ಜನಸ್ಪಂದನ ಕಾರ್ಯಕ್ರಮಕ್ಕೆ ಶಾಸಕರು ಬೇಕು : ಯತೀಂದ್ರ
Team Udayavani, Dec 4, 2020, 11:07 AM IST
ಮೈಸೂರು: ಸ್ಥಳೀಯ ಶಾಸಕರನ್ನು ಬಿಟ್ಟು ಕಾರ್ಯಕ್ರಮ ನಡೆಸಿದರು ಅದು ಶಿಷ್ಟಾಚಾರ ಉಲ್ಲಂಘನೆಯಾಗಲಿದೆ. ಒಂದು ವೇಳೆ ಅಧಿಕಾರಿಗಳೇ ಕಾರ್ಯಕ್ರಮ ಮಾಡಬೇಕಾದಲ್ಲಿ ಶಾಸಕರಿಗೆ ತಿಳಿಸಬೇಕು ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಕೆಲ ಶಾಸಕರ ನಡುವೆ ವೈ ಮನಸ್ಸಿನ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಜನಸ್ಪಂದನಾ ಕಾರ್ಯಕ್ರಮ ಮಾಡಬೇಕಿರುವುದು ಶಾಸಕರು. ಕೆಲಸಗಳಾಗಿಲ್ಲ ಎಂದರೆ ಜನ ನಮ್ಮನ್ನ ಕೇಳುತ್ತಾರೆ. ಬಳಿಕ ನಾವು ಅಧಿಕಾರಿಗಳನ್ನು ಕೇಳ್ಳೋದು. ಆದರೆ ಶಾಸಕರನ್ನು ಬಿಟ್ಟು ಕಾರ್ಯಕ್ರಮ ಮಾಡಿದರೆ ಶಿಷ್ಟಾಚಾರ ಉಲ್ಲಂಘನೆ ಆಗುತ್ತದೆ. ಅಧಿಕಾರಿಗಳೇ ಕಾರ್ಯಕ್ರಮ ಮಾಡಬೇಕಾದಲ್ಲಿ ಶಾಸಕರಿಗೆ ತಿಳಿಸಬೇಕು. ಅವರಿಗೆ ತಿಳಿಸದೇ ಕಾರ್ಯಕ್ರಮಗಳನ್ನ ಮಾಡಿದರೆ ಶಾಸಕರ ಬೇರೆ ಕಾರ್ಯಕ್ರಮಗಳಿಗೆ ತೊಡಕಾಗಲಿದೆ.ಇದರಿಂದ ಜನಪ್ರತಿನಿಧಿಗಳ ಜೊತೆ ಸಮನ್ವಯ ಕಾಪಾಡಿಕೊಂಡು ಹೋಗಬೇಕು ಇಲ್ಲವಾದಲ್ಲಿ ಇದು ತಪ್ಪಾಗಲಿದೆ ಎಂದು ಹೇಳಿದರು.
ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳೇ ಇರುವುದರಿಂದ ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಕುರುಬಸಮುದಾಯ ಸೇರಿಸುವುದನ್ನು ನೇರವಾಗಿಯೇ ಅನುಷ್ಠಾನಕ್ಕೆ ತರಬಹುದು. ಅದು ಬಿಟ್ಟು ಹೋರಾಟ ಪ್ರಸ್ತಾಪ ಮಾಡುತ್ತಿರು ವುದೇಕೆ ಎಂದು ಪ್ರಶ್ನಿಸಿದರು.
ನಮ್ಮ ತಂದೆ ಸಿದ್ದರಾಮಯ್ಯ ಅವರು ಹಿಂದಿನಿಂದಲೂ ಕುರುಬ ಸಮುದಾಯವನ್ನು ಎಸ್ಟಿ ಮೀಸಲಾತಿಗೆ ಒಳಪಡಿಸುವ ಪರವಾಗಿಯೇ ಇದ್ದಾರೆ. ರಾಜ್ಯ ಮತ್ತುಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿಯವರು ನೇರವಾಗಿಯೇ ಇದನ್ನು ಅನುಷ್ಠಾನಕ್ಕೆ ತರಬಹುದು. ಅದನ್ನು ಬಿಟ್ಟು ಹೋರಾಟದ ಪ್ರಸ್ತಾಪ ಏಕೆ ಮಾಡುತ್ತಿದ್ದಾರೆ? ಇದನ್ನು ಇಟ್ಟುಕೊಂಡು ರಾಜಕೀಯ ಮಾಡಬೇಡಿ ಎಂದರು.
ಸಿದ್ದರಾಮಯ್ಯ ಚುನಾವಣೆಯಲ್ಲಿ ಹಣ ಹಂಚಿದ್ದಾರೆ ಎಂಬ ಸಂಸದ ಪ್ರತಾಪ್ ಸಿಂಹ ಆರೋಪಕುರಿತು ಪ್ರತಿಕ್ರಿಯಿಸಿ, ಬಿಜೆಪಿಗೆ ಹಣದಲ್ಲಿ ಚುನಾವಣೆ ನಡೆಸಿ ಅಭ್ಯಾಸವಿದೆ. ಅದನ್ನು ನಮ್ಮಮೇಲೆ ಆರೋಪ ಮಾಡ್ತಿದ್ದಾರೆ. ಉಪ ಚುನಾವಣೆಯಲ್ಲಿ ಏನಾಗಿದೆ ಎಂಬುದನ್ನು ನಾವು ಹಾಗೂ ಜನರು ನೋಡಿದ್ದೇವೆ ಎಂದರು.
ಲವ್ ಜಿಹಾದ್ ವಿಚಾರವಾಗಿ ತಂದೆಯ ಹೇಳಿಕೆಯನ್ನು ಸಮರ್ಥಿಸಿಕೊಂಡ ಯತೀಂದ್ರ, ಲವ್ ಜಿಹಾದ್ ಕಾನೂನಿಗೆ ತಮ್ಮ ತಂದೆ ವಿರೋಧ ಮಾಡಿರುವುದು ಸರಿಯಾಗಿಯೇ ಇದೆ. ಕೋಮು ದ್ವೇಷ ಬಿತ್ತುವುದಕ್ಕೆ ಈ ರೀತಿಯ ಪ್ರಸ್ತಾಪವನ್ನು ಬಿಜೆಪಿ ಮಾಡುತ್ತಿದೆ. 18 ವರ್ಷ ಮೇಲ್ಪಟ್ಟವರು ತಾವು ಇಷ್ಟಪಟ್ಟವರನ್ನು ಮದುವೆಯಾಗಲು ಸ್ವತಂತ್ರರು. ಬಿಜೆಪಿಯವರ ಆಗ್ರಹದಲ್ಲಿಕೋಮು ದ್ವೇಷ ಬಿಟ್ಟರೆ ಬೇರೇನು ಇಲ್ಲ ಎಂದು ಟೀಕಿಸಿದರು.