ಪಿತ್ರೋಡಿ: ಭೂಪ್ರದೇಶಗಳಿಗೆ ನುಗ್ಗುತ್ತಿರುವ ಉಪ್ಪು ನೀರು
ತಡೆಗೋಡೆ, ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಸ್ಥಳೀಯರ ಆಗ್ರಹ
Team Udayavani, Nov 23, 2020, 3:53 AM IST
ಉದ್ಯಾವರ: ಪಾಪನಾಶಿನಿ ನದಿಯಿಂದ ಉಕ್ಕೇರಿ ಹರಿವ ಉಪ್ಪು ನೀರು ಉದ್ಯಾವರ ಗ್ರಾ.ಪಂ. ವ್ಯಾಪ್ತಿಯ ಪಿತ್ರೋಡಿ ಕಡವಿನ ಬಾಗಿಲು- ಚುಳ್ಳುಕುದ್ರು ವ್ಯಾಪ್ತಿಯಲ್ಲಿ ಭೂಪ್ರದೇಶಗಳಿಗೆ ನುಗ್ಗುತ್ತಿದೆ. ಕಳೆದ ಕೆಲ ದಿನಗಳಿಂದ ಸುಮಾರು 150 ಮೀ.ಗೂ ಅಧಿಕ ದೂರದವರೆಗೆ ಒಳನುಗ್ಗುತ್ತಿದ್ದು, ಕುಡಿಯುವ ನೀರಿನ ಬಾವಿಗಳ ನೀರೂ ಉಪ್ಪಾಗಿವೆ.
ಕೃಷಿ ಭೂಮಿ ಹಡಿಲು ಉಪ್ಪು ನೀರು ಒಳನುಗ್ಗದಂತೆ ಸಮರ್ಪಕ ಕಿಂಡಿ ಅಣೆಕಟ್ಟು ನಿರ್ಮಾಣಗೊಳ್ಳದೆ ಇರುವುದರಿಂದ ಕೃಷಿ ಭೂಮಿಗಳಿಗೆ ಉಪ್ಪು ನೀರು ನುಗ್ಗಿ ಹಡಿಲು ಬಿಡುವಂತಾಗಿದೆ. ಇಲ್ಲಿನ ತೆಂಗಿನ ತೋಟಗಳಿಗೂ ನೀರು ನುಗ್ಗಿದೆ. ಈ ಭಾಗದಲ್ಲಿ ಗ್ರಾ.ಪಂ. ನಡೆಸಿದ ತಡೆಗೋಡೆಯ ಕಾಮಗಾರಿ ಕಳಪೆಯಾಗಿದ್ದು ತಳಭಾಗದಲ್ಲಿ ಕೊರೆತ ಉಂಟಾಗಿ ನೀರು ಬರುತ್ತಿದೆ. ಇದರಿಂದ ಕೃಷಿ ಚಟುವಟಿಕೆಗಳನ್ನು ನಡೆಸಲಾಗುತ್ತಿಲ್ಲ. ಸಮಸ್ಯೆ ಪರಿಹರಿಸುವಂತೆ ವಿನಂತಿಸಲಾಗಿ ದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ನೀರಿನ ತತ್ವಾರ ನೀಗಿಸಿ
ಉಪ್ಪು ನೀರಿನ ಸಮಸ್ಯೆಯಿಂದ ಕುಡಿಯುವ ನೀರಿನ ಅಲಭ್ಯತೆ ಹೆಚ್ಚಾಗುತ್ತಿದೆ. ಕೂಡಲೇ ಹೊಳೆದಂಡೆ ಮತ್ತು ಕಿಂಡಿ ಅಣೆಕಟ್ಟು ನಿರ್ಮಿಸಬೇಕು. ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕು. ನೀರಿನ ತತ್ವಾರ ನೀಗಿಸಿ, ಕೃಷಿ ಚಟುವಟಿಕೆ ನಡೆಸಲು ಅನುಕೂಲ ಕಲ್ಪಿಸಬೇಕು ಎಂದು ಸ್ಥಳೀ ಯರು ಆಗ್ರಹಿಸಿದ್ದಾರೆ.
ಪತ್ರ ಬರೆಯಲಾಗುವುದು
ಸ್ಥಳ ಪರಿಶೀಲನೆ ನಡೆಸಲಾಗುತ್ತದೆ. ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ತಡೆಗೋಡೆ, ಕಿಂಡಿ ಅಣೆಕಟ್ಟು ನಿರ್ಮಾಣದ ಬಗ್ಗೆ ಸಣ್ಣ ನೀರಾವರಿ ಇಲಾಖೆಗೆ ಪತ್ರ ಬರೆಯುತ್ತೇವೆ.
-ಪ್ರವೀಣ್ ಡಿ’ಸೋಜ, ಪಿ.ಡಿ.ಒ., ಉದ್ಯಾವರ ಗ್ರಾ.ಪಂ.
ಅನುದಾನಕ್ಕೆ ಮನವಿ
ಉಪ್ಪು ನೀರಿನ ಸಮಸ್ಯೆ ಬಗ್ಗೆ ಶಾಸಕರ ಮೂಲಕ ತಡೆಗೋಡೆ, ಕಿಂಡಿ ಅಣೆಕಟ್ಟು ನಿರ್ಮಾಣಕ್ಕಾಗಿ ಕನಿಷ್ಠ ಸುಮಾರು 50 ಲಕ್ಷ ರೂ. ಅನುದಾನಕ್ಕಾಗಿ ಸಣ್ಣ ನೀರಾವರಿ ಸಚಿವರಿಗೆ ಮನವಿ ಮಾಡಲಾಗಿದೆ. -ಗಿರೀಶ್ ಸುವರ್ಣ ಪಿತ್ರೋಡಿ, ನಿಕಟಪೂರ್ವ ಸದಸ್ಯ, ಉದ್ಯಾವರ ಗ್ರಾ.ಪಂ.