ಬೆಂಬಲ ಬೆಲೆಯಲ್ಲಿ ಭತ್ತದ ಖರೀದಿ ಅಸಂಭವ
ಭತ್ತ ಖರೀದಿ ಕೇಂದ್ರದಲ್ಲಿ ರೈತರ ಹೆಸರು ನೋಂದಣಿ ಶೂನ್ಯ
Team Udayavani, Dec 19, 2020, 12:53 AM IST
ಸಾಂದರ್ಭಿಕ ಚಿತ್ರ
ಉಡುಪಿ: ಕರಾವಳಿಯ ಎರಡೂ ಜಿಲ್ಲೆಗಳ ತಾಲೂಕು ಕೇಂದ್ರಗಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗಳಲ್ಲಿ ಭತ್ತ ಖರೀದಿ ಕೇಂದ್ರ ಕಾರ್ಯಪ್ರವೃತ್ತವಾಗಿದ್ದರೂ ಒಬ್ಬನೇ ಒಬ್ಬ ಕೃಷಿಕ ಹೆಸರು ನೋಂದಾಯಿಸಿಲ್ಲ. ಇದನ್ನು ಗಮನಿ ಸುವಾಗ ಈ ವರ್ಷವೂ ಸರಕಾರದ ಬೆಂಬಲ ಬೆಲೆಯಲ್ಲಿ ಒಂದು ಕೆಜಿ ಭತ್ತವೂ ಖರೀದಿಯಾಗುವ ಲಕ್ಷಣ ಗೋಚರಿಸುತ್ತಿಲ್ಲ.
ಎಲ್ಲ ತಾಲೂಕು ಕೇಂದ್ರಗಳಲ್ಲಿ ಕರ್ನಾಟಕ ರಾಜ್ಯ ಆಹಾರ ನಿಗಮದ ವತಿಯಿಂದ ಭತ್ತದ ಖರೀದಿ ಕೇಂದ್ರವನ್ನು ನ. 30ರಂದು ತೆರೆಯಲಾಗಿದ್ದು, ಭತ್ತ ನೀಡುವ ರೈತರ ಹೆಸರನ್ನು ನೋಂದಾಯಿಸಿಕೊಳ್ಳಲು ಓರ್ವ ಸಿಬಂದಿಯನ್ನು ನಿಯುಕ್ತಿಗೊಳಿ ಸಲಾಗಿದೆ.
“ಎ’ ಶ್ರೇಣಿ ಭತ್ತವನ್ನು ಕ್ವಿಂಟಾಲ್ಗೆ1,888 ರೂ.ಗಳಲ್ಲಿ, “ಬಿ’ ಶ್ರೇಣಿ ಸಾಮಾನ್ಯ ಭತ್ತವನ್ನು ಕ್ವಿಂಟಾಲ್ಗೆ 1,868 ರೂ.ನಲ್ಲಿ ಖರೀದಿ ಸಲು ಸರಕಾರ ಬೆಂಬಲ ಬೆಲೆ ಸೂಚಿಸಿದೆ. ರೈತರು ಕರೆ ಮಾಡಿ ವಿಚಾರಿಸುತ್ತಿದ್ದಾರೆಯೇ ವಿನಾ ನೋಂದಾಯಿಸಿಕೊಂಡಿಲ್ಲ. ಡಿ. 20ರಿಂದ ಮೊದಲು ಖರೀದಿಗೆ ದಿನಾಂಕ ನಿಗದಿಯಾಗಿದ್ದರೂ ಸರಕಾರ ಡಿ. 8ರಿಂದಲೇ ಖರೀದಿಗೆ ಅವಕಾಶ ನೀಡಿದೆ. ನೋಂದಣಿಯೇ ಆಗದಿರುವಾಗ ಖರೀದಿ ಹೇಗೆ ಸಾಧ್ಯ?
ಶೇ. 98 ಭತ್ತ ಮಾರಾಟವಾಗಿದೆ
ರೈತರು ತಿಳಿಸುವಂತೆ ಶೇ. 98 ಭತ್ತವನ್ನು ಈಗಾಗಲೇ ಭತ್ತದ ಮಿಲ್ಲುಗಳಿಗೆ ಮಾರಾಟ ಮಾಡಿಯಾ ಗಿದೆ. ಹಣ ಅಗತ್ಯವಿರುವಾಗ ನಾವು ಭತ್ತವನ್ನು ಇಟ್ಟುಕೊಂಡಿರಲು ಸಾಧ್ಯವೆ? ಎಂದು ಪ್ರಶ್ನಿಸುತ್ತಿದ್ದಾರೆ. ರೈತರು ಕೊಡುವ ಎಲ್ಲ ರೀತಿಯ ಭತ್ತವನ್ನೂ ಖರೀದಿ ಕೇಂದ್ರದವರು ಖರೀದಿಸುವುದಿಲ್ಲ. ಸರಕಾರದಿಂದ ಬೀಜ ಪಡೆದ ಎಂಒ4, ಜ್ಯೋತಿ ಯಂತಹ ಆಯ್ದ ಭತ್ತವನ್ನಷ್ಟೇ ಖರೀದಿ ಸುತ್ತಾರೆ. ನಾವು ಸೆಪ್ಟಂಬರ್ನಲ್ಲಿಯೇ ಖರೀದಿ ಆರಂಭಿಸಲು ಬೇಡಿಕೆ ಸಲ್ಲಿಸಿದ್ದೆವು. ಹಾಗೆ ಮಾಡದೆ ಡಿಸೆಂಬರ್ನಲ್ಲಿ ಕೇಂದ್ರ ಆರಂಭಿಸಿದರೆ ಯಾರು ಭತ್ತ ಕೊಡುತ್ತಾರೆ ಎಂದು ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಮಾರುಕಟ್ಟೆ ಬೆಲೆಯೇ ಹೆಚ್ಚು
ನಾನೇ ಡಿ. 11ರಂದು ಕೆಂಪಕ್ಕಿಯನ್ನು ಕೆ.ಜಿ.ಗೆ 20 ರೂ.ನಲ್ಲಿ (ಕ್ವಿಂಟಾಲ್ಗೆ 2,000 ರೂ.) ಮಾರಾಟ ಮಾಡಿದ್ದೇನೆ. ನಾನು ಇದುವರೆಗೆ 200 ಕ್ವಿಂಟಾಲ್ ಭತ್ತವನ್ನು ಕೊಟ್ಟಿದ್ದೇನೆ. ಸರಕಾರದ ಬೆಂಬಲ ಬೆಲೆಗಿಂತ ಹೆಚ್ಚು ದರದಲ್ಲಿ ನಾವು ಮಾರಾಟ ಮಾಡುವಾಗ ಖರೀದಿ ಕೇಂದ್ರಕ್ಕೆ ಯಾರು ಕೊಡುತ್ತಾರೆ? ನಾವೀಗ ಕಾರ್ಲಕಜೆ ಎಂಬ ಬ್ರ್ಯಾಂಡ್ ಪ್ರಚುರಪಡಿಸುತ್ತಿದ್ದೇವೆ. ಇದು ಶಾಸಕ ಸುನಿಲ್ ಕುಮಾರ್ ಕನಸು. ಇಂತಹ ಅಕ್ಕಿಯನ್ನು ಸರಕಾರ ಖರೀದಿಸುವುದೂ ಇಲ್ಲ. ಭತ್ತವನ್ನು ಖರೀದಿಸಿ ಅಕ್ಕಿ ಮಾಡುವಾಗ ಒಂದು ವರ್ಷ ತಗಲುತ್ತದೆ. ಅನಂತರ ಆರು ತಿಂಗಳು ದಾಸ್ತಾನು ಇರಬೇಕು. ನಮ್ಮ ಅಕ್ಕಿ ಅಷ್ಟು ದೀರ್ಘ ಕಾಲ ಉಳಿಯುವುದಿಲ್ಲ ಎಂದು ಸರಕಾರಿ ಅಧಿಕಾರಿಗಳ ವಾದವಿದೆ. ಇದರ ಒಳಗುಟ್ಟು ನಮಗೆ ಗೊತ್ತಿಲ್ಲ ಎಂದು ಸ್ವತಃ ಭತ್ತದ ಕೃಷಿಕರಾದ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ನಿಟ್ಟೆ ನವೀನ್ಚಂದ್ರ ಜೈನ್ ಆರೋಪಿಸುತ್ತಾರೆ.
ನ. 30ರಿಂದ ಕರಾವಳಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಭತ್ತದ ಖರೀದಿ ಕೇಂದ್ರವನ್ನು ಆರಂಭಿಸಿದ್ದೇವೆ. ಆದರೆ ಇದುವರೆಗೆ ರೈತರಾರೂ ನೋಂದಾಯಿಸಿಲ್ಲ.
– ಅನುರಾಧಾ, ಜಿಲ್ಲಾ ವ್ಯವಸ್ಥಾಪಕಿ, ಕರ್ನಾಟಕ ರಾಜ್ಯ ಆಹಾರ ನಿಗಮ, ಮಂಗಳೂರು.
ಸರಕಾರದ ಖರೀದಿ ಕೇಂದ್ರಕ್ಕಿಂತ ಹೆಚ್ಚಿಗೆ ದರ ಮಿಲ್ಲುಗಳಲ್ಲಿ ಸಿಗುವಾಗ ಯಾವ ರೈತರು ಖರೀದಿ ಕೇಂದ್ರಕ್ಕೆ ಮಾರುತ್ತಾರೆ? ಈಗಾಗಲೇ ಶೇ. 98 ಅಂಶ ಭತ್ತ ಮಾರಾಟವಾಗಿದೆ. ಸೆಪ್ಟಂಬರ್ನಲ್ಲೇ ಖರೀದಿ ಕೇಂದ್ರ ಆರಂಭಿಸುವಂತೆ ಮನವಿ ಸಲ್ಲಿಸಿದ್ದೆವು. ಡಿಸೆಂಬರ್ನಲ್ಲಿ ಆರಂಭಿಸಿದರೆ ಏನು ಮಾಡುವುದು? ಅಲ್ಲದೆ ಅವರು ಎಲ್ಲ ಬಗೆಯ ಭತ್ತವನ್ನು ಖರೀದಿಸುವುದೂ ಇಲ್ಲ.
– ನಿಟ್ಟೆ ನವೀನ್ಚಂದ್ರ ಜೈನ್, ಪ್ರಗತಿಪರ ಭತ್ತದ ಕೃಷಿಕರು, ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ