ತುಡವಿ ಜೇನು ಹುಳುವಿಗೆ ಶೀಘ್ರ ರಾಜ್ಯಕೀಟ ಕಿರೀಟ!
ವನ್ಯಜೀವಿ ಮಂಡಳಿ ಮುಂದಿನ ಸಭೆಯಲ್ಲಿ ಘೋಷಣೆ ಸಾಧ್ಯತೆ
Team Udayavani, Oct 9, 2020, 1:33 AM IST
ಕಾರ್ಕಳ: ತುಡವಿ (ತೊಡ್ವೆ) ಜೇನು ನೊಣಕ್ಕೆ ರಾಜ್ಯ ಕೀಟ ಪಟ್ಟ ಸಿಗುವ ದಿನಗಳು ಹತ್ತಿರದಲ್ಲಿವೆ. ವನ್ಯಜೀವಿ ಮಂಡಳಿ ಈ ಕುರಿತು ಕ್ರಮ ಕೈಗೊಂಡಿದ್ದು, ಮುಂದಿನ ಮಂಡಳಿ ಸಭೆಯಲ್ಲಿ ಇದು ಘೋಷಣೆಯಾಗುವ ಸಾಧ್ಯತೆ ಇದೆ.
ವನ್ಯಜೀವಿ ಮಂಡಳಿ ಈ ಬಗ್ಗೆ ಸರಕಾರಕ್ಕೆ ಶಿಫಾರಸು ಮಾಡಿತ್ತು. ಅದಕ್ಕೆ ಪೂರಕ ವಾಗಿ ಮಂಡಳಿ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುಂದಿನ ಸಭೆಯಲ್ಲಿ ಘೋಷಿಸುವ ಭರವಸೆ ನೀಡಿದ್ದು, ಅರಣ್ಯ ಇಲಾಖೆ ಮುಖ್ಯಸ್ಥರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಆದೇಶಿಸಿದ್ದರು.
ವನ್ಯಜೀವಿ ಕಾಯ್ದೆಯಡಿಯಲ್ಲಿ ಈಗಾಗಲೇ ಕಮಲ ಹೂವನ್ನು ರಾಜ್ಯ ಹೂವು, ಆನೆಯನ್ನು ರಾಜ್ಯ ಪ್ರಾಣಿ, ಶ್ರೀಗಂಧವನ್ನು ರಾಜ್ಯ ವೃಕ್ಷ, ನೀಲಕಂಠವನ್ನು ರಾಜ್ಯ ಪಕ್ಷಿ, ಸದರ್ನ್ ಬರ್ಡ್ ವಿಂಗ್ ಅನ್ನು ರಾಜ್ಯ ಪಾತರಗಿತ್ತಿ ಎಂದು ಘೋಷಿಸಿದೆ. ವನ್ಯಜೀವಿ ಕಾಯ್ದೆಯನ್ವಯ ನೈಸರ್ಗಿಕ ಜೇನು ಪ್ರಭೇದ ತುಡವಿ ಜೇನು ಹುಳ ಇದರ ಸಾಲಿಗೆ ಸೇರುವುದು ನಿಶ್ಚಿತವಾಗಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಾಣಿಸಿಕೊಳ್ಳುವ ನೊಣವಿದು.
ಸಂತತಿ ಅಳಿವಿನಲ್ಲಿ ಕಾಡುಗಳಲ್ಲಿ ಇತ್ತೀಚೆಗೆ ನೈಸರ್ಗಿಕ
ಜೇನು ಸಂತತಿ ಕಡಿಮೆಯಾಗಿದೆ. ಜೀವ ವೈವಿಧ್ಯದ ಮುಖ್ಯ ಕೊಂಡಿಯಾದ ಜೇನುಗಳು ಪರಕೀಯ ಪರಾಗಸ್ಪರ್ಶಕ್ಕೆ ಪೂರಕ. ಆದರೆ ಈ ಕ್ರಿಯೆ ಕ್ಷೀಣ ಗೊಂಡಿರುವುದರಿಂದ ಅರಣ್ಯ ವೃದ್ಧಿಗೆ ಧಕ್ಕೆಯಾಗಿದೆ. ಜತೆಗೆ ಘಟ್ಟ ಪ್ರದೇಶದ ಕೃಷಿ ಫಸಲು-ತೋಟಗಾರಿಕೆ ಬೆಳೆಗಳ ಇಳುವರಿ ಮತ್ತು ಗುಣಮಟ್ಟ ಕ್ಷೀಣಿಸಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆ ವರದಿ ನೀಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ, ಅಡವಿ ಜೇನು ಸಂರಕ್ಷಣೆ ದೃಷ್ಟಿಯಿಂದ ತುಡವಿ ಜೇನು ರಾಜ್ಯ ಕೀಟವಾಗಿ ಘೊಷಣೆಯಾಗುವುದರ ಜತೆಗೆ ಅರಣ್ಯ ಇಲಾಖೆ ಮೂಲಕ ಸಂರಕ್ಷಣೆಯ ಹಲವು ಯೋಜನೆಗಳು ಕಾರ್ಯಗತಕ್ಕೆ ಬರಲಿವೆ.
ಜೀವನಾಧಾರ
ಉತ್ತರಕನ್ನಡ, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಚಾಮರಾಜನಗರ ಜಿÇÉೆಗಳಲ್ಲಿ ಕೂಡ ಜೇನು ಕೃಷಿಕರಿದ್ದಾರೆ. ಜೇನು ಹುಳ ಪರಿಸರ ಆರೋಗ್ಯ ಸೂಚಕ ಎಂದೇ ಗುರುತಿಸಿಕೊಂಡಿದೆ. ಪಾರಂ ಪರಿಕ, ಆಯುರ್ವೇದ ಔಷಧದಲ್ಲೂ ಬಳಕೆಯಾಗುತ್ತದೆ. ಜೇನು ಕೃಷಿ ಲಾಭದಾಯಕವಾಗಿದ್ದು, ಹಲವರಿಗೆ ಜೀವನಾಧಾರವೂ ಆಗಿದೆ.
ಜೇನುನೊಣ ವೃದ್ಧಿಗೆ ಕ್ರಮ
ಪಶ್ಚಿಮ ಘಟ್ಟದಲ್ಲಿ ಹೆಜ್ಜೆàನು, ತುಡವಿ, ಕೋಲೆjàನು, ಮಿಸರು ಮತ್ತು ಇಟಲಿ ದುಂಬಿಗಳ ಸಂಖ್ಯೆ ಕ್ಷೀಣಿಸಿದೆ. ಇವುಗಳ ಸಂರಕ್ಷಣೆ ಮತ್ತು ಸಂತಾನ ಅಭಿವೃದ್ಧಿಗೆ ಬಿಳಿಸಾರೆ, ಬೂರಗ, ಮತ್ತಿ, ಬಸರಿ, ನೀರತ್ತಿ, ತಾರೆ, ಹೆದ್ದಿ, ಸಪ್ತಪರ್ಣಿ, ಬೈನೆ, ಬಣಗಿ ಮರಗಳನ್ನು ಕಡಿಯದಂತೆ ಅರಣ್ಯ ಇಲಾಖೆ ಕೂಡ ಕ್ರಮ ವಹಿಸುತ್ತಿದೆ. ಜೇನುಗಳಿಗೆ ಮಕರಂದ ಒದಗಿಸುವ ತಾರಿ, ಅಣಲೆ, ಅಂಟವಾಳ, ನಂದಿ, ಹುಲಿ ಬಳ್ಳಿ, ಹೊಂಗೆ, ಮಾವು, ಬೂರಗ, ಗುರಿಗೆ, ಪಾತಾಳ ಗರುಡ, ಲಕ್ಕಿ ಮತ್ತು ನೇರಳೆ ಗಿಡ-ಮರಗಳನ್ನು ಸಂರಕ್ಷಿಸಲಾಗುತ್ತಿದೆ. ಕಾಫಿ ಮತ್ತು ಚಹಾ ನಾಡುಗಳಲ್ಲಿ ತೋಟದಲ್ಲಿ ಬಳಸುತ್ತಿರುವ ಕ್ರಿಮಿನಾಶಕಗಳಿಂದ ಜೇನಿಗೆ ಹಾನಿಯಾಗುತ್ತಿದ್ದು, ಬಳಕೆಗೆ ಕಡಿವಾಣ ಹಾಕಲು ಯೋಜನೆ ರೂಪಿಸಲಾಗುತ್ತಿದೆ.
ಸಿಎಂ ಭರವಸೆ
ವನ್ಯಜೀವಿ ಮಂಡಳಿ ಅಧ್ಯಕ್ಷರಾಗಿ ಮುಖ್ಯಮಂತ್ರಿಗಳೇ ಇದ್ದಾರೆ. ಅವರ ಗಮನಕ್ಕೆ ಈ ವಿಚಾರವನ್ನು ತಂದಿದ್ದೇವೆ. ಅವರು ಸಮ್ಮತಿ ವ್ಯಕ್ತಪಡಿಸಿದ್ದಲ್ಲದೆ ಮುಂದಿನ ಸಭೆಯಲ್ಲಿ ಘೋಷಿಸುವ ಭರವಸೆ ನೀಡಿದ್ದಾರೆ. ಮಂಡಳಿ ಸಭೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.
-ಅನಂತ ಹೆಗಡೆ ಅಶೀಸರ, ಅಧ್ಯಕ್ಷ, ಪಶ್ಚಿಮ ಘಟ್ಟ ಕಾರ್ಯಪಡೆ
ಬಾಲಕೃಷ್ಣ ಭೀಮಗುಳಿ