ಒತ್ತಡಕ್ಕೆ ಮಣಿದ ರಾಜ್ಯಸರ್ಕಾರ: ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಅವಕಾಶ ನೀಡಲು ಮಾರ್ಗಸೂಚಿ
Team Udayavani, Feb 3, 2021, 6:16 PM IST
ಬೆಂಗಳೂರು: ಕನ್ನಡ ಚಿತ್ರರಂಗದ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ. 100 ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ನೆರವಾಗುವಂತಹ ಮಾರ್ಗಸೂಚಿ ಸಿದ್ದಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದೆ.
“ಮಾರ್ಕೆಟ್ ನಲ್ಲಿ ಗಿಜಿ ಗಿಜಿ ಜನ, ಬಸ್ ನಲ್ಲೂ ಫುಲ್ ರಶ್, ಚಿತ್ರಮಂದಿರಕ್ಕೆ ಮಾತ್ರ ಏಕೆ 50% ನಿರ್ಬಂಧ?” ಎಂಬ ಒಕ್ಕಣೆಯಲ್ಲಿ “ಉದಯವಾಣಿ” ಇಂದು ಅಭಿಯಾನ ಆರಂಭಿಸಿತ್ತು. ನಟ ಧ್ರುವ ಸರ್ಜಾ ಅವರು ಇದೇ ಪೋಸ್ಟರ್ ನ್ನು ಟ್ವೀಟ್ ಮಾಡಿದ್ದರು. ಇದಾದ ಬಳಿಕ ಚಿತ್ರರಂಗದ ಹಲವರು ಚಿತ್ರ ಮಂದಿರದಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡಲು ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರಕ್ಕೆ ಒತ್ತಾಯ ನಡೆಸಿದ್ದರು. ಇದೀಗ ಸರ್ಕಾರ ಒತ್ತಡಕ್ಕೆ ಮಣಿದಿದ್ದು ಹೊಸ ಮಾರ್ಗಸೂಚಿ ರಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಈ ಕುರಿತು ಮಾಹಿತಿ ನೀಡಿದ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಮಾರ್ಗಸೂಚಿ ಬದಲಾಯಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜೊತೆಗೆ ಮುಂಜಾಗೃತ ಕ್ರಮಗಳ ಬಗ್ಗೆ ಕ್ರಮವಹಿಸುವಂತೆ ತಿಳಿಸಲಾಗಿದೆ. ನಾಳೆಯೇ (ಫೆ.4) ರಾಜ್ಯಸರ್ಕಾರದಿಂದ ಹೊಸ ಮಾರ್ಗಸೂಚಿ ಹೊರಡಿಸಲಾಗುವುದು ಎಂದರು.
ಇದನ್ನೂ ಓದಿ: ಚಿತ್ರೋದ್ಯಮಕ್ಕೆ ಯಾಕೆ ನಿರ್ಬಂಧ? ಸರ್ಕಾರವನ್ನು ಪ್ರಶ್ನಿಸಿದ ಸ್ಯಾಂಡಲ್ ವುಡ್ ಸ್ಟಾರ್ಸ್