ಕಲ್ಲು ಗಣಿಗಾರಿಕೆಯಲ್ಲಿ ಡೈನಾಮೈಟ್ ಸ್ಫೋಟ 7ಕ್ಕೂ ಹೆಚ್ಚು ಕಾರ್ಮಿಕರು ಬಲಿ
Team Udayavani, Jan 22, 2021, 12:09 AM IST
ಶಿವಮೊಗ್ಗ: ಕಲ್ಲು ಗಣಿಗಾರಿಕೆಯಲ್ಲಿ ಉಂಟಾದ ಸ್ಫೋಟದಿಂದ 7ಕ್ಕೂ ಹೆಚ್ಚು ಬಿಹಾರಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ ಅಬ್ಬಲಗೆರೆ ಹುಣಸೋಡು ಬಳಿ ನಡೆದಿದೆ.
ನಿಗೂಢ ಶಬ್ದ ಮೂಡಿಬಂದ ಕೆಲವೇ ಕ್ಷಣಗಳಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಕಲ್ಲುಗಳನ್ನು ಬ್ಲಾಸ್ಟ್ ಮಾಡಲು 50ಕ್ಕೂ ಹೆಚ್ಚು ಡೈನಾಮೈಟ್ ಬಾಕ್ಸ್, ಟನ್ಗಟ್ಟಲೇ ಜಿಲೆಟಿನ್ ದಾಸ್ತಾನು ಮಾಡಲಾಗಿತ್ತು. ಅದು ಸ್ಫೋಟಗೊಂಡು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸ್ಫೋಟದ ತೀವ್ರತೆಗೆ ಎಲ್ಲ ದೇಹಗಳು ಛಿದ್ರಗೊಂಡಿವೆ. ಸ್ಫೋಟದ ತೀವ್ರತೆಗೆ ಒಂದೂವರೆ ಕಿ.ಮೀ ವ್ಯಾಪ್ತಿಯಲ್ಲಿ ಧೂಳು ಆವರಿಸಿದ್ದು ಅಕ್ಕಪಕ್ಕದ ಗ್ರಾಮಗಳಲ್ಲಿ ವಿದ್ಯುತ್ ಸಂಪಕ ಕಡಿತಗೊಂಡಿದೆ.
ಇದನ್ನೂ ಓದಿ:ಮಲೆನಾಡಿನಲ್ಲಿ ಭಾರೀ ಶಬ್ದ; ಕಂಗಾಲಾಗಿ ಹೊರ ಬಂದ ಜನ
ಇಡೀ ಜಿಲ್ಲೆಯಲ್ಲಿ ಅಷ್ಟೇ ಅಲ್ಲದೇ ಚಿಕ್ಕಮಗಳೂರು, ಶಿರಸಿ, ಸಿದ್ದಾಪುರ, ದಾವಣಗೆರೆಯಲ್ಲೂ ಕೇಳಿಬಂದ ಶಬ್ದಕ್ಕೆ ಇದು ಕಾರಣವಿರಬಹುದೇ ಎಂಬ ಶಂಕೆ ವ್ಯಕ್ತವಾಗಿದೆ. ಅಥವಾ ಭಾರೀ ಶಬ್ದದ ತೀವ್ರತೆಗೆ ಡೈನಾಮೈಟ್ ಬ್ಲಾಸ್ ಆಗಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಕಲ್ಲುಗಣಿಗಾರಿಕೆಯಲ್ಲಿ ನಡೆದಿರುವ ಸ್ಫೋಟದ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಿದೆ. ಸ್ಫೋಟಗೊಂಡ ಪ್ರದೇಶದಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಬೆಂಗಳೂರಿನಿಂದ ವಿಶೇಷ ತಂಡ ಬರಲಿದ್ದು ಸ್ಫೋಟಕ್ಕೆ ಸ್ಪಷ್ಟ ಕಾರಣ ತಿಳಿಯಲಿದೆ. ಕ್ವಾರಿ ಮಾಲೀಕನ ಬಗ್ಗೆ ಮಾಹಿತಿ ನಂತರ ತಿಳಿಸಲಾಗುವುದು.
– ಕೆ.ಬಿ.ಶಿವಕುಮಾರ್, ಜಿಲ್ಲಾಧಿಕಾರಿ
ಜಿಲ್ಲಾಡಳಿತದ ವಿರುದ್ಧ ಆಕ್ರೋಶ :
ಕಲ್ಲುಗಣಿಗಾರಿಕೆಯಲ್ಲಿ ಸ್ಫೋಟ ಸಂಭವಿಸಿದ ಹಿನ್ನೆಲೆ ಅಕ್ಕಪಕ್ಕದ ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಹುಣಸೋಡು ಗ್ರಾಮಸ್ಥರು ಅಧಿಕಾರಿಗಳಿಗೆ ಘೇರಾವ್ ಹಾಕಿ ನಮ್ಮನ್ನು ಸಾಯಿಸಿಬಿಡಿ ಎಂದು ಆಕ್ರೋಶವ್ಯಕ್ತಪಡಿಸುತ್ತಿದ್ದು ಕಂಡುಬಂತು.