಶೇಷ ಸಿಬಿಐ ನ್ಯಾಯಾಲಯವು ಇಂದು ತನ್ನ ತೀರ್ಪನ್ನು ಪ್ರಕಟಿಸಿದೆ.
ಈ ಮೂಲಕ 28 ವರ್ಷಗಳಷ್ಟು ಹಳೆಯದಾದ ಈ ಪ್ರಕರಣಕ್ಕೆ ಇದೀಗ ತಾರ್ಕಿಕ ಅಂತ್ಯ ಲಭಿಸಿದ್ದು, ಈ ಪ್ರಕರಣದಲ್ಲಿ ಆರೋಪಿಗಳೆಂದು ಸಿಬಿಐ ಹೆಸರಿಸಿದ್ದ ಎಲ್ಲಾ 32 ಜನರನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ.
ಈ ಮೂಲಕ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರಾದ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ ಜೋಷಿ, ಮಾಜೀ ಕೇಂದ್ರ ಸಚಿವೆ ಉಮಾಭಾರತಿ, ಉತ್ತರಪ್ರದೇಶದ ಮಾಜೀ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ವಿನಯ್ ಕಟಿಯಾರ್, ಸಾಕ್ಷಿ ಮಹಾರಾಜ್, ಮಹಾಂತ ನೃತ್ಯ ಗೊಪಾಲ್ ದಾಸ್ ಸೇರಿದಂತೆ ಒಟ್ಟು 32 ಜನರು ಈ ಪ್ರಕರಣದಲ್ಲಿ ನಿರ್ದೋಷಿಗಳಾಗಿ ಹೊರಹೊಮ್ಮಿದ್ದಾರೆ.
ಆರೋಪಿಗಳ ಪೈಕಿ ಶಿವಸೇನಾ ಸಂಸ್ಥಾಪಕ ಭಾಳ್ ಠಾಕ್ರೆ, ವಿಶ್ವ ಹಿಂದೂ ಪರಿಷದ್ ನಾಯಕ ಅಶೋಕ್ ಸಿಂಘಾಲ್ ಮತ್ತು ಗಿರಿರಾಜ್ ಕಿಶೋರ್ ಅವರು ಈಗಾಗಲೇ ನಿಧನ ಹೊಂದಿದ್ದಾರೆ.
ಇದನ್ನೂ ಓದಿ:ಬಾಬ್ರಿ ಅಂತಿಮ ತೀರ್ಪಿನಲ್ಲೇನಿದೆ?: ರಿಲೀಫ್-ಆಡ್ವಾಣಿ ಸೇರಿ ಎಲ್ಲಾ ಆರೋಪಿಗಳಿಗೆ ಕ್ಲೀನ್ ಚಿಟ್
ಈ ಸಂದರ್ಭದಲ್ಲಿ ವಿಶೇಷ ಸಿಬಿಐ ನ್ಯಾಯಾಧೀಶ ಸುರೇಂದ್ರ ಕುಮಾರ್ ಯಾದವ್ ಅವರು ತಮ್ಮ ಅಂತಿಮ ತೀರ್ಪಿನಲ್ಲಿ ಉಲ್ಲೇಖಿಸಿರುವ ಪ್ರಮುಖ ಐದು ಅಂಶಗಳು ಹೀಗಿವೆ:
1. ಬಾಬ್ರಿ ಮಸೀದಿ ಧ್ವಂಸ ಪೂರ್ವಯೋಜಿತ ಕೃತ್ಯವಲ್ಲ.
2. ಆರೋಪಿಗಳ ಕೃತ್ಯವನ್ನು ಪುಷ್ಟೀಕರಿಸುವ ಸಾಕ್ಷ್ಯಗಳ ಕೊರತೆ ಇದೆ.
3. ಸಿಬಿಐ ನೀಡಿರುವ ಧ್ವನಿ ಮುದ್ರಿಕೆ (ಆಡಿಯೋ) ಹಾಗೂ ವಿಡಿಯೋಗಳ ಸಾಚಾತನವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ.
4. ಸಮಾಜಘಾತುಕ ಶಕ್ತಿಗಳು ಅಲ್ಲಿದ್ದ ಕಟ್ಟಡವನ್ನು ನಾಶಗೊಳಿಸುವ ಪ್ರಯತ್ನದಲ್ಲಿದ್ದಾಗ, ಈ ಆರೋಪಿ ನಾಯಕರು ಅವರೆಲ್ಲರನ್ನೂ ತಡೆಯಲು ಪ್ರಯತ್ನಿಸಿದರು.
5. ಭಾಷಣದ ಧ್ವನಿ ಮುದ್ರಣ ಸ್ಪಷ್ಟವಾಗಿಲ್ಲ.