ತನ್ನ ನಿಶ್ಚಿತಾರ್ಥ ದಿನದಂದು ಶಾಂಭವಿ ಹೊಳೆಗೆ ಬಿದ್ದವರನ್ನು ರಕ್ಷಿಸಿ ಸಾಹಸ ಮೆರೆದ ಶಮಂತ್ ಗೌಡ
ಮೂಲ್ಕಿಯ ಚಿತ್ರಾಪು ರೆಸಾರ್ಟ್ ಬಳಿಯಲ್ಲಿ ನಡೆದಿದ್ದ ಘಟನೆ
Team Udayavani, Jan 2, 2021, 7:33 PM IST
ಹಳೆಯಂಗಡಿ: ಕಡಬದಿಂದ ಮೂಲ್ಕಿಯ ಚಿತ್ರಾಪುರ ಬಳಿಯ ಖಾಸಗಿ ರೆಸಾರ್ಟ್ಗೆ ಬಂದಿದ್ದ ಕುಟುಂಬವೊಂದರ ನಾಲ್ವರು ಸದಸ್ಯರು ಶಾಂಭವಿ ಹೊಳೆಯಲ್ಲಿ ಮುಳುಗುತ್ತಿದ್ದ ವೇಳೆ ಅವರನ್ನು ರಕ್ಷಿಸಿದ ಮೂಲ್ಕಿಯ ಮಂತ್ರ ಸರ್ಫಿಂಗ್ ಕ್ಲಬ್ನ ಶಮಂತ್ ಗೌಡ ಅಂದು ತನ್ನ ನಿಶ್ಚಿತಾರ್ಥದ ದಿನದಲ್ಲಿಯೂ ಸಾಹಸ ಮೆರೆದಿದ್ದು ಇದೀಗ ಅವರು ರಕ್ಷಣೆ ಮಾಡುವ ವಿಡಿಯೋ ವೈರಲ್ ಆಗಿದೆ.
ಶಾಂಭವಿ ಹೊಳೆಯಲ್ಲಿ ಈಜಾಡಲು ತೆರಳಿದ್ದ ಕುಟುಂಬವೊಂದರ ಇಬ್ಬರು ಮಕ್ಕಳನ್ನು ಹಾಗೂ ಇಬ್ಬರು ಮಹಿಳೆಯರು ನೀರಿನಲ್ಲಿ ಮುಳುಗುತ್ತಿದ್ದ ವಿಷಯ ತಿಳಿದ ಶಮಂತ್ ತನ್ನ ಕ್ಲಬ್ನ ಸಹಪಾಠಿ ನಿಹಾಲ್ ಜೊತೆಗೂಡಿ ಸ್ವತಃ ನೀರಿಗೆ ಹಾರಿ ರಕ್ಷಣೆ ಮಾಡಿದ್ದಾರೆ, ಆದರೆ ನೀರಿನಲ್ಲಿದ್ದ ಜಯರಾಮ ಗೌಡ ಅವರನ್ನು ರಕ್ಷಿಸಿದ್ದರೂ ಸಹ ಅವರ ಪ್ರಾಣ ಉಳಿಸಲಾಗಲಿಲ್ಲ,
ಇದನ್ನೂ ಓದಿ:ತಾಯಿ ಮೊಬೈಲ್ ಕಿತ್ತುಕೊಂಡರೆಂದು ಬಾತ್ ರೂಮ್ ನಲ್ಲಿ ಚಿಲಕ ಹಾಕಿ ಕುಳಿತ ಬಾಲಕ
ಡಿ.31ರಂದು ಶಾಂಭವಿ ಹೊಳೆಯು ಸಮುದ್ರ ಸಂಗಮ ಸ್ಥಳವಾದ ಅಳಿವೆ ಬಾಗಿಲಿನ ಬಳಿಯ ಸಸಿಹಿತ್ಲು ಬೀಚ್ಗೆ ಸಂಪರ್ಕಿಸುವ ಹೊಳೆಯಲ್ಲಿ ಈ ಘಟನೆ ನಡೆದಿತ್ತು.
ರಕ್ಷಣೆ ಮಾಡಿ ಸಾಹಸ ಮೆರೆದ ಶಮಂತ್ ಅವರು ಅಂದೇ ಡಿ.31ರಂದು ರಾತ್ರಿ ತಮ್ಮ ವೈವಾಹಿಕ ಜೀವನದ ಸಂಗಾತಿಯನ್ನು ನಿಶ್ಚಿತಾರ್ಥವಾಗುವ ತಯಾರಿಯಲ್ಲಿದ್ದರೂ ಸಹ ಕೆಲವೇ ಗಂಟೆಗಳ ಮೊದಲು ಅಸಹಾಯಕರ ಧ್ವನಿಗೆ ಆಸರೆಯಾಗಿ ಅಪಾಯವನ್ನು ಲೆಕ್ಕಿಸದೇ ನೀರಿಗಿಳಿದು ಸಾಹಸ ಮೆರೆದಿದ್ದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಇದೀಗ ಅವರು ಕಾರ್ಯಾಚರಣೆ ನಡೆಸಿದ ವಿಡಿಯೋ ಭಾರೀ ಸದ್ದು ಮಾಡುತ್ತಿದೆ.