ಕೃಷಿಕ ಸಮಾಜ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಪಾಟೀಲ್ ಧಂಗಾಪುರಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ
Team Udayavani, Oct 28, 2020, 1:29 PM IST
ಕಲಬುರಗಿ: ಕಳೆದ 28 ವರ್ಷಗಳಿಂದ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾಗಿರುವ ಸಿದ್ರಾಮಪ್ಪ ಪಾಟೀಲ್ ಧಂಗಾಪುರ ಅವರಿಗೆ ಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಒಲಿದಿದೆ.
ಕಲಬುರಗಿಯಲ್ಲಿ ಕರ್ನಾಟಕ ತೊಗರಿ ಮಂಡಳಿಯಾಗುವಲ್ಲಿ ಪ್ರಮುಖವಾಗಿ ಸತತ ಒತ್ತಡ ಹಾಕಿರುವುದು, ತೊಗರಿ ಬೆಂಬಲ ಬೆಲೆ ಹೆಚ್ಚಳವಾಗಲು ಕೇಂದ್ರದ ಕೃಷಿ ಬೆಲೆ ನಿಗದಿ ಆಯೋಗದ ಬಳಿ ಈ ಭಾಗದಿಂದ ಪ್ರಥಮವಾಗಿ ನಿಯೋಗ ತೆಗೆದುಕೊಂಡು ಹೋಗಿರುವುದು, ಕೃಷಿ ವಿಮೆ ಮಾಡಿಸುವಲ್ಲಿ ಹಾಗೂ ದೊರಕಿಸುವಲ್ಲಿ ಪ್ರಯತ್ನ, ಕಲಬುರಗಿ ಯಲ್ಲಿ ಕೃಷಿ ಕಾಲೇಜು ಸ್ಥಾಪನೆ, ರೈತರ ಆತ್ಮಹತ್ಯೆ ತಡೆಯಲು ಹಾಗೂ ಯುವಕರ ನಡೆ ಕೃಷಿ ಕಡೆಗೆ ಹತ್ತಾರು ಜಾಗೃತಿ ಕಾರ್ಯಕ್ರಮ ಕೈಗೊಂಡಿರುವುದು ಇತರ ಹತ್ತಾರು ಗುರುತರ ಕಾರ್ಯಗಳಲ್ಲಿ ಸಿದ್ರಾಮಪ್ಪ ಪಾಟೀಲ್ ಪ್ರಮುಖ ಪಾತ್ರ ವಹಿಸಿದ್ದಾರೆ.
ಗುಂಡೂರಾವ್ ಮುಖ್ಯಮಂತ್ರಿಯಾಗಿದ್ದಾಗ ಆಗ ನಡೆದಿದ್ದ ರೈತರ ಮೇಲಿನ ಗೋಲಿಬಾರ ಖಂಡಿಸಿ ರಸ್ತೆಗಿಳಿದು ಹೋರಾಟ ಮಾಡಿದ್ದಾಗ 15 ದಿನಗಳ ಕಾಲ ಜೈಲುವಾಸ ಸಹ ಅನುಭವಿಸಿದ್ದಾರೆ.
ಇದನ್ನೂ ಓದಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿ ಉಪವಾಸ ಸತ್ಯಾಗ್ರಹ
ಹಿಂದಿನ ವರ್ಷಗಳಲ್ಲಿ ಜಿಲ್ಲೆಯಿಂದ ಕನಿಷ್ಠ ಇಬ್ಬರಿಗಾದರೂ ರಾಜ್ಯೋತ್ಸವ ಪ್ರಶಸ್ತಿ ಲಭಿಸುತ್ತಾ ಬಂದಿದ್ದರೆ ಈ ಸಲ ಕೃಷಿ ಕ್ಷೇತ್ರದಲ್ಲಿ ಮಾತ್ರ ಪ್ರಶಸ್ತಿ ದೊರಕಿದೆ.
ಜನತಾದಳ ಸರಕಾರವಿದ್ದಾಗ 1995ರಲ್ಲಿ ಕರ್ನಾಟಕ ಕೃಷಿಕ ಸಮಾಜದ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಹಾಗೂ ಬಲರಾಮ ಜಾಖಡ ಅಧ್ಯಕ್ಷರಾಗಿದ್ದ ವೇಳೆಯಲ್ಲಿ ಅಖಿಲ ಭಾರತ ಕೃಷಿಕ ಸಮಾಜದ ಆಡಳಿತ ಮಂಡಳಿ ಸದಸ್ಯರಾಗಿ ಸಿದ್ರಾಮಪ್ಪ ಪಾಟೀಲ್ ಧಂಗಾಪುರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೂರಾರು ಕಾರ್ಯಕ್ರಮಗಳನ್ನು ಮಾಡಿದ್ದಾರೆ.
ಬಹು ಮುಖ್ಯವಾಗಿ ಬಜೆಟ್ ಸಂದರ್ಭದಲ್ಲಿ ರೈತರೊಂದಿಗೆ ಮುಖ್ಯಮಂತ್ರಿ ನಡೆಸಲಾಗುವ ಅಭಿಪ್ರಾಯ ಸಂಗ್ರಹದ ಸಭೆಯಲ್ಲಿ ಸಿದ್ರಾಮಪ್ಪ ಪಾಟೀಲ್ ಅವರು ನೀಡಿರುವ ಸಲಹೆಗಳನ್ನು ಕಾರ್ಯಾನುಷ್ಠಾನಕ್ಕೆ ತಂದ ಉದಾಹರಣೆಗಳಿವೆ.
ಪ್ರಸ್ತುತ ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಪಾಟೀಲ್ ಅವರಿಗೆ ಈಗ 74 ವಯಸ್ಸು.