217 ಕೋಟಿ ಶುಲ್ಕ ಪಡೆದಿದ್ದಕ್ಕೆ ಐಟಿ ತನಿಖೆ
ಹರಿಯಾಣ, ಹೊಸದಿಲ್ಲಿಯ 38 ಸ್ಥಳಗಳ ಮೇಲೆ ದಾಳಿ
Team Udayavani, Oct 17, 2020, 1:39 AM IST
ಚಂಡೀಗಡ: ಪಂಜಾಬ್ ರಾಜಧಾನಿ ಚಂಡೀಗಢದಲ್ಲಿ ವಕೀಲರೊಬ್ಬರು ಕಕ್ಷಿಗಾರರ ಬಳಿಯಿಂದ 217 ಕೋಟಿ ರೂ. ಮೊತ್ತ ಶುಲ್ಕ ಪಡೆದಿದ್ದಾರೆ. ನಗದು ಮೂಲಕ ಅದನ್ನು ಪಡೆದ ಕಾರಣಕ್ಕಾಗಿ ಮತ್ತು ಅದಕ್ಕೆ ಸಂಬಂಧಿಸಿದಂತೆ ತೆರಿಗೆ ಪಾವತಿ ಮಾಡಿಲ್ಲ ಎಂದು ಆರೋಪಿಸಿ
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹರಿಯಾಣ, ದಿಲ್ಲಿಯ 38 ಸ್ಥಳಗಳಲ್ಲಿ ದಾಳಿ ಮಾಡಿ ಶೋಧ ಕಾರ್ಯ ನಡೆಸಿದ್ದಾರೆ. ಈ ಸಂದರ್ಭದಲ್ಲಿಯೇ 5.5 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಅವರಿಗೆ ಸೇರಿದ ಹತ್ತು ಬ್ಯಾಂಕ್ ಲಾಕರ್ಗಳನ್ನು ಬಳಕೆ ಮಾಡುವಂತಿಲ್ಲ ವೆಂದು ತೆರಿಗೆ ಇಲಾಖೆ ಸೂಚಿಸಿದೆ.
ಈ ಬಗ್ಗೆ ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ)ಯೇ ಸ್ಪಷ್ಟನೆ ನೀಡಿದೆ. ವಾಣಿಜ್ಯಿಕ ಪ್ರಕರಣಗಳನ್ನು ಮಧ್ಯಸ್ಥಿಕೆ ವಹಿಸಿ ಬಗೆಹರಿಸುವ ವಕೀಲರೊಬ್ಬರ ಮೇಲೆ ಈ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ. ಆದರೆ ಅವರ ವಿವರ ನೀಡಿಲ್ಲ.
ಮತ್ತೂಂದು ಪ್ರಕರಣದಲ್ಲಿ ವಕೀಲರಿಗೆ 100 ಕೋಟಿ ರೂ. ಮೊತ್ತವನ್ನು ಸಂಸ್ಥೆಯೊಂದರಿಂದ ಪಡೆದುಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರಕರಣ ವೊಂದನ್ನು ನಿರ್ವಹಿಸಿದ್ದಕ್ಕಾಗಿ ಅವರಿಗೆ ಈ ಮೊತ್ತ ಸಂದಾಯವಾಗಿದೆ ಎಂದು ಸಿಬಿಡಿಟಿ ಹೇಳಿಕೊಂಡಿದೆ. ಈ ಮೊತ್ತವನ್ನು ವಾಣಿಜ್ಯಿಕ ಕಟ್ಟಡಗಳು, ಮನೆ ಖರೀದಿ, ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಟ್ರಸ್ಟ್ಗಳಲ್ಲಿ ಹೂಡಿಕೆ ಮಾಡಲಾಗಿದೆ. ಈ ಬಗ್ಗೆ ಸೂಕ್ತ ದಾಖಲೆಗಳನ್ನು ಸಂಗ್ರಹಿಸಲಾಗಿದೆ ಎಂದು ಮಂಡಳಿ ಹೇಳಿದೆ. ಇದರ ಜತೆಗೆ ಅವರಿಗೆ ಹವಾಲಾ ಮೂಲಕವೂ ಹಣ ಸಂದಾಯವಾಗಿದೆ ಎಂದು ತಿಳಿದು ಬಂದಿದೆ ಎಂದು ತನಿಖಾ ಸಂಸ್ಥೆ ಹೇಳಿದೆ.