ಮಹದಾಯಿ ವಿಚಾರದಲ್ಲಿ ಗೋವಾ ಸಿಎಂ ಸಣ್ಣತನ ಪ್ರದರ್ಶನ: ಕೋನರಡ್ಡಿ
Team Udayavani, Oct 8, 2020, 5:42 PM IST
ಹುಬ್ಬಳ್ಳಿ: ಮಹದಾಯಿ ವಿಚಾರದಲ್ಲಿ ಗೋವಾ ಸರಕಾರ ಮತ್ತೇ ತಕರಾರು ತೆಗೆದಿದ್ದು, ಅಲ್ಲಿನ ಮುಖ್ಯಮಂತ್ರಿ ಪ್ರಮೋದ ಸಾವಂತ ಅವರು ಸಣ್ಣತನ ಪ್ರದರ್ಶನ ಮಾಡಿದ್ದಾರೆ. ವಿನಾಕಾರಣ ತಗಾದೆ ತೆಗೆಯದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಗೋವಾ ಮುಖ್ಯಮಂತ್ರಿಗೆ ತಿಳಿವಳಿಕೆ ನೀಡಬೇಕೆಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್.ಎಚ್.ಕೋನರಡ್ಡಿ ಒತ್ತಾಯಿಸಿದ್ದಾರೆ.
ಕರ್ನಾಟಕ ಮಹದಾಯಿ ನೀರನ್ನು ಕಳಸಾ-ಬಂಡೂರಿ ನಾಲೆಗಳ ಮೂಲಕ ಅಕ್ರಮವಾಗಿ ತಿರುಗಿಸಿದೆ ಎಂದು ಆರೋಪಿಸಿ
ನ್ಯಾಯಾಂಗ ನಿಂದನೆ ಮೊಕದ್ದಮೆ ಸುಪ್ರೀಂಕೋರ್ಟ್ನಲ್ಲಿ ದಾಖಲಿಸಿರುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ
ಹೇಳಿದ್ದಾರೆ. ಕರ್ನಾಟದ ವಿರುದ್ಧ ಗೋವಾ ಸಣ್ಣತನ ಪ್ರದರ್ಶಿಸುತ್ತಿದೆ. ಹಿಂದಿನ ಎಲ್ಲಾ ಮುಖ್ಯಮಂತ್ರಿಗಳು ಸುಪ್ರೀಂಕೋರ್ಟ್ ತೀರ್ಪಿಗೆ ಬದ್ಧ ಎಂದು ಭರವಸೆ ನೀಡಿದ್ದರು. ಆದರೆ ಇಂದಿನ ಮುಖ್ಯಮಂತ್ರಿ ಸಾವಂತ ಸಣ್ಣತನ ಪ್ರದರ್ಶನ ಮಾಡುತ್ತಿದ್ದಾರೆ.
ನೆರೆ ರಾಜ್ಯವಾಗಿ ಕುಡಿಯುವ ನೀರಿನ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ತಂಟೆ ತೆಗೆಯುವುದು ಸರಿಯಲ್ಲ.
ಈಗಾಗಲೇ ಮಹದಾಯಿ ನ್ಯಾಯಾಧಿಕರಣ ತನ್ನ ಆದೇಶದಲ್ಲಿ ಕುಡಿಯುವ ನೀರಿಗಾಗಿ 5.40 ಟಿಎಂಸಿ ನೀರು ಸೇರಿದಂತೆ
ಕರ್ನಾಟಕ ರಾಜ್ಯಕ್ಕೆ ಒಟ್ಟು 13.42 ಟಿಎಂಸಿ ನೀರನ್ನು ಹಂಚಿಕೆ ಮಾಡಿ ಆದೇಶ ನೀಡಿದ್ದು, ಅಧಿಸೂಚನೆ ಹೊರಡಿಸುವಂತೆ
ಸುಪ್ರೀಂಕೋರ್ಟ್ 2020 ಫೆಬ್ರುವರಿ 2 ರಂದು ಆದೇಶ ನೀಡಿದೆ. ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ 2010 ಫೆಬ್ರುವರಿ 27
ರಂದು ಕೇಂದ್ರ ಸರಕಾರ ಗೆಜೆಟ್ ಅಧಿಸೂಚನೆ ಹೊರಡಿಸಿ ರಾಜ್ಯಕ್ಕೆ 13.42 ಟಿಎಂಸಿ ನೀರು ಉಪಯೋಗಿಸಲು ಆದೇಶಿಸಿದೆ.
ಇದರೊಂದಿಗೆ ಜಲ ವಿದ್ಯುತ್ ಯೋಜನೆಗೂ ಹಸಿರು ನಿಶಾನೆ ತೋರಿದೆ.
ಕುಡಿಯುವ ನೀರಿಗಾಗಿ ಮಲಪ್ರಭಾ ನದಿಗೆ ಜೋಡಣೆ ಮಾಡಲು ಕಳಸಾ ನಾಲೆಯಿಂದ 1.72 ಟಿಎಂಸಿ, ಬಂಡೂರಿ ನಾಲಾದಿಂದ
2.18 ಟಿಎಂಸಿ ನೀರನ್ನು ರಾಜ್ಯಕ್ಕೆ ಹಂಚಿಕೆ ಮಾಡಲಾಗಿದೆ. ಮಹದಾಯಿ ನದಿಯಿಂದ ಬಹಳಷ್ಟು ನೀರು ಗೋವಾದವರು
ಉಪಯೋಗಿಸದೇ ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಅ ಧಿಸೂಚನೆ ಬಳಿಕ ಮಹದಾಯಿ ನದಿ ತಿರುವು ಯೋಜನೆಗೆ ಕರ್ನಾಟಕ
ಸರಕಾರ ಕಾಮಗಾರಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಬೇಕಿದೆ. ಮುಖ್ಯಮಂತ್ರಿಗಳು ಹಾಗೂ ಜಲ ಸಂಪನ್ಮೂಲ ಸಚಿವರು ಈ
ಭಾಗದ ನೀರಿನ ಸಮಸ್ಯೆಯನ್ನರಿತು ಕೂಡಲೇ ಕಾಮಗಾರಿ ಆರಂಭಿಸಬೇಕೆಂದು ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದ್ದಾರೆ.