ಕಾರು ಅಪಘಾತದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದ ಉಮಾಶ್ರೀ
ನನ್ನ ವಾಹನ ಜಖಂಗೊಂಡಿರುವುದಕ್ಕೆ ಬೇಸರವಿಲ್ಲ. ಆದರೆ ಅಪಘಾತದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡ ಬಗ್ಗೆ ತುಂಬಾ ನೋವಾಗಿದೆ.
Team Udayavani, Nov 21, 2020, 3:49 PM IST
ಹುಬ್ಬಳ್ಳಿ: ನನ್ನ ವಾಹನ ಜಖಂಗೊಂಡಿರುವುದಕ್ಕೆ ಬೇಸರವಿಲ್ಲ. ಆದರೆ ಅಪಘಾತದಲ್ಲಿ ಇಬ್ಬರು ಪ್ರಾಣ ಕಳೆದುಕೊಂಡ ಬಗ್ಗೆ ತುಂಬಾ ನೋವಾಗಿದೆ ಎಂದು ಮಾಜಿ ಸಚಿವೆ ಉಮಾಶ್ರೀ ತಿಳಿಸಿದರು.
ಅಪಘಾತದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದ ನಂತರ ಅವರು ಉದಯವಾಣಿ ಯೊಂದಿಗೆ ಮಾತನಾಡಿದರು.
ಅಪಘಾತದಲ್ಲಿ ಗಂಭೀರ ಗಾಯಗೊಂಡಿರವ ವೈದ್ಯೆಯ ಸ್ಥಿತಿ ನೋಡಿ ತುಂಬಾ ವ್ಯಥೆಯಾಗುತ್ತಿದೆ. ಅವರು ಸದ್ಯ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ನಮ್ಮ ವಾಹನ ಚಾಲಕನ ಪಕ್ಕೆಲುಬು ಮುರಿದಿದೆ ಎಂದರು
ಇಲ್ಲಿನ ಕೆಎಲ್ ಇ ಸುಚಿರಾಯು ಆಸ್ಪತ್ರೆಯಲ್ಲಿ ದಾಖಲಾದ ಸ್ಮಿತಾ ಕಟ್ಟಿ ಮತ್ತು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಇನ್ನೋವಾ ಕಾರು ಚಾಲಕನ ಆರೋಗ್ಯ ವಿಚಾರಿಸಿದರು.
ಇದನ್ನೂ ಓದಿ:ನಟಿ ಉಮಾಶ್ರೀ ಅವರ ಕಾರು ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು
ತಾಲೂಕಿನ ಬಂಡಿವಾಡ ಗ್ರಾಮದ ಬಳಿ ಶುಕ್ರವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ವಿಜಯಪುರ ಜಿಲ್ಲಾ ಸರ್ಜನ್ ಡಾ. ಶರಣಪ್ಪ ಕಟ್ಟಿ ಅವರ ಪತ್ನಿ ಶೋಭಾ (ಶಾರದಾ) ಕಟ್ಟಿ ಹಾಗೂ ಅವರ ಬೊಲೇನೊ ಕಾರು ಚಾಲಕ ಸಂದೀಪ್ ವಿಭೂತಿ ಸ್ಥಳದಲ್ಲೇ ಮೃತಪಟ್ಟಿದ್ದರು. ಅಪಘಾತದಲ್ಲಿ ಡಾ. ಶರಣಪ್ಪ ಕಟ್ಟಿ ಅವರ ಪುತ್ರಿ ಡಾ. ಸ್ಮಿತಾ ಕಟ್ಟಿ ಕೂಡಾ ಗಂಭೀರವಾಗಿ ಗಾಯಗೊಂಡಿದ್ದು, ಸುಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಮಾಶ್ರೀಯವರ ಕಾರು ಚಾಲಕ ಕೊಪ್ಪಳ ಜಿಲ್ಲೆ ಗಿಣಿಗೇರಾ ಗ್ರಾಮದ ಶಿವಕುಮಾರ ಬಿಡನಾಳ ಗಾಯಗೊಂಡಿದ್ದು, ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಮ್ಮ ಕಾರು ಚಾಲಕ ಶಿವಕುಮಾರ ಒಂದು ತಿಂಗಳ ಹಿಂದಷ್ಟೇ ಕೆಲಸಕ್ಕೆ ಸೇರಿಕೊಂಡಿದ್ದ. ಪತ್ನಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಹುಲಕೋಟಿಗೆ ಹೋಗಿ ವಾಪಸು ಹುಬ್ಬಳ್ಳಿ ಕಡೆಗೆ ಬರುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದರು.
ಅಪಘಾತದ ಬಗ್ಗೆ ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ರಮೇಶ ಗೋಕಾಕ ಅವರಿಂದ ಮಾಹಿತಿ ಪಡೆದುಕೊಂಡರು.