ಕೋಳಿ, ಕಾಡುಹಂದಿ ಸತ್ತರೆ ತಿಳಿಸಿ: ಜಗದೀಶ್
Team Udayavani, Jan 9, 2021, 3:30 AM IST
ಉಡುಪಿ, ಜ. 8: ಹಕ್ಕಿ ಜ್ವರದ ಬಗ್ಗೆ ಎಚ್ಚರದಿಂದ ಇರುವಂತೆ ಸರಕಾರ ಸೂಚನೆ ನೀಡಿದ್ದು, ಜಿಲ್ಲೆಯ ಗಡಿಭಾಗಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೋಳಿ ಸಾಗಿಸುವ ವಾಹನಗಳನ್ನು ತಪಾಸಣೆ ಮಾಡಲಾಗುವುದು. ಕೋಳಿ ಅಥವಾ ಕಾಡುಹಂದಿ ಸಾವನ್ನಪ್ಪಿದರೆ ತತ್ಕ್ಷಣ ಕಂಟ್ರೋಲ್ ರೂಂ 0820-2534024ಗೆ ಸಂಪರ್ಕಿಸಿ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬೇರೆ ಜಿಲ್ಲೆಗಳಿಂದ ಬರುವ ಕೋಳಿ, ಹಕ್ಕಿಗಳ ಬಗ್ಗೆ ಎಚ್ಚರ ವಹಿಸಬೇಕು. ಈ ರೋಗ ಬೇಗನೇ ಹರಡುವುದರಿಂದ ಇದನ್ನು ತಡೆಗಟ್ಟುವುದು ಅತೀ ಅಗತ್ಯವಾಗಿದೆ. ಜಿಲ್ಲೆಯಲ್ಲಿರುವ 147 ಪೌಲಿóಫಾರಂಗಳಿಗೆ ಅಧಿಕಾರಿಗಳು ಭೇಟಿ ನೀಡಿ ಶುಚಿತ್ವ ಕಾಪಾಡುವಂತೆ ಸೂಚನೆ ನೀಡಲಿದ್ದಾರೆ. ಸೋಡಿಯಂ ಕ್ಲೋರೈಡ್ ಹಾಕಿ ಪ್ರತಿದಿನ ಶುಚಿ ಮಾಡುವಂತೆ ಸೂಚಿಸಲಾಗಿದೆ. ಪ್ರತಿದಿನ 5 ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
ಅಧಿಕಾರಿಗಳಿಗೆ ತರಬೇತಿ :
ಪೌಲಿó ಫಾರಂನ ಮಾಲಕರು ಹಾಗೂ ಮನೆಯಲ್ಲಿ ಕೋಳಿಗಳನ್ನು ಸಾಕುವವರು ಆ ಕೋಳಿಗಳು ಸಾವನ್ನಪ್ಪಿದರೆ ತತ್ಕ್ಷಣ ಕಂಟ್ರೋಲ್ ರೂಂಗೆ ಮಾಹಿತಿ ನೀಡಬೇಕು. ಮಾದರಿ ಪರೀಕ್ಷೆಯಲ್ಲಿ ಪಾಸಿಟಿವ್ ಕಂಡುಬಂದರೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಈಗಾಗಲೇ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ ಎಂದರು.
ಸಕಲ ವ್ಯವಸ್ಥೆ :
ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳ ಜತೆ ಸೂಕ್ತ ಔಷಧ ವ್ಯವಸ್ಥೆಯನ್ನೂ ಮಾಡಲಾಗಿದೆ. ಉಡುಪಿ ಜಿಲ್ಲೆಗೆ ದಾವಣಗೆರೆ, ಮೈಸೂರು ಭಾಗದಿಂದ ಕೋಳಿಗಳು ಆಗಮಿಸುತ್ತಿದ್ದು, ಈ ಬಗ್ಗೆ ಎಚ್ಚರದಿಂದ ಇರುವಂತೆ ಎಲ್ಲ ಅಧಿಕಾರಿಗಳಿಗೂ ತಿಳಿಸಲಾಗಿದೆ ಎಂದರು.