ತಿರುಪತಿ ತಿಮ್ಮಪ್ಪನ ಚಿನ್ನಕ್ಕೂ ಕೋವಿಡ್ ಬಿಕ್ಕಟ್ಟು!
Team Udayavani, Oct 8, 2020, 7:54 AM IST
ತಿರುಪತಿ: ಚೆನ್ನೈನ ಇಂಡಿಯನ್ ಓವರ್ ಸೀಸ್ ಬ್ಯಾಂಕ್(ಐಒಬಿ) ನಲ್ಲಿ ತಾನು ಇಟ್ಟಿರುವ ಚಿನ್ನದ ಠೇವಣಿಯನ್ನು ಹಿಂದಿರುಗಿಸುವ ವಿಚಾರದಲ್ಲಿ ತಿರುಮಲ ತಿರುಪತಿ ದೇವಸ್ಥಾನಂ ಟ್ರಸ್ಟ್ (ಟಿಟಿಡಿ) ಬ್ಯಾಂಕ್ಗೆ ಇನ್ನೂ ಆರು ತಿಂಗಳುಗಳ ಕಾಲಾವಕಾಶ ನೀಡಿದೆ.
ಮೂರು ಠೇವಣಿಗಳು: ಬ್ಯಾಂಕ್ನ ಚೆನ್ನೈ ಶಾಖೆಯಲ್ಲಿ ಮೂರು ಚಿನ್ನದ ಠೇವಣಿಗಳನ್ನು ಇಟ್ಟಿದೆ. ಮೊದಲ ಠೇವಣಿಯಲ್ಲಿ 409.252 ಕೆಜಿ ಚಿನ್ನವಿದ್ದು, ಈ ಠೇವಣಿಯ ಅವಧಿ 2020ರ ಜೂ. 19ರಂದು ಮುಗಿದಿದೆ. ಇನ್ನೊಂದರಲ್ಲಿ 1118.730 ಕೆಜಿ ಚಿನ್ನವಿದ್ದು, ಅದರ ಅವಧಿ 2020ರ ಜೂ. 19ರಂದು ಮುಗಿದಿದೆ. ಮತ್ತೂಂದರಲ್ಲಿ, 33.412 ಕೆಜಿ ಚಿನ್ನವಿದ್ದು ಅದರ ಅವಧಿ ಆ. 2ರಂದು ಮುಗಿದಿದೆ. ಆದರೆ, ಕೊರೊನಾ ಬಿಕ್ಕಟ್ಟಿನಿಂದಾದ ನಷ್ಟದ ಹಿನ್ನೆಲೆಯಲ್ಲಿ ಐಒಬಿಗೆ ಠೇವಣಿ ಅವಧಿ ಮುಗಿದಾದ ಅನಂತರ ಸಕಾಲದಲ್ಲಿ ಬ್ಯಾಂಕ್ ನಿಂದ ಚಿನ್ನವನ್ನು ಹಿಂದಿರುಗಿಸಲು ಸಾಧ್ಯವಾಗಿಲ್ಲ.
ಇದನ್ನೂ ಓದಿ:ಬೆಂಗಳೂರು ಈಗ ಕೋವಿಡ್ ರಾಜಧಾನಿ: ಮಹಾನಗರಗಳ ಪೈಕಿ ಬೆಂಗಳೂರಲ್ಲೇ ಹೆಚ್ಚು ವೈರಸ್!
ಬ್ಯಾಂಕ್ ಸಮರ್ಥನೆ ಏನು?: ಟಿಟಿ ಡಿಗೆ ಮಾಹಿತಿ ನೀಡಿರುವ ಬ್ಯಾಂಕ್, ಜೂ. 17ರಂದು ಮುಕ್ತಾಯವಾಗಿರುವ ಠೇವಣಿಯಲ್ಲಿರುವ 409.252 ಕೆಜಿ ಚಿನ್ನ ವನ್ನು ಬಡ್ಡಿ ಸಮೇತ ಪೂರ್ತಿ ಯಾಗಿ ಹಿಂದಿರುಗಿಸುವುದಾಗಿ ಹೇಳಿತ್ತು. ಆದರೆ, 1118.730 ಕೆಜಿಯಲ್ಲಿ ಸದ್ಯಕ್ಕೆ 575 ಕೆಜಿ ನೀಡುವುದಾಗಿ ಹೇಳಿದ್ದು, ಆ ಠೇವಣಿಯಲ್ಲಿರುವ ಉಳಿದ ಚಿನ್ನ ಹಾಗೂ ಮೂರನೇ ಠೇವಣಿಯಲ್ಲಿರುವ ಪೂರ್ತಿ ಚಿನ್ನವನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ತಿಳಿಸಿದೆ. ಹಾಗಾಗಿ, ಟಿಟಿ ಡಿಯು ಸಂಪೂರ್ಣ ಚಿನ್ನವನ್ನು ಹಿಂದಿರುಗಿಸಲು ಆರು ತಿಂಗಳುಗಳ ಕಾಲಾವಕಾಶ ನೀಡಿದೆ.